Facebook ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ ಕರ್ನಾಟಕ ಹೈಕೋರ್ಟ್; ಕಾರಣ ಏನು?
ಸಾಮಾಜಿಕ ಜಾಲತಾಣಗಳು ಇಂದು ಎಷ್ಟು ಅಗತ್ಯವೂ ಅಷ್ಟೇ ಡೇಂಜರ್ ಸಹ ಹೌದು. ಇವುಗಳ ಮಿತಿ ಮೀರಿದ ಬಳಕೆ ಹಾಗೂ ದುರುಪಯೋಗದಿಂದ ಈಗಾಗಲೇ ಸಾಕಷ್ಟು ಜನರು ಪೊಲೀಸರ ಲಾಠಿ ರುಚಿ ನೋಡಿದ್ದಾರೆ. ಅಷ್ಟು ಮಾತ್ರವಲ್ಲ ಜೈಲಿನಲ್ಲಿಯೂ ಸಮಯ ಕಳೆಯುವಂತಾಗಿದೆ. ಈ ನಡುವೆ ಕರ್ನಾಟಕ ಹೈಕೋರ್ಟ್ ಫೇಸ್ಬುಕ್ಗೆ ಗಂಭೀರ ಎಚ್ಚರಿಕೆ ನೀಡಿದೆ.
ಹೌದು, ಭಾರತದಲ್ಲಿ ಸಾಮಾಜಿಕ ಮಾಧ್ಯಮದ ದೊಡ್ಡ ಪ್ಲಾಟ್ಫಾರ್ಮ್ ಆಗಿರುವ ಫೇಸ್ಬುಕ್ ಅನ್ನು ಮುಚ್ಚುವ ಆದೇಶವನ್ನು ಹೊರಡಿಸುವ ಬಗ್ಗೆ ಕರ್ನಾಟಕ ಹೈಕೋರ್ಟ್ ಫೇಸ್ಬುಕ್ಗೆ ಎಚ್ಚರಿಕೆ ರವಾನಿಸಿದೆ. ಅಷ್ಟಕ್ಕೂ ಫೇಸ್ಬುಕ್ ನಿಂದ ಆದ ಸಮಸ್ಯೆ ಏನು?, ಕರ್ನಾಟಕ ಹೈ ಕೋರ್ಟ್ ಯಾಕೆ ಈ ರೀತಿ ಹೇಳಿಕೆ ನೀಡಿದೆ ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಈ ಲೇಖನ ಓದಿರಿ.

ಫೇಸ್ಬುಕ್ಗೆ ಎಚ್ಚರಿಕೆ : ಮಂಗಳೂರು ಸಮೀಪದ ಬಿಕರ್ನಕಟ್ಟೆ ನಿವಾಸಿ ಕವಿತಾ ಎಂಬುವರು ಸಲ್ಲಿಸಿದ ಅರ್ಜಿಯನ್ನು ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ಪೀಠವು ಫೇಸ್ಬುಕ್ಗೆ ಈ ಎಚ್ಚರಿಕೆ ನೀಡಿದೆ. ಅಗತ್ಯ ಮಾಹಿತಿಯೊಂದಿಗೆ ಸಂಪೂರ್ಣ ವರದಿಯನ್ನು ನ್ಯಾಯಾಲಯಕ್ಕೆ ಒಂದು ವಾರದಲ್ಲಿ ಸಲ್ಲಿಸಬೇಕು ಎಂದು ಫೇಸ್ಬುಕ್ಗೆ ತಿಳಿಸಿದೆ. ಈ ಬಗ್ಗೆ ಸುದ್ದಿ ಸಂಸ್ಥೆ ಐಎಎನ್ಎಸ್ನ ವರದಿ ಮಾಡಿದೆ.
ಸುಳ್ಳು ಪ್ರಕರಣ ಸಂಬಂಧ ಭಾರತೀಯ ಪ್ರಜೆಯನ್ನು ಬಂಧಿಸಿರುವ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಮಾಹಿತಿಯನ್ನು ನೀಡಬೇಕು ಹಾಗೂ ಮಂಗಳೂರು ಪೊಲೀಸರು ಕೂಡ ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದ್ದು, ಈ ಸಂಬಂಧದ ನ್ಯಾಯಾಲಯ ವಿಚಾರಣೆಯನ್ನು ಜೂನ್ 22 ಕ್ಕೆ ಮುಂದೂಡಿಕೆ ಮಾಡಿದೆ.
ಫೇಸ್ಬುಕ್ನಲ್ಲಾದ ತೊಂದರೆ ಏನು?: ಮಂಗಳೂರಿನ ಕವಿತಾ ಅವರ ಪತಿ ಶೈಲೇಶ್ ಕುಮಾರ್ (52) ಅವರು ಸೌದಿ ಅರೇಬಿಯಾದಲ್ಲಿ 25 ವರ್ಷಗಳಿಂದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅವರು 2019 ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಅನ್ನು ಬೆಂಬಲಿಸಿ ಫೇಸ್ಬುಕ್ನಲ್ಲಿ ಮೆಸೆಜ್ ಒಂದನ್ನು ಹಾಕಿದ್ದಾರೆ. ದುರಂತ ಏನೆಂದರೆ ಅಪರಿಚಿತರು ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಈ ಸಂಬಂಧ ಕೆಟ್ಟ ಪೋಸ್ಟ್ ಶೇರ್ ಮಾಡಿದ್ದಾರೆ.

ಸೌದಿ ಅರೇಬಿಯಾ ಮತ್ತು ಇಸ್ಲಾಂ ರಾಜನ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ಗಳು ಇದರಲ್ಲಿದ್ದು, ಇದರಿಂದಾಗಿ ಸೌದಿ ಅರೇಬಿಯಾದಲ್ಲಿ ಶೈಲೇಶ್ ಕುಮಾರ್ ಜೈಲು ಪಾಲಾಗಿದ್ದಾರೆ. ಆದರೆ ಈ ಸಂಬಂಧ ಕವಿತಾ ಮಂಗಳೂರಿನಲ್ಲಿ ಪೊಲೀಸ್ ದೂರು ದಾಖಲಿಸಿದ್ದರು. ವಿಷಯ ಏನೆಂದರೆ ಈ ಪ್ರಕರಣದ ತನಿಖೆಗೆ ರಾಜ್ಯ ಪೊಲೀಸರೊಂದಿಗೆ ಅಸಹಕಾರದ ಆರೋಪವನ್ನು ಫೇಸ್ಬುಕ್ ಎದುರಿಸುತ್ತಿರುವುದು ತಿಳಿದುಬಂದಿದೆ.
ಇನ್ನು ತನಿಖೆ ಕೈಗೆತ್ತಿಕೊಂಡಿದ್ದ ಮಂಗಳೂರು ಪೊಲೀಸರು ಫೇಸ್ಬುಕ್ಗೆ ಪತ್ರ ಬರೆದು ನಕಲಿ ಫೇಸ್ಬುಕ್ ಖಾತೆ ತೆರೆದಿರುವ ಬಗ್ಗೆ ಮಾಹಿತಿ ಕೇಳಿದ್ದರು. ಆದರೆ, ಫೇಸ್ಬುಕ್ ಪೊಲೀಸರಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ. 2021 ರಲ್ಲಿ ಅರ್ಜಿದಾರರು ತನಿಖೆಯ ವಿಳಂಬವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಷ್ಟು ಮಾತ್ರವಲ್ಲ ಪತಿಯನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಕವಿತಾ ಕೇಂದ್ರ ಸರ್ಕಾರಕ್ಕೂ ಸಹ ಪತ್ರವನ್ನೂ ಬರೆದಿದ್ದರು. ಆದರೆ ಇದ್ಯಾವುದು ಪ್ರಯೋಜನಕ್ಕೆ ಬರುತ್ತಿಲ್ಲ. ಈ ಕಾರಣದಿಂದಾಗಿಯೇ ಕರ್ನಾಟಕ ಹೈಕೋರ್ಟ್ ಫೇಸ್ಬುಕ್ಗೆ ಎಚ್ಚರಿಕೆ ನೀಡಿದೆ.

ಫೇಸ್ಬುಕ್ ಪೋಸ್ಟ್ ಮಾಡುವಾಗ ಇರಲಿ ಎಚ್ಚರ: ಫೇಸ್ಬುಕ್ನಲ್ಲಿ ಆಕ್ಷೇಪಾರ್ಹ ಬರಹಗಳನ್ನು ನಿಷೇಧಿಸಲಾಗಿದ್ದರೂ ಸಹ ಕೆಲವರು ಆಗ್ಗಾಗೆ ಸಮಾಜದಲ್ಲಿ ಗೊಂದಲ ಉಂಟು ಮಾಡಲೋ ಅಥವಾ ಇನ್ಯಾವುದೋ ತಮ್ಮ ವೈಯಕ್ತಿಕ ವಾಂಛೆ ತೀರಿಸಿಕೊಳ್ಳಲು ಈ ರೀತಿಯ ಕೆಟ್ಟ ಪೋಸ್ಟ್ಗಳನ್ನು ಹಾಕಿ ಅಮಾಯಕರು ಜೈಲು ಪಾಲಾಗುವಂತೆ ಮಾಡುತ್ತಿದ್ದಾರೆ. ಅಷ್ಟು ಮಾತ್ರವಲ್ಲ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಸಮಾಜದ ವಿರುದ್ಧದ ಪೋಸ್ಟ್ ಹಾಕಿದರೆ ಸರ್ಕಾರ ಸಹ ಇದನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷೆ ನೀಡುತ್ತದೆ ಎಂಬುದು ನಿಮ್ಮ ಗಮನಕ್ಕಿರಲಿ.


Click it and Unblock the Notifications








