ಸರ್ಕಾರದಿಂದ SATHI ಆಪ್ ಲಾಂಚ್: 14 ಕೋಟಿ ರೈತರಿಗೆ ಆಗುವ ಲಾಭ ಏನು?
ಭಾರತದ ಕೃಷಿ ಪ್ರಧಾನ ರಾಷ್ಟ್ರ, ಇಲ್ಲಿ ಕೋಟ್ಯಂತರ ಜನರು ಕೃಷಿಯನ್ನೇ ಅವಲಂಬನೆ ಮಾಡಿಕೊಂಡು ಜೀವನ ನಡೆಸುತ್ತಾರೆ. ಅದರಂತೆ ಈಗಾಗಲೇ ಸಾಕಷ್ಟು ಆಪ್ಗಳು ಹಾಗೂ ವೆಬ್ ಪೋರ್ಟಲ್ಗಳು ತಮ್ಮದೇ ಆದ ರೀತಿಯಲ್ಲಿ ರೈತರಿಗೆ ಹಾಗೂ ಅವರ ಬೆಳೆಗೆ ಸಹಕಾರಿಯಾಗಿವೆ. ಈ ನಡುವೆ ಕೇಂದ್ರ ಸರ್ಕಾರದಿಂದ ಮತ್ತೊಂದು ವಿಶೇಷ ಆಪ್ ಹಾಗೂ ಪೋರ್ಟಲ್ ಅನ್ನು ಅನಾವರಣ ಮಾಡಲಾಗಿದೆ.
ಹೌದು, ರೈತರ ಶ್ರೇಯೋಭಿವೃದ್ಧಿ ಕಾರಣಕ್ಕೆ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು SATHI (Seed Traceability, Authentication and Holistic Inventory) ಪೋರ್ಟಲ್ ಮತ್ತು ಮೊಬೈಲ್ ಆಪ್ ಅನ್ನು ಲಾಂಚ್ ಮಾಡಿದ್ದಾರೆ. ಈ ಮೂಲಕ ಬೀಜ ಉತ್ಪಾದನೆ, ಗುಣಮಟ್ಟ ಗುರುತಿಸುವಿಕೆ ಮತ್ತು ಪ್ರಮಾಣೀಕರಣದ ಸಮಸ್ಯೆಗಳನ್ನು ಪರಿಹರಿಸಲು SATHI ಸಹಾಯ ಮಾಡಲಿದೆ. ಹಾಗಿದ್ರೆ, ಇದರ ಪ್ರಮುಖ ಉದ್ದೇಶ ಏನು?, ಇದನ್ನು ಬಳಕೆ ಮಾಡುವುದು ಹೇಗೆ ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಪಿಎಮ್ ಕಿಸಾನ್ 14 ನೇ ಕಂತಿಗಾಗಿ ಕಾಯುತ್ತಿದ್ದ ರೈತರಿಗೆ ಇದೊಂದು ಶುಭಸುದ್ದಿಯಾಗಿದೆ. ಈ ಹಣವನ್ನು ಮೇ ಕೊನೆಯ ವಾರ ಅಥವಾ ಜೂನ್ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈ ಮೊದಲೇ ದೇಶದ ರೈತರ ನೆರವಿಗೆ ಹೊಸ ಹೆಜ್ಜೆ ಇರಿಸಿರುವ ಸರ್ಕಾರ, ಈ ಮೂಲಕ ದೇಶದ 14 ಕೋಟಿ ರೈತರಿಗೆ ಸಹಾಯ ಮಾಡಲಿದೆ. ಇದರಿಂದಾಗಿ ಮೋಸ ಹೋಗುವ ರೈತರ ಸಂಖ್ಯೆ ಕಡಿಮೆ ಆಗಲಿದೆ.
ಈ ಆಪ್ನಿಂದ ರೈತರಿಗೆ ಆಗುವ ಲಾಭ ಏನು?: ಈ ಆಪ್ ಮೂಲಕ ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ನಿಭಾಯಿಸಬಹುದಾಗಿದೆ. ಅಂದರೆ ರೈತರು ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸಲು ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಬಳಕೆ ಮಾಡಲಾಗುತ್ತದೆ. ಪ್ರಮುಖವಾಗಿ ಹಾಗೆಯೇ ಬೀಜ ಉತ್ಪಾದನೆ, ಗುಣಮಟ್ಟ ಗುರುತಿಸುವಿಕೆ ಮತ್ತು ಪ್ರಮಾಣೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

ಎಲ್ಲದಕ್ಕೂ ಮಿಗಿಲಾಗಿ ಬೀಜಗಳು, ಕೀಟನಾಶಕಗಳು, ರಸಗೊಬ್ಬರಗಳು ಮತ್ತು ನೀರಾವರಿ ಕೃಷಿ ಸಂಬಂಧಿ ಹೆಚ್ಚಿನ ಮಾಹಿತಿಯನ್ನು ಈ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ರೈತರು ನಕಲಿ ಅಥವಾ ಕೆಟ್ಟ ಬೆಳೆಯ ಬೀಜವನ್ನು ತಮ್ಮ ಜಮೀನುಗಳಿಗೆ ಹಾಕಿ ಅದರಿಂದ ಅಲ್ಪಸ್ವಲ್ಪ ಬೆಳೆಯಲ್ಲಿ ಪಡೆದು ಕಡಿಮೆ ಬೆಲೆಗೆ ಮಾರಿ ನಷ್ಟ ಅನುಭವಿಸುವುದು ತಪ್ಪಿದಂತೆ ಆಗುತ್ತದೆ.
ಇದನ್ನು ವಿನ್ಯಾಸಗೊಳಿದವರು ಯಾರು?: ಬೀಜ ಉತ್ಪಾದನೆ, ಗುಣಮಟ್ಟದ ಬೀಜ ಗುರುತಿಸುವಿಕೆ ಮತ್ತು ಬೀಜ ಪ್ರಮಾಣೀಕರಣದ ಸವಾಲುಗಳನ್ನು ಎದುರಿಸಲು ಈ ಆಪ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಇದನ್ನು ಕೃಷಿ ಸಚಿವಾಲಯದ ಸಹಯೋಗದಲ್ಲಿ 'ಉತ್ತಮ್ ಬೀಜ್- ಸಮೃದ್ಧ್ ಕಿಸಾನ್ ' ಎಂಬ ವಿಷಯದ ಮೇಲೆ NIC ಅಭಿವೃದ್ಧಿಪಡಿಸಿದೆ.
ಈ ಬಗ್ಗೆ ಮಾತನಾಡಿರುವ ತೋಮರ್, ಸರ್ಕಾರವು ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಕೃಷಿ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳು ಮತ್ತು ತೊಂದರೆಗಳನ್ನು ನಿವಾರಿಸಲು ಪ್ರಯತ್ನಿಸುತ್ತಿದೆ. ಅದರಲ್ಲಿ SATHI ಪೋರ್ಟಲ್ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದ್ದು, ಕೃಷಿಯಲ್ಲಿ ಬೀಜಗಳು, ಕೀಟನಾಶಕಗಳು, ರಸಗೊಬ್ಬರಗಳು ಮತ್ತು ನೀರಾವರಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದ್ದಾರೆ.

SATHI ಪೋರ್ಟಲ್ ಗುಣಮಟ್ಟದ ಭರವಸೆ ವ್ಯವಸ್ಥೆಯನ್ನು ಖಚಿತಪಡಿಸಲಿದ್ದು, ಬೀಜ ಉತ್ಪಾದನಾ ಸರಪಳಿಯಲ್ಲಿ ಬೀಜದ ಮೂಲವನ್ನು ಗುರುತಿಸುತ್ತದೆ. ಈ ವ್ಯವಸ್ಥೆಯು ಬೀಜ ಸರಪಳಿಯ ಸಂಯೋಜಿತ 7 ವರ್ಟಿಕಲ್ಗಳನ್ನು ಒಳಗೊಂಡಿರುತ್ತದೆ . ಅದರಲ್ಲಿ ಸಂಶೋಧನಾ ಸಂಸ್ಥೆ, ಬೀಜ ಪ್ರಮಾಣೀಕರಣ, ಬೀಜ ಪರವಾನಗಿ, ಬೀಜ ಕ್ಯಾಟಲಾಗ್, ರೈತ ಮಾರಾಟಕ್ಕೆ ಡೀಲರ್, ರೈತ ನೋಂದಣಿ ಮತ್ತು ಬೀಜ ಡಿಬಿಟಿ.
ಇದರ ಬಳಕೆ ಹೇಗೆ? : ನಿಮ್ಮ ಸ್ಮಾರ್ಟ್ಫೋನ್ ಅಥವಾ ಇತರೆ ಡಿವೈಸ್ನಲ್ಲಿ SATHI ಪೋರ್ಟಲ್ ಓಪನ್ ಮಾಡಿ. ಇದಕ್ಕಾಗಿ ನೀವು https://seedtrace.gov.in/ms014/english ಲಿಂಕ್ ಬಳಕೆ ಮಾಡಿಕೊಳ್ಳಬಹುದು. ಇದು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪೋರ್ಟಲ್ನಲ್ಲಿ ಇರುವ ಮಾಹಿತಿ ಪ್ರಕಾರ ಇದನ್ನು ಸದ್ಯಕ್ಕೆ ಭಾರತದ ಕೆಲವು ರಾಜ್ಯದ ರೈತರು ಬಳಕೆ ಮಾಡಬಹುದಾಗಿದೆ.


Click it and Unblock the Notifications