Ayodhya Ram Mandir: ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಮನೆಯಲ್ಲೇ ಕೂತು ವೀಕ್ಷಣೆ ಮಾಡಲು ಹೀಗೆ ಮಾಡಿ!
ರಾಮ ಮಂದಿರದಲ್ಲಿ (Ayodhya Ram Mandir) ಇಂದು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದ್ದು, ಭಾರತದ ಕೋಟ್ಯಂತರ ಭಕ್ತರು ಈ ಕ್ಷಣಕ್ಕಾಗಿ ಬಹಳ ಕಾತುರದಿಂದ ಕಾದು ಕುಳಿತಿದ್ದಾರೆ. ಅಲ್ಲದೆ ಸಾಕಷ್ಟು ಭಕ್ತರು ದೇಶದ ಮೂಲೆ ಮೂಲೆಯಿಂದ ಅಯೋಧ್ಯೆಗೆ ತಲುಪಿದ್ದಾರೆ. ಅದಾಗ್ಯೂ ಸಾಕಷ್ಟು ಜನರು ವಿವಿಧ ಕಾರಣಗಳಿಗಾಗಿ ಅಯೋಧ್ಯೆಗೆ ಹೋಗಲು ಸಾಧ್ಯವಾಗಿಲ್ಲ.
ಹೌದು, ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ನೇರವಾಗಿ ಕಣ್ತುಂಬಿಕೊಳ್ಳಲು ಸಾಕಷ್ಟು ಗಣ್ಯಾತಿಗಣ್ಯರು ಹಾಗೂ ಸಾಮಾನ್ಯ ಜನರು ಇಂದು ಅಯೋಧ್ಯೆಯಲ್ಲಿ ಇದ್ದಾರೆ. ಆದರೆ, ಯಾರೆಲ್ಲಾ ಅಲ್ಲಿಗೆ ಹೋಗಲು ಸಾಧ್ಯವಾಗಿಲ್ಲವೋ ಅವರು ಯಾವುದೇ ಬೇಸರಕ್ಕೆ ಒಳಗಾಗುವ ಅಗತ್ಯ ಇಲ್ಲ. ಯಾಕೆಂದರೆ ನೀವಿರುವಲ್ಲಿಯೇ ರಾಮನ ಕೃಪೆಗೆ ಪಾತ್ರರಾಗಬಹುದು. ಹಾಗಿದ್ರೆ, ಈ ಸಮಾರಂಭವನ್ನು ನೇರವಾಗಿ ವೀಕ್ಷಣೆ ಮಾಡುವುದು ಹೇಗೆ?, ಯಾವೆಲ್ಲಾ ಸಮಯದಲ್ಲಿ ಇದನ್ನು ಪ್ರಸಾರ ಮಾಡಲಾಗುತ್ತದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭ: ಅಯೋಧ್ಯೆ ದೇವಸ್ಥಾನದಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯನ್ನು ಅಯೋಧ್ಯಾ ಧಾಮದಲ್ಲಿ ಇಂದು 12:20 ಕ್ಕೆ ನೆರವೇರಿಸಲು ನಿರ್ಧರಿಸಲಾಗಿದ್ದು, ಈ ಕಾರ್ಯಕ್ರಮ ವೀಕ್ಷಣೆ ಮಾಡಲು ಕೆಲವು ವಿಶೇಷ ವ್ಯಕ್ತಿಗಳಿಗೆ ಮಾತ್ರ ಆಸನ ಸೀಮಿತವಾಗಿದೆ. ಅಂದರೆ ಹಲವಾರು ಪ್ರಮುಖ ಧಾರ್ಮಿಕ ಮುಖಂಡರು, ರಾಜಕಾರಣಿಗಳು, ಚಿತ್ರರಂಗದ ಗಣ್ಯರು ಸಮಾರಂಭದಲ್ಲಿ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಆದರೆ ಜನಸಾಮಾನ್ಯರಿಗೂ ಯಾವುದೇ ಸಮಸ್ಯೆ ಆಗಬಾರದು ಎಂದು ವಿವಿಧ ಪ್ಲಾಟ್ಫಾರ್ಮ್ನಲ್ಲಿ ನೇರ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ. ಅಂದರೆ ಸರ್ಕಾರ ನಡೆಸುತ್ತಿರುವ ದೂರದರ್ಶನದ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ 40 ನಿಮಿಷಗಳ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ನೇರವಾಗಿ ವೀಕ್ಷಣೆ ಮಾಡಬಹುದಾಗಿದೆ. ಇನ್ನು ಕಳೆದ ವಾರ ಜನವರಿ 16 ರಿಂದ ಸರಯು ನದಿಯಿಂದ ಮೊದಲ ಹಂತದ ಪವಿತ್ರೀಕರಣದ ಆಚರಣೆಗಳು ಆರಂಭ ಆಗಿದ್ದು, ಪ್ರಾಣ ಪ್ರತಿಷ್ಠಾ ಪ್ರಕ್ರಿಯೆಯ ಅಂತಿಮ ಹಂತ ಇಂದು ಮಧ್ಯಾಹ್ನ ನಡೆಯಲಿದೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿದ್ದಾರೆ. ಅವರು ಸುಮಾರು 11:00 ಗಂಟೆಗೆ ಸ್ಥಳಕ್ಕೆ ಆಗಮಿಸುತ್ತಾರೆ ಎಂದು ತಿಳಿದುಬಂದಿದೆ. ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕೂಡ ಭಾಗಿಯಾಗುತ್ತಿದ್ದಾರೆ. ಈ ವಿಶೇಷ ಕಾರ್ಯಕ್ರಮವನ್ನು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ವೀಕ್ಷಣೆ ಮಡಲು ಈ ಲಿಂಕ್ ಅನ್ನು ಬಳಕೆ ಮಾಡಿಕೊಳ್ಳಬಹುದು.
ಯೂಟ್ಯೂಬ್ ಚಾನಲ್ ಹೊರತಾಗಿ ಈ ನೇರ ಪ್ರಸಾರವನ್ನು ದೂರದರ್ಶನದಲ್ಲಿಯೂ ಪ್ರಸಾರ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ರಾಮ ಮಂದಿರ ಟ್ರಸ್ಟ್ ವರ್ಚುವಲ್ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತಿದ್ದು, ಈ ಕಾರ್ಯಕ್ರಮವನ್ನು ಹಳ್ಳಿಗಳು, ನಗರ ಪ್ರದೇಶಗಳು, ದೇವಾಲಯಗಳು ಮತ್ತು ಸಾರ್ವಜನಿಕ ಸ್ಥಳಗಳಿಗೂ ಪ್ರಸಾರ ಮಾಡುವ ಕೆಲಸ ಮಾಡಲಾಗುತ್ತದೆ.
ಅಯೋಧ್ಯೆಯ ವಿವಿಧ ಸ್ಥಳಗಳಲ್ಲಿ 40 ಕ್ಯಾಮೆರಾಗಳನ್ನು ಇನ್ಸ್ಟಾಲ್ ಮಾಡಲಾಗಿದ್ದು, ಈ ಲೈವ್ ಕವರೇಜ್ 4K ಸಾಮರ್ಥ್ಯದ್ದಾಗಿದೆ. ವಿಶೇಷ ಏನೆಂದರೆ ದೇಶದಾದ್ಯಂತ ಭಗವಾನ್ ರಾಮನ ಪ್ರಾಣ ಪ್ರತಿಷ್ಠಾ ಸಮಾರಂಭದ ನೇರ ಪ್ರಸಾರದೊಂದಿಗೆ ರೈಲ್ವೆ ತನ್ನ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದೆ. ದೇಶದಾದ್ಯಂತದ ರೈಲು ನಿಲ್ದಾಣಗಳಲ್ಲಿ ಕನಿಷ್ಠ 9000 ಡಿಸ್ಪ್ಲೇಗಳಲ್ಲಿ ಇದನ್ನು ಪ್ರಸಾರ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ದೇಣಿಗೆ ದ್ವಿಗುಣಗೊಳ್ಳುತ್ತಿದೆ: ಅಯೋಧ್ಯೆ ರಾಮಮಂದಿರ ದೇಣಿಗೆ ದ್ವಿಗುಣಗೊಳ್ಳುತ್ತಿದೆ ಎಂದು ಇದೇ ವೇಳೆ ತಿಳಿದುಬಂದಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಿಬ್ಬಂದಿ ಗೂಗಲ್ ಪೇ ಮತ್ತು ಭಾರತ್ಪೇ ನಂತಹ ಯುಪಿಐ ಆಪ್ಗಳ ಮೂಲಕ ದೇಣಿಗೆ ನೀಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲದೆ ರಾಮ ಮಂದಿರದ ದೇಣಿಗೆ ಭಾರತ್ ಬಿಲ್ ಪಾವತಿ ವ್ಯವಸ್ಥೆಯಲ್ಲಿ (BBPS) ನೇರ ಪ್ರಸಾರವಾಗುತ್ತಿದೆ. ಇದರೊಂದಿಗೆ NEFT, IMPS, ಡ್ರಾಫ್ಟ್ ಮತ್ತು ಚೆಕ್ ಪಾವತಿಗಳು ಸೇರಿದಂತೆ ವಿವಿಧ ಆಯ್ಕೆಗಳ ಮೂಲಕವೂ ದೇಣಿಗೆ ನೀಡಬಹುದಾಗಿದೆ.

ಅಯೋಧ್ಯೆ ರಾಮಮಂದಿರ ವಿಸ್ತೀರ್ಣ: ಅಯೋಧ್ಯೆಯ ರಾಮ ಮಂದಿರವು ವಿಸ್ತಾರವಾದ ಪ್ರದೇಶವನ್ನು ಹೊಂದಿದೆ ಅಂದರೆ ಒಟ್ಟು 2.7 ಎಕರೆಗಳನ್ನು ಒಳಗೊಂಡಿರುವ ಈ ಪ್ರದೇಶದಲ್ಲಿ ದೇವಾಲಯ ಪ್ರದೇಶವು 57,400 ಚದರ ಅಡಿಗಳಷ್ಟು ಇದೆ.


Click it and Unblock the Notifications








