ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಗಮನಿಸಿ; ಈ ನಕಲಿ ಆಪ್ಗಳ ಬಗ್ಗೆ ಇರಲಿ ಎಚ್ಚರ!
ಕರ್ನಾಟಕ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಐದು ಗ್ಯಾರಂಟಿಗಳನ್ನು ನೀಡಿದ್ದು, ಅದರಲ್ಲಿ ಶಕ್ತಿ ಯೋಜನೆ ಈಗಾಗಲೇ ಜಾರಿಯಾಗಿದೆ. ಇದಾದ ನಂತರದಲ್ಲಿ ಗೃಹಲಕ್ಷ್ಮಿ ಯೋಜನೆಗೆ ದಿನಾಂಕ ಸಹ ನಿಗದಿಯಾಗಿತ್ತು.ಆದರೆ ಕೆಲವು ಕಾರಣಗಳಿಂದ ಇನ್ನೂ ಘೋಷಣೆ ಆಗಿಲ್ಲ. ಈ ನಡುವೆ ಕೆಲವು ಸ್ಕ್ಯಾಮರ್ಸ್ಗಳು ನಕಲಿ ಆಪ್ ಮೂಲಕ ತಮ್ಮ ಕೈಚಳಕ ತೋರಿಸಲು ಮುಂದಾಗಿದ್ದಾರೆ.
ಹೌದು, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವುದನ್ನು ಸರಳಗೊಳಿಸಲು ಆಪ್ ರಚಿಸಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿತ್ತು. ಆದರೆ, ಈವರೆಗೂ ಆ ಆಪ್ ಅನ್ನು ಇನ್ನೂ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ನಲ್ಲಿ ಬಿಡುಗಡೆ ಮಾಡಿಲ್ಲ. ಅದಾಗ್ಯೂ ಈ ಗೃಹಲಕ್ಷ್ಮಿ ಸಂಬಂಧ ನಕಲಿ ಆಪ್ಗಳು ಭಾರೀ ಸದ್ದು ಮಾಡುತ್ತಿದ್ದು, ಜನರನ್ನು ಮೋಸ ಮಾಡಲು ಹೊಂಚು ಹಾಕಿವೆ. ಹಾಗಿದ್ರೆ, ಏನಿದು ಗೃಹಲಕ್ಷ್ಮಿಯ ನಕಲಿ ಆಪ್, ಇದರಿಂದ ಹೇಗೆ ಎಚ್ಚರಿಕೆ ವಹಿಸುವುದು ಎಂಬ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಏನಿದು ಗೃಹಲಕ್ಷ್ಮಿ? : ನಾವು ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000ರೂ. ಗಳನ್ನು ನೀಡುತ್ತೇವೆ ಎಂದು ಕಾಂಗ್ರೆಸ್ ಘೋಷಣೆ ಮಾಡಿತ್ತು. ಅದರಲ್ಲೂ ಅಧಿಕಾರಕ್ಕೆ ಬಂದ ತಕ್ಷಣವೇ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಲಾಗಿತ್ತು. ಆದರೆ, ಸರ್ಕಾರ ಮಾತ್ರ ಹೊಸದಾಗಿ ಆಪ್ ಕ್ರಿಯೇಟ್ ಮಾಡುವ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡುತ್ತೇವೆ ಎಂದು ದಿನ ಮುಂದೂಡುತ್ತಲೇ ಬರುತ್ತಿದೆ. ಈ ಕಾರಣಕ್ಕಾಗಿಯೇ ಪ್ರತಿ ಪಕ್ಷಗಳು ಈ ಬಗ್ಗೆ ತೀವ್ರ ಟೀಕೆ ಮಾಡುತ್ತಿವೆ.
ಈಗಾಗಲೇ ಆಪ್ ರೆಡಿಯಾಗಿದೆ: ಪ್ರಮುಖ ವಿಷಯ ಏನೆಂದರೆ ಗೃಹಲಕ್ಷ್ಮಿ ಯೋಜನೆಗೆ ಜೂನ್ 27 ನೇ ದಿನಾಂಕದಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಹೇಳಲಾಗಿತ್ತಾದರೂ ಕೆಲವು ಕಾರಣಗಳಿಂದ ಅದನ್ನು ಇನ್ನೂ ಮುಕ್ತ ಮಾಡಿಲ್ಲ. ಅದಾಗ್ಯೂ ಈ ಸಂಬಂಧ ಆಪ್ ಅನ್ನು ಸಿದ್ಧಪಡಿಸಲಾಗಿದ್ದು. ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿದ ನಂತರ ಮೊಬೈಲ್ ಆಪ್ ಅನ್ನು ಲಾಂಚ್ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದರು.
ಹೆಚ್ಚಾದ ನಕಲಿ ಆಪ್ಗಳ ಹಾವಳಿ: ಈ ನಡುವೆ ಆಪ್ ಸ್ಟೋರ್ಗಳಲ್ಲಿ ಅಥವಾ ಲಿಂಕ್ ಮೂಲಕ ಗೃಹಲಕ್ಷ್ಮಿಗೆ ಅರ್ಜಿ ಕರೆಯಲಾಗಿದೆ ಎಂದು ಹೇಳಿ ಜನರನ್ನು ವಂಚನೆ ಮಾಡುವ ಪ್ರಕರಣಗಳು ವರದಿಯಾಗುತ್ತಿವೆ. ಅದರಲ್ಲೂ ಗೂಗಲ್ ಪ್ಲೇಸ್ಟೋರ್ ನಲ್ಲಿ ಗೃಹಲಕ್ಷ್ಮಿ ಹೆಸರಿನಲ್ಲಿ ಹಲವು ನಕಲಿ ಆಪ್ಗಳು ಕಾಣಿಸಿಕೊಂಡಿದ್ದು, ಕೆಲವು ಜನರು ಈ ಬಲೆಗೆ ಬಿದ್ದಿದ್ದರೆ ಇನ್ನೂ ಕೆಲವರು ಇದರಿಂದ ಅಂತರ ಕಾಪಾಡಿಕೊಂಡಿದ್ದಾರೆ.
ಈ ಆಪ್ ಬಳಕೆ ಮಾಡಿದ್ರೆ ಏನಾಗುತ್ತದೆ? : ಪ್ಲೇ ಸ್ಟೋರ್ನಲ್ಲಿ ಇರುವ ಈ ನಕಲಿ ಆಪ್ಗಳು ನಿಮ್ಮ ವೈಯಕ್ತಿಯ ಡೇಟಾವನ್ನು ಕದಿಯುವ ಹಾಗೂ ಮಾಲ್ವೇರ್ ಮೂಲಕ ನಿಮ್ಮ ಫೋನ್ ಮೇಲೆ ದಾಳಿ ಮಾಡುವ ಗುರಿ ಹೊಂದಿವೆ ಎನ್ನಲಾಗಿದೆ. ಅದೆಲ್ಲಕ್ಕೂ ಮಿಗಿಲಾಗಿ ನಿಮ್ಮ ಆಧಾರ್, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಈ ಆಪ್ಗಳು ಕೇಳುತ್ತಿದ್ದು, ಇದನ್ನು ಭರ್ತಿ ಮಾಡಿದ್ದೇ ಆದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಮಂಗಮಾಯವಾಗಲಿದೆ.

ಸ್ವಲ್ಪ ಕಾಯಿರಿ: ಇಂದು ಕಾಂಗ್ರೆಸ್ ಸಭೆ ನಡೆಸಿದ್ದು, ಅನ್ನಭಾಗ್ಯ ಯೋಜನೆ ನೀಡಲಾಗುವ ಹೆಚ್ಚುವರಿ ಅಕ್ಕಿಯ ಬದಲಿಗೆ ಸರ್ಕಾರ ಬಳಕೆದಾರರ ಖಾತೆಗೆ ಹಣ ಜಮಾ ಮಾಡಲು ನಿರ್ಧಾರ ಮಾಡಿದೆ. ಈ ನಡುವೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕರಿಸಲು ಸಹ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಅರ್ಜಿ ಸ್ವೀಕರಿಸುವ ದಿನಾಂಕ, ಆಪ್, ವೆಬ್ಸೈಟ್ ಬಗ್ಗೆ ಸರ್ಕಾರವೇ ಅಧಿಕೃತವಾಗಿ ಮಾಹಿತಿ ನೀಡಲಿದೆ. ಅಲ್ಲಿಯವರೆಗೂ ರಾಜ್ಯದ ಜನರು ಯಾವುದೇ ಅಪರಿಚಿತ ಲಿಂಕ್ ಹಾಗೂ ಆಪ್ ಅನ್ನು ಓಪನ್ ಮಾಡಬಾರದು.
ಗೃಹಲಕ್ಷ್ಮಿಗೆ ಎಲ್ಲೆಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು?: ಜನರಿಗೆ ಅನುಕೂಲ ಆಗಲು ಆಪ್ ತಯಾರು ಮಾಡಿದೆಯಾದರೂ ಸಹ ಇದನ್ನು ಹೊರತುಪಡಿಸಿ ಕುಟುಂಬದ ಮಹಿಳೆಯು ಸೇವಾ ಸಿಂಧು ವೆಬ್ಸೈಟ್ನಲ್ಲಿಯೂ ಅರ್ಜಿ ಸಲ್ಲಿಕೆ ಮಾಡಬಹುದು. ಇದಕ್ಕಾಗಿ ನೀವು https://sevasindhugs.karnataka.gov.in/# ಅನ್ನು ಬಳಕೆ ಮಾಡಿಕೊಳ್ಳಬಹುದು. ಇದರೊಂದಿಗೆ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಕ್ಕೆ ಹೋಗಿಯೂ ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿ ಸಲ್ಲಿಸುವಾಗ ಬೇಕಾದ ದಾಖಲೆಗಳೇನು?: ಪಡಿತರ ಚೀಟಿಯಲ್ಲಿ ಇರುವ ಹಿರಿಯ ಅಥವಾ ಮುಖ್ಯಸ್ಥೆ ಎಂದು ಗುರುತಿಸಲಾದ ಮಹಿಳೆಯ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಮೊಬೈಲ್ ಸಂಖ್ಯೆ, ಜಾತಿ ದಾಖಲೆ, ಫೋಟೋ ಓದಿದ್ದರೆ ಎಸ್ಎಸ್ಎಲ್ಸಿ ಸರ್ಟಿಫಿಕೇಟ್ ಅನ್ನು ಕೇಳಲಾಗುತ್ತದೆ. ಅದಾಗ್ಯೂ ಇದು ಅಧಿಕೃತವಲ್ಲ. ಸರ್ಕಾರ ಕೆಲವು ಬದಲಾವಣೆ ಮಾಡುತ್ತಿದ್ದು, ಅಧಿಕೃತವಾಗಿ ಯಾವೆಲ್ಲಾ ದಾಖಲೆಗಳನ್ನು ಕೇಳುತ್ತದೊ ಕಾದುನೋಡಬೇಕಿದೆ.


Click it and Unblock the Notifications








