2.65 ಲಕ್ಷ ರೂ. ಕಳೆದುಕೊಳ್ಳುವಂತೆ ಮಾಡಿದ ವಿಡಿಯೋ ಕಾಲ್! ಎಂತೆಂಥಾ ಮೋಸಗಾರರಿದ್ದಾರೆ ಗೊತ್ತಾ?
ಆನ್ಲೈನ್ ಹಗರಣ (Online scam) ಹೊಸ ಹೊಸ ರೂಪದಲ್ಲಿ ನಡೆಯುತ್ತಲೇ ಇದೆ. ಈ ಮೂಲಕ ಜನರು ತಾವು ಕೂಡಿಟ್ಟಿದ್ದ ಹಣವನ್ನು ಕಳೆದುಕೊಳ್ಳುತ್ತಲೇ ಇದ್ದಾರೆ. ಈ ನಡುವೆ ಒಂದು ವಿಡಿಯೋ ಕಾಲ್ ಓರ್ವ ವ್ಯಕ್ತಿಯು 2.65 ಲಕ್ಷ ರೂ. ಕಳೆದುಕೊಳ್ಳುವಂತೆ ಮಾಡಿದೆ.
ಹೌದು, ಮುಂಬೈ ಮೂಲದ ಮಾರ್ಕೆಟಿಂಗ್ ವೃತ್ತಿಪರರೊಬ್ಬರು ನಕಲಿ ವಿಡಿಯೋ ಕರೆಗಳು (video call ) ಮತ್ತು ಕಾನೂನು ಕ್ರಮದ ಬೆದರಿಕೆಗಳನ್ನು ಸ್ವೀಕರಿಸಿದ ಬಳಿಕ ಈ ಹಣ ಕಳೆದುಕೊಂಡಿದ್ದಾರೆ. ಹಾಗಿದ್ರೆ, ಈ ಮೋಸ ಮಾಡಿದ್ದು ಹೇಗೆ?, ಈ ರೀತಿಯ ವಂಚನೆಯಿಂದ ನೀವು ಪಾರಾಗುವುದು ಹೇಗೆ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿಡಿಯೋ ಕರೆ ಮಾಡಿ ಮೋಸ: ವಂಚಕರು ಜನರನ್ನು ವಂಚಿಸಲು ಮತ್ತು ಹಣವನ್ನು ದೋಚಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಅಂತಹ ಒಂದು ಅತಿರೇಕದ ಹಗರಣವೆಂದರೆ ಫೆಡ್ಎಕ್ಸ್ ಪಾರ್ಸೆಲ್ ಹಗರಣ(FedEx Parcel Scam) . ಅಲ್ಲಿ ಸ್ಕ್ಯಾಮರ್ಗಳು ಕಸ್ಟಮ್ಸ್ ಅಧಿಕಾರಿಗಳಂತೆ ನಟಿಸುತ್ತಾರೆ ಮತ್ತು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾದ ಅಕ್ರಮ ಪಾರ್ಸೆಲ್ಗಳ ಮೇಲೆ ಕಾನೂನು ಕ್ರಮದೊಂದಿಗೆ ಬಲಿಪಶುಗಳಿಗೆ ಬೆದರಿಕೆ ಹಾಕುತ್ತಾರೆ. ಈ ಹಗರಣದ ಇತ್ತೀಚಿನ ಬಲಿಪಶು ಮುಂಬೈನ 50 ವರ್ಷದ ಬ್ರ್ಯಾಂಡ್ ಮಾರ್ಕೆಟಿಂಗ್ ವೃತ್ತಿಪರರಾಗಿದ್ದಾರೆ
ಪಾರ್ಸೆಲ್ ಬಗ್ಗೆ ನಕಲಿ ಕರೆ ಬಂದ ನಂತರ ಅವರು ಸುಮಾರು 2.65 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಲೋಕಮಾತ್ ಟೈಮ್ಸ್ ಈ ಸಂಬಂಧ ವರದಿ ಮಾಡಿದೆ. ಅದರ ಪ್ರಕಾರ, ಮೇ 17 ರಂದು, ಕೊಲಾಬಾ ಪ್ರದೇಶದಲ್ಲಿ ನೆಲೆಸಿರುವ ಅವರು, ತನ್ನನ್ನು ತಾನು ಅಧಿಕಾರಿ ಎಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಯಿಂದ ಸ್ಕೈಪ್ ಕರೆಯನ್ನು ಸ್ವೀಕರಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ನಿಮ್ಮ ಹೆಸರಿನಲ್ಲಿ ತೈವಾನ್ಗೆ ಕಳುಹಿಸಲು ಪ್ರಯತ್ನಿಸುತ್ತಿದ್ದ ಪಾರ್ಸೆಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾನೆ.
ಅಲ್ಲದೆ ಈ ಪಾರ್ಸೆಲ್ನಲ್ಲಿ ಲ್ಯಾಪ್ಟಾಪ್, ಪಾಸ್ಪೋರ್ಟ್, ಕ್ರೆಡಿಟ್ ಕಾರ್ಡ್ ಮತ್ತು ಡ್ರಗ್ಸ್ ಇದೆ ಎಂದು ಕರೆ ಮಾಡಿದವ ತಿಳಿಸಿದ್ದಾನೆ. ಇಷ್ಟೇ ಅಲ್ಲದೆ ಕರೆ ಮಾಡಿದವ ಇನ್ನೊಬ್ಬ ವ್ಯಕ್ತಿಗೆ ಕರೆಯನ್ನು ಹಸ್ತಾಂತರಿಸಿದ್ದಾನೆ. ಅಲ್ಲಿ ಆಧಾರ್ ವಿವರಗಳು, ಪೂರ್ಣ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ ಮತ್ತು ಪೂರ್ಣ ವಿಳಾಸವನ್ನು ಹೇಳಲಾಗಿದೆ. ಈ ಕರೆ ಕಾನೂನುಬದ್ಧವಾಗಿದೆ ಎಂದು ನಂಬಿದ ಅವರು ವಿನಂತಿಸಿದ ವಿವರಗಳನ್ನು ಒದಗಿಸಿದ್ದಾರೆ.

ಆದಾಗ್ಯೂ, ವಂಚಕರು ಅವರಿಗೆ ಬೆದರಿಕೆ ಹಾಕುವುದನ್ನು ಮುಂದುವರೆಸಿದ್ದಾರೆ. ಅಂದರೆ ನಿಮ್ಮ ಆಧಾರ್ ಕಾರ್ಡ್ ಹನ್ನೆರಡರಿಂದ ಹದಿನೈದು ರಾಜ್ಯಗಳಲ್ಲಿನ ಅಪರಾಧಗಳಿಗೆ ಲಿಂಕ್ ಮಾಡಲ್ಪಟ್ಟಿದೆ ಮತ್ತು ಭೂಗತ ಲೋಕದ ಡಾನ್ ಜೊತೆ ಸಂಪರ್ಕವನ್ನು ಸಹ ಇದೆ ಎಂದು ಮತ್ತಷ್ಟು ಬೆದರಿಕೆ ಹಾಕಿದ್ದಾರೆ. ಈ ಮೂಲಕ ಈ ನಕಲಿ ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿದ್ದಾರೆ. ಈ ಮಾಹಿತಿಯಿಂದ ಹೆದರಿದ ಸಂತ್ರಸ್ತರು ಕರೆ ಮಾಡಿದವರಿಗೆ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.
ಆದರೆ ವಂಚನೆ ಮಾಡಲೆಂದೇ ಕರೆ ಮಾಡಿದ ವಂಚಕರು ಇಷ್ಟಕ್ಕೆ ಸುಮ್ಮನಾಗುತ್ತಾರೆಯೇ?, ವಂಚಕರು ತಮ್ಮ ಯೋಜನೆಯನ್ನು ಮುಂದುವರೆಸಿದ್ದಾರೆ. ಸಂತ್ರಸ್ಥರಿಗೆ ಸಿಬಿಐ ಇಂಡಿಯಾ ಎಂದು ಹೇಳಿಕೊಂಡು ನಕಲಿ ನೋಟೀಸ್ ಕಳುಹಿಸಿದ್ದಾರೆ ಮತ್ತು ಡಿಸಿಪಿ ಎಂದು ಹೇಳಿಕೊಳ್ಳುವ ಇನ್ನೊಬ್ಬ ವ್ಯಕ್ತಿ, ಅವರ ಹೆಸರಿನಲ್ಲಿ ಕಪ್ಪು ಹಣ ಪತ್ತೆಯಾಗಿದೆ ಮತ್ತು ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾನೆ.
ಇದೆಲ್ಲಾ ಆದ ಮೇಲೆ ತಮ್ಮ ಮುಖ್ಯ ಕೆಲಸಕ್ಕೆ ಕೈ ಹಾಕಿದ್ದಾರೆ. ಬ್ಯಾಂಕ್ ಖಾತೆಯಲ್ಲಿನ 85 ಪ್ರತಿಶತವನ್ನು ಆರ್ಬಿಐ ಒಡೆತನದ ಇಂಡಸ್ಇಂಡ್ ಬ್ಯಾಂಕ್ನಲ್ಲಿರುವ ಮೆಲೋಡಿ ಪ್ರೊಫೆಷನಲ್ ಹೆಸರಿನ ಖಾತೆಗೆ ವರ್ಗಾಯಿಸಲು ಹೇಳಿದ್ದಾರೆ. ಪರಿಸ್ಥಿತಿಯಿಂದ ಗಾಬರಿಗೊಂಡ ಅವರು ಚೆಕ್ ಬರೆದು ಆರ್ ಟಿಜಿಎಸ್ ಮೂಲಕ 2.62 ಲಕ್ಷ ರೂ. ಗಳನ್ನು ವರ್ಗಾವಣೆ ಮಾಡಿದ್ದಾರೆ. ಇದೆಲ್ಲಾ ಆದ ಮೇಲೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ನಂತರ ಕೊಲಬಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಘಟನೆ ಇದೇ ಮೊದಲಲ್ಲ: ಈ ರೀತಿಯ ಘಟನೆ ಹೊಸ ಪ್ರಕರಣವಲ್ಲ. ಕಳೆದ ಕೆಲವು ತಿಂಗಳುಗಳಲ್ಲಿ ಅನೇಕ ವ್ಯಕ್ತಿಗಳು ಅಧಿಕಾರಿಗಳಂತೆ ನಟಿಸುವ ವಂಚಕರಿಂದ ಇದೇ ರೀತಿಯ ಕರೆಗಳನ್ನು ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ. ವಿಮಾನ ನಿಲ್ದಾಣದಲ್ಲಿ ಅಕ್ರಮ ಪಾರ್ಸೆಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಕರೆಗಳ ಸ್ವರೂಪ ಮತ್ತು ಪ್ರಸ್ತುತಪಡಿಸಿದ ಪರಿಸ್ಥಿತಿಯ ತೀವ್ರತೆಯಿಂದಾಗಿ, ಜನರು ಅವರು ಬಲೆಗೆ ಸುಲಭವಾಗಿ ಬೀಳುತ್ತಿದ್ದಾರೆ.
ಅಂತಹ ವಂಚನೆಗಳಿಂದ ಸುರಕ್ಷಿತವಾಗಿರಲು, ಅಪರಿಚಿತ ಸಂಖ್ಯೆಗಳು ಅಥವಾ ಉದ್ದೇಶಿತ ಅಧಿಕಾರಿಗಳಿಂದ ಅನಿರೀಕ್ಷಿತ ಕರೆಗಳು ಅಥವಾ ಮೆಸೆಜ್ಗಳನ್ನು ಸ್ವೀಕರಿಸುವಾಗ ಜಾಗರೂಕರಾಗಿರುವುದು ಮುಖ್ಯ. ಅಧಿಕೃತ ವೆಬ್ಸೈಟ್ಗಳು ಅಥವಾ ವಿಶ್ವಾಸಾರ್ಹ ಮೂಲಗಳಿಂದ ಸಂಪರ್ಕ ಮಾಹಿತಿಯನ್ನು ಬಳಕೆ ಮಾಡಿಕೊಂಡು ಅವರು ಪ್ರತಿನಿಧಿಸಲು ಹಕ್ಕು ಸಾಧಿಸುವ ಅಧಿಕೃತ ಸಂಸ್ಥೆಯನ್ನು ಸ್ವತಂತ್ರವಾಗಿ ಸಂಪರ್ಕಿಸುವ ಮೂಲಕ ಖಚಿತಪಡಿಸಿಕೊಳ್ಳಿ.
ಯಾವುದೇ ಸಂಪೂರ್ಣ ಪರಿಶೀಲನೆಯಿಲ್ಲದೆ ಫೋನ್ ಅಥವಾ ಆನ್ಲೈನ್ನಲ್ಲಿ ಆಧಾರ್ ವಿವರಗಳು, ಬ್ಯಾಂಕ್ ಖಾತೆ ಸಂಖ್ಯೆಗಳು ಅಥವಾ ಪಾಸ್ವರ್ಡ್ಗಳಂತಹ ವೈಯಕ್ತಿಕ ಅಥವಾ ಸೂಕ್ಷ್ಮ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬೇಡಿ. ಹೆಚ್ಚಿನ ಒತ್ತಡ ತಂತ್ರಗಳು ಅಥವಾ ಬೆದರಿಕೆಗಳ ಬಗ್ಗೆ ಸಂಶಯವಿರಲಿ, ಏಕೆಂದರೆ ಕಾನೂನುಬದ್ಧ ಅಧಿಕಾರಿಗಳು ಈ ರೀತಿಯಲ್ಲಿ ತಕ್ಷಣದ ಪಾವತಿಗಳು ಅಥವಾ ವೈಯಕ್ತಿಕ ಮಾಹಿತಿಯನ್ನು ಎಂದಿಗೂ ಕೇಳುವುದಿಲ್ಲ.


Click it and Unblock the Notifications








