ಎಲ್ಲಾ ಪಂಚಾಯತ್ಗಳಲ್ಲಿ ಇನ್ಮುಂದೆ ಭ್ರಷ್ಟಾಚಾರಕ್ಕೆ ಬ್ರೇಕ್: ಎಂಟ್ರಿ ಕೊಡಲಿದೆ UPI
ಭಾರತದ ಸರ್ಕಾರ ಡಿಜಿಟಲೀಕರಣಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದು, ಈಗಾಗಲೇ ಡಿಜಿಟಲ್ ಪಾವತಿ ಪ್ರಕ್ರಿಯೆ ಎಲ್ಲಾ ಕಡೆ ವ್ಯಾಪಕವಾಗಿ ಬಳಕೆ ಆಗುತ್ತಿದೆ. ಈ ನಡುವೆ ಮಹತ್ವದ ನಿರ್ಧಾರವೊಂದನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದ್ದು, ಈ ಮೂಲಕ ಇನ್ಮುಂದೆ ದೇಶದ ಎಲ್ಲಾ ಪಂಚಾಯತ್ಗಳಿಗೆ ಯುಪಿಐ ಸೌಲಭ್ಯ ಲಭ್ಯವಾಗಲಿದೆ.
ಹೌದು, ದೇಶದಾದ್ಯಂತ ಎಲ್ಲಾ ಪಂಚಾಯತ್ಗಳಲ್ಲಿ ಇನ್ಮುಂದೆ ಯುಪಿಐ ಪಾವತಿ ಪ್ರಕ್ರಿಯೆ ಲಭ್ಯ ಇರಲಿದೆ. ಇದರಿಂದಾಗಿ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಅಥವಾ ಸರ್ಕಾರಕ್ಕೆ ಯಾವುದಾದರೂ ಹಣ ಪಾವತಿ ಮಾಡುವುದು ಸುಲಭವಾಗಲಿದೆ. ಇದರಿಂದ ಭ್ರಷ್ಟಾಚಾರಕ್ಕೂ ಕಡಿವಾಣ ಹಾಕಿದಂತೆ ಆಗುತ್ತದೆ. ಹಾಗಿದ್ರೆ, ಏನಿದು ಸರ್ಕಾರದ ಹೊಸ ಪ್ಲ್ಯಾನ್?, ಇದನ್ನು ಹೇಗೆ ಬಳಕೆ ಮಾಡಿಕೊಳ್ಳಲಾಗುತ್ತದೆ? ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಪಂಚಾಯತ್ ರಾಜ್ ಸಚಿವಾಲಯ ಹೇಳಿದ್ದೇನು?: ಈ ಸ್ವಾತಂತ್ರ್ಯ ದಿನಾಚರಣೆಯಿಂದ ಕಡ್ಡಾಯವಾಗಿ ಡಿಜಿಟಲ್ ಪಾವತಿ ಸೇವೆಯನ್ನು ಅಭಿವೃದ್ಧಿ ಕಾರ್ಯಗಳು ಮತ್ತು ಆದಾಯ ಸಂಗ್ರಹಣೆಗಾಗಿ ಬಳಕೆ ಮಾಡಲಾಗುತ್ತದೆ. ಜೊತೆಗೆ UPI (ಯುನಿಫೈಡ್ ಪೇಮೆಂಟ್ ಇಂಟರ್ಫೇಸ್) ಬಳಕೆದಾರರೆಂದು ಪಂಚಾಯತ್ಗಳನ್ನು ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದೆ. ಜೊತೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ, ಯುಪಿಐ-ಶಕ್ತಗೊಂಡ ಪಂಚಾಯತ್ಗಳನ್ನು ಮುಖ್ಯಮಂತ್ರಿಗಳು, ಸಂಸದರು ಮತ್ತು ಶಾಸಕರಂತಹ ಪ್ರಮುಖ ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಬೇಕು ಎಂದು ಸೂಚಿಸಲಾಗಿದೆ.
ಈ ವಿಷಯದಲ್ಲಿ ಗಮನಿಸಬೇಕಾದ ಪ್ರಮುಖ ಮಾಹಿತಿ ಏನೆಂದರೆ ಸುಮಾರು 98% ರಷ್ಟು ಪಂಚಾಯತ್ಗಳು ಈಗಾಗಲೇ ಯುಪಿಐ ಆಧಾರಿತ ಪಾವತಿಗಳನ್ನು ನಡೆಸುತ್ತಿವೆಯಂತೆ ಈ ಬಗ್ಗೆ ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಸುನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ. ಹಾಗೆಯೇ ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (PMFS) ಮೂಲಕ ಸುಮಾರು 1.5 ಲಕ್ಷ ಕೋಟಿ ಮೌಲ್ಯದ ಪಾವತಿಗಳನ್ನು ಮಾಡಲಾಗಿದೆ. ಆದರೆ, ಈಗ ಚೆಕ್ ಮತ್ತು ನಗದು ಪಾವತಿ ಬಹುತೇಕ ಸ್ಥಗಿತಗೊಂಡಿದೆ ಎಂದು ವಿವರಿಸಿದ್ದಾರೆ.
ನಾವು ಈಗಾಗಲೇ ಶೇಕಡ 98 % ರಷ್ಟು ಪಂಚಾಯಿತಿಗಳನ್ನು ಆವರಿಸಿದ್ದೇವೆ. ಜೂನ್ 30 ರಂದು ಸೇವಾ ಪೂರೈಕೆದಾರರು ಮತ್ತು ಮಾರಾಟಗಾರರೊಂದಿಗೆ ಸಭೆ ನಡೆಸುವಂತೆ ಪಂಚಾಯತ್ಗಳಿಗೆ ಮಾಹಿತಿ ನೀಡಲಾಗಿದೆ. ಅದರಂತೆ ಗೂಗಲ್ ಪೇ, ಫೋನ್ ಪೇ, ಪೇಟಿಎಮ್, ಭೀಮ್, ಮೊಬಿವಿಕಿ, ವಾಟ್ಸಾಪ್ ಪೇ, ಅಮೆಜಾನ್ ಪೇ ಭಾರತ್ ಪೇ ನಂತಹ ಯುಪಿಐ ಪ್ಲಾಟ್ಫಾರ್ಮ್ಗಳ ಅಧಿಕಾರಿಗಳು ಮತ್ತು ಉದ್ಯೋಗಿಗಳ ವಿವರಗಳನ್ನು ಒಳಗೊಂಡಿರುವ ಪಟ್ಟಿಯನ್ನು ಸಚಿವಾಲಯವು ಹಂಚಿಕೊಂಡಿದೆ ಎಂದು ಉಲ್ಲೇಖಿಸಲಾಗಿದೆ.
ಈ ಸಂಬಂಧ ಪಂಚಾಯತ್ಗಳು ಜುಲೈ 15 ರೊಳಗೆ ಸೂಕ್ತ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಜೊತೆಗೆ ಜುಲೈ 30 ರೊಳಗೆ ಅವರು ಹೆಸರನ್ನು ಅಂತಿಮಗೊಳಿಸಬೇಕಿದೆ. ಅಂದರೆ ಆಯಾ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದು ಉತ್ತಮ ಸೇವೆ ನೀಡುತ್ತದೋ ಅದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಪಂಚಾಯತ್ಗಳಿಗೆ ನೀಡಲಾಗಿದೆ. ಇದರೊಂದಿಗೆ ನೈಜ ಸಮಯದಲ್ಲಿ ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡಲು ಕೇಂದ್ರೀಕೃತ ಡ್ಯಾಶ್ಬೋರ್ಡ್ ರಚಿಸಲು ಸಹ ಶಿಫಾರಸು ಮಾಡಲಾಗಿದ್ದು, ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ಅಧಿಕಾರಿಗಳಿಗೆ ಈ ಸಂಬಂಧ ತರಬೇತಿ ಶಿಬಿರಗಳನ್ನು ಆಯೋಜಿಸಲು ಸರ್ಕಾರ ಮುಂದಾಗಿದೆ.

ಭ್ರಷ್ಟಾಚಾರಕ್ಕೆ ಬ್ರೇಕ್: ಸರ್ಕಾರ ಈ ಡಿಜಿಟಲ್ ವಹಿವಾಟು ಅಳವಡಿಕೆ ಮಾಡುತ್ತಿರುವುದರಿಂದಾಗಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದಂತೆ ಆಗುತ್ತದೆ ಎಂದು ಪಂಚಾಯತ್ ರಾಜ್ ಖಾತೆ ರಾಜ್ಯ ಸಚಿವ ಕಪಿಲ್ ಮೊರೇಶ್ವರ ಪಾಟೀಲ ಅಭಿಫ್ರಾಯ ವ್ಯಕ್ತಪಡಿಸಿದ್ದಾರೆ. ಈಗ ಬಹುತೇಕ ಪಂಚಾಯಿತಿಗಳು ಡಿಜಿಟಲ್ ವಹಿವಾಟು ನಡೆಸುತ್ತಿವೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ ಜನವರಿ 2023 ರಲ್ಲಿ, ಭೀಮ್ ಮೂಲಕ 12.98 ಲಕ್ಷ ಕೋಟಿ ಮೌಲ್ಯದ 806.3 ಕೋಟಿ ವ್ಯವಹಾರಗಳು ನಡೆದಿವೆ. ಇದರಲ್ಲಿ ಶೇ.50ರಷ್ಟು ವಹಿವಾಟು ಗ್ರಾಮೀಣ ಬಾಗದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ನಡೆದಿದೆ ಎಂದು ತಿಳಿದುಬಂದಿದೆ.


Click it and Unblock the Notifications








