Yuvanidhi Scheme: ನಿರುದ್ಯೋಗಿಗಳೇ ಗಮನಿಸಿ...ಯುವನಿಧಿಗೆ ಅರ್ಜಿ ಸಲ್ಲಿಸಲು ಈ ದಾಖಲೆ ಸಿದ್ಧಪಡಿಸಿಕೊಳ್ಳಿ!
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೊನೆಗೂ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಯುವನಿಧಿ ಯೋಜನೆಯನ್ನು (Yuvanidhi Scheme) ಜಾರಿ ಮಾಡಿದೆ. ಈ ಮೂಲಕ ಸಾವಿರಾರು ನಿರುದ್ಯೋಗಿಗಳು ನಿಗದಿತ ಕಾಲದ ವರೆಗೆ ಪ್ರತಿ ತಿಂಗಳು ಭತ್ಯೆ ಪಡೆದುಕೊಳ್ಳಬಹುದಾಗಿದ್ದು, ಇದರಿಂದಾಗಿ ಸಾಕಷ್ಟು ಯುವಕರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.
ಹೌದು, ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷ ನೀಡಿದ್ದ 5ಗ್ಯಾರಂಟಿ ಯೋಜನೆಗಳನ್ನೂ ಸಹ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ಇದರಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹ ಲಕ್ಷ್ಮಿ ಯೋಜನೆಯಡಿ ತಿಂಗಳಿಗೆ 2ಸಾವಿರ ರೂಪಾಯಿ, ಅನ್ನ ಭಾಗ್ಯ ಯೋಜನೆ ಪ್ರತಿ ಸದಸ್ಯನಿಗೂ ತಿಂಗಳಿಗೆ 10ಕೆಜಿ ಉಚಿತ ಅಕ್ಕಿ,ಗೃಹ ಜ್ಯೋತಿ ಯೋಜನೆ ಅಡಿ 200ಯುನಿಟ್ ಉಚಿತ ವಿದ್ಯುತ್ ಯೋಜನೆಗಳನ್ನು ಜಾರಿ ಮಾಡಲಾಗಿದ್ದು, ಐದನೇ ಯೋಜನೆ ಆಗಿರುವ ಯುವನಿಧಿ ಸಹ ಜಾರಿಯಾಗಿದೆ.

ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಈ ಯೋಜನೆಗಳನ್ನು ಜಾರಿ ಮಾಡಿದ್ದು, ರಾಜ್ಯದ ಜನರು ಇನ್ಮುಂದೆ ಈ ಯೋಜನೆಗಳನ್ನು ಪಡೆದುಕೊಳ್ಳಬೇಕು ಎಂದರೆ ಕೆಲವು ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಅದರಂತೆ ಯುವ ನಿಧಿಗೆ ಅರ್ಹರಾಗುವ ಯುವಕರೂ ಸಹ ಕೆಲವು ದಾಖಲೆಗಳನ್ನು ಇರಿಸಿಕೊಳ್ಳಬೇಕಾಗಿರುವುದು ಅನಿವಾರ್ಯ. ಈ ಮೂಲಕ ವಂಚನೆಯನ್ನು ತಡೆಗಟ್ಟಲು ಸರ್ಕಾರ ಮುಂದಾಗಿದೆ. ಹಾಗಿದ್ರೆ, ಏನೆಲ್ಲಾ ದಾಖಲೆಗಳು ಬೇಕು, ಯಾರೆಲ್ಲಾ ಈ ಯೋಜನೆಗೆ ಅರ್ಹರು ಎಂಬ ಸಂಪೂರ್ಣ ವಿವರ ತಿಳಿಯಿರಿ.
ಯುವನಿಧಿಗೆ ಯಾರೆಲ್ಲಾ ಅರ್ಹರು?: 2022-23ರಲ್ಲಿ ಉತ್ತೀರ್ಣರಾಗಿರುವ 18 ರಿಂದ 25 ವರ್ಷದೊಳಗಿನ ನಿರುದ್ಯೋಗಿ ಪದವೀಧರರು ಇನ್ಮುಂದೆ ಪ್ರತಿ ತಿಂಗಳು 3000 ರೂ. ನಿರುದ್ಯೋಗ ಭತ್ಯೆ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಡಿಪ್ಲೋಮಾ ವಿದ್ಯಾಭ್ಯಾಸ ಮಾಡಿರುವವರು ಪ್ರತಿ ತಿಂಗಳು 1500ರೂ.ಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಗಮನಿಸಬೇಕಾದ ಪ್ರಮುಖ ವಿಷಯ ಏನೆಂದರೆ ಮಂಗಳಮುಖಿಯರಿಗೂ ಸಹ ಇದು ಅನ್ವಯವಾಗುತ್ತದೆ. ಈ ಪ್ರಕ್ರಿಯೆ 24 ತಿಂಗಳವರೆಗೆ ಮಾತ್ರ ಇರುತ್ತದೆ.
ಈ ಯುವನಿಧಿಗೆ ಅರ್ಹರಾದ ವಿದ್ಯಾರ್ಥಿಗಳು ನಿಗದಿಪಡಿಸಿದ 24 ತಿಂಗಳ ಒಳಗೆ ಖಾಸಗಿ ಅಥವಾ ಸರ್ಕಾರಿ ನೌಕರಿ ಪಡೆದುಕೊಳ್ಳಲು ಪಡೆದುಕೊಂಡರೆ ಅಂತಹ ಪದವೀಧರರಿಗೆ ಹಾಗೂ ಡಿಪ್ಲೋಮಾ ಹೊಂದಿರುವವರಿಗೆ ಈ ಹಣ ನೀಡುವುದನ್ನು ನಿಲ್ಲಿಸಲಾಗುತ್ತದೆ. ಗಮನಿಸಬೇಕಾದ ವಿಷಯ ಏನೆಂದರೆ ಈ ಅರ್ಜಿ ಸಲ್ಲಿಕೆ ಮಾಡಲು ಮುಂದಿನ ಆರು ತಿಂಗಳ ವರೆಗೆ ಕಾಲಾವಕಾಶ ನಿಡಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?: ಯುವನಿಧಿಗೆ ಅರ್ಜಿ ಸಲ್ಲಿಸಲು ಆಫ್ಲೈನ್ ಹಾಗೂ ಆನ್ಲೈನ್ ಎರಡೂ ಆಯ್ಕೆಯನ್ನು ನೀಡಲಾಗುತ್ತವೆ ಎಂದು ಮೂಲಗಳಿಂದ ತಿಳಿದುಬಂದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಈ ಸಂಬಂಧ ವೆಬ್ಸೈಟ್ ಲಭ್ಯವಾಗಲಿದೆ. ಇದರಲ್ಲಿ ನಿರುದ್ಯೋಗಿ ವಿದ್ಯಾರ್ಥಿಗಳು ಅಗತ್ಯ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಈ ಸೇವೆ ಪಡೆದುಕೊಳ್ಳಬಹುದಾಗಿದೆ.
ಯುವನಿಧಿಗೆ ಏನೆಲ್ಲಾ ದಾಖಲೆಗಳು ಬೇಕು?: ಯುವನಿಧಿ ಪ್ರಯೋಜನ ಪಡೆದುಕೊಳ್ಳಲು ಅರ್ಹರಾದ ನಾಡಿನ ಎಲ್ಲಾ ನಿರುದ್ಯೋಗಿಗಳ ಬಳಿ ಕಡ್ಡಾಯವಾಗಿ ಆಧಾರ್ ಕಾರ್ಡ್, ಶಾಶ್ವತ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಶೈಕ್ಷಣಿಕ ಅರ್ಹತೆಯ ದಾಖಲೆಗಳು, ಬ್ಯಾಂಕ್ ಖಾತೆ, ಪಾಸ್ಪೋರ್ಟ್ ಗಾತ್ರದ ಫೋಟೋ, ಮೊಬೈಲ್ ನಂಬರ್ ಇರಬೇಕಿದೆ. ಇದರ ಹೊರತಾಗಿ ಇನ್ನೂ ಯಾವೆಲ್ಲಾ ದಾಖಲೆಗಳನ್ನು ಕೇಳಲಾಗುತ್ತವೆ ಎಂಬುದನ್ನು ಕಾದು ನೋಡಬೇಕು.

ಯುವನಿಧಿಗೆ ಅರ್ಹತಾ ಮಾನದಂಡಗಳೇನು?: ಯಾರೆಲ್ಲಾ ಅರ್ಹರು ಎಂಬುದನ್ನೂ ಈ ಮೊದಲೇ ತಿಳಿಸಿದ್ದೇವೆ. ಆದರೂ ಸಹ ಈ ಅರ್ಹತಾ ಮಾನದಂಡಗಳಿದ್ದರೆ ಮಾತ್ರ ನೀವು ಪ್ರತಿ ತಿಂಗಳು ಹಣ ಪಡೆದುಕೊಳ್ಳಬಹುದು ಎಂಬುದು ಗೊತ್ತಿರಲಿ. ಅಂದರೆ ಅರ್ಜಿದಾರರು ಕರ್ನಾಟಕ ನಿವಾಸಿಯಾಗಿರಬೇಕು, ಪದವಿ ಅಥವಾ ಡಿಪ್ಲೊಮಾ ಮುಗಿಸಿರಬೇಕು, ಅವರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿರಬೇಕು.


Click it and Unblock the Notifications








