ನಿಮ್ಮ ಫೋನ್ಗೆ ತುರ್ತು ಎಚ್ಚರಿಕೆ ಮೆಸೆಜ್ ಬಂದಿದೆಯಾ? ಸರ್ಕಾರ ಯಾಕೆ ಈ ಮೆಸೆಜ್ ಕಳುಹಿಸಿದೆ ಗೊತ್ತಾ?
ಭಾರತದಲ್ಲಿ ಇಂದು ಹಲವಾರು ಜನರು ಎಚ್ಚರಿಕೆಯ ಸಂದೇಶವನ್ನು (Emergency Alert Message) ಸ್ವೀಕಾರ ಮಾಡಿರಬಹುದು, ಇದು ಹಲವರಲ್ಲಿ ಅಚ್ಚರಿ ಹಾಗೂ ಗೊಂದಲ ಉಂಟು ಮಾಡಿದೆ. ಇದನ್ನು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯ ಸೆಲ್ ಬ್ರಾಡ್ಕಾಸ್ಟಿಂಗ್ ಸಿಸ್ಟಮ್ನಿಂದ (Cell Broadcasting System) ಕಳುಹಿಸಲಾಗಿದೆ.
ಹೌದು, ಇಂದು ದೇಶಾದ್ಯಂತ ಹಲವಾರು ಆಂಡ್ರಾಯ್ಡ್ ಫೋನ್(Android phone) ಬಳಕೆದಾರರು ಈ ಮೆಸೆಜ್ ಅನ್ನು ಸ್ವೀಕಾರ ಮಾಡಿದ್ದಾರೆ. ಈ ನಡುವೆ ಕೇಂದ್ರದ ದೂರಸಂಪರ್ಕ ಇಲಾಖೆಯು ಪ್ರಸಾರ ಮಾಡಿದ ಈ ಮೆಸೆಜ್ ತುರ್ತು ಸಂದರ್ಭಗಳಲ್ಲಿ ವರ್ಧಿತ ಸಾರ್ವಜನಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಉಪಕ್ರಮವನ್ನು ಪರೀಕ್ಷಿಸುವ ಒಂದು ಭಾಗವಾಗಿದೆ ಎಂದು ತಿಳಿಸಿದೆ. ಹಾಗಿದ್ರೆ, ಮೆಸೆಜ್ನಲ್ಲಿ ಏನಿದೆ?, ಇದರಿಂದ ಆಗುವ ಪ್ರಯೋಜನ ಏನು? ಎಂಬ ಮಾಹಿತಿ ಇಲ್ಲಿದೆ ನೋಡಿ.

ಮೆಸೆಜ್ನಲ್ಲಿ ಏನಿದೆ?: ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಮೆಸೆಜ್ ಆಗಿದೆ. ದಯವಿಟ್ಟು ಈ ಮೆಸೆಜ್ಅನ್ನು ನಿರ್ಲಕ್ಷಿಸಿ, ನಿಮ್ಮ ಕಡೆಯಿಂದ ಯಾವುದೇ ಕ್ರಮದ ಅಗತ್ಯವಿಲ್ಲ. ಈ ಮೆಸೆಜ್ ಅನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಟೆಸ್ಟ್ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಗೆ ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಉಲ್ಲೇಖಿಸಲಾಗಿದೆ.
ಇನ್ನು ದೂರಸಂಪರ್ಕ ಇಲಾಖೆ ಆಗಾಗ್ಗೆ ಈ ರೀತಿಯ ಮೆಸೆಜ್ಗಳನ್ನು ಜನರಿಗೆ ಕಳುಹಿಸುತ್ತಲೇ ಇರುತ್ತದೆ. ಅದರಂತೆ ಈಗ ಮೊಬೈಲ್ ಆಪರೇಟರ್ಗಳು ಮತ್ತು ಸೆಲ್ ಬ್ರಾಡ್ಕಾಸ್ಟ್ ಸಿಸ್ಟಮ್ಗಳ ತುರ್ತು ಎಚ್ಚರಿಕೆ ಪ್ರಸಾರ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುವ ಉದ್ದೇಶದಿಂದಾಗಿ ಈ ರೀತಿಯ ಮೆಸೆಜ್ ಅನ್ನು ಕಳುಹಿಸಲಾಗಿದ್ದು. ಈ ರೀತಿಯ ಪರೀಕ್ಷೆಗಳನ್ನು ಸಾಂದರ್ಭಿಕವಾಗಿ ವಿವಿಧ ಸ್ಥಳಗಳಲ್ಲಿ ನಡೆಸಲಾಗಿದೆ. ಇನ್ನು ಯಾವೆಲ್ಲಾ ಪ್ರದೇಶಗಳಲ್ಲಿ ಸಮಸ್ಯೆಗಳಾಗುತ್ತದೆಯೇ ಅವರಿಗೆ ಮಾತ್ರ ಈ ಮೆಸೆಜ್ ರವಾನೆ ಆಗುವಂತೆ ಟೆಕ್ನಾಲಜಿ ಅಭಿವೃದ್ಧಿ ಮಾಡಲಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಸರ್ಕಾರವು ಭೂಕಂಪ, ಸುನಾಮಿ ಮತ್ತು ಹಠಾತ್ ಪ್ರವಾಹ (Earthquake, Tsunami, Flood) ಸೇರಿದಂತೆ ಇನ್ನಿತರೆ ವಿಪತ್ತುಗಳಿಗೆ ಪೂರ್ವವಾಗಿ ಜನರನ್ನು ಎಚ್ಚರಗೊಳಿಸಲು ಹಾಗೂ ಈ ಸಮಸ್ಯೆಗಳಿಂದ ಪಾರಾಗಲು ಸಹಾಯಕವಾಗುವಂತೆ ಇದನ್ನು ಬಳಕೆ ಮಾಡಿಕೊಳ್ಳುತ್ತದೆ. ಈಗಾಗಲೇ ಕೆಲವು ವಿಷಯಗಳಲ್ಲಿ ಈ ತುರ್ತು ಎಚ್ಚರಿಕೆಯನ್ನು ನೀಡುತ್ತಾ ಬರಲಾಗಿದ್ದು, ಇದು ವಿವಿಧ ರೀತಿಯಲ್ಲಿ ಪ್ರಯೋಜನಕಾರಿಯಾಗಲಿದೆ.
ಫೋನ್ಗಳಿಗೆ ಯಾಕೆ ಈ ಮೆಸೆಜ್?: ಸಾಮಾನ್ಯವಾಗಿ ಯಾವುದೇ ಪ್ರಕೃತಿ ವಿಕೋಪಗಳು ಸಂಭವಿಸಲಿವೆ ಎಂಬ ಮಾಹಿತಿ ತಿಳಿದಾಕ್ಷಣ ಸರ್ಕಾರ ಟಿವಿ ಹಾಗೂ ರೇಡಿಯೋ ಮೂಲಕ ಮಾಹಿತಿ ನೀಡುತ್ತಿತ್ತು. ಆದರೆ, ಎಲ್ಲರೂ ಎಲ್ಲಾ ಸಮಯದಲ್ಲೂ ಇವುಗಳನ್ನು ಬಳಕೆ ಮಾಡುವುದಿಲ್ಲ.ಆದರೆ, ಫೋಟನ್ ಅನ್ನು ಬಹುಪಾಲು ಮಂದಿ ಸದಾಕಾಲ ಜೊತೆಯಲ್ಲೇ ಇರಿಸಿಕೊಂಡಿರುತ್ತಾರೆ. ಈ ಕಾರಣಕ್ಕೆ ಪ್ರಕೃತಿ ವಿಕೋಪದ ಮಾಹಿತಿ ಕ್ಷಣ ಮಾತ್ರದಲ್ಲಿ ಆಯಾ ಪ್ರದೇಶದ ಜನರಿಗೆ ತಿಳಿಯಲು ಈ ಮೆಸೆಜ್ ಪರಿಣಾಮಕಾರಿಯಾಗಿದೆ.

ಇನ್ನೊಂದು ಘಟನೆಯಲ್ಲಿ ಕೇಂದ್ರದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಆಂಡ್ರಾಯ್ಡ್ ನಲ್ಲಿ ಕೆಲವು ಸಮಸ್ಯೆಗಳನ್ನು ಪತ್ತೆ ಮಾಡಿದ್ದು, ಎಲ್ಲರಿಗೂ ನಿನ್ನೆಯಷ್ಟೇ ಎಚ್ಚರಿಕೆ ನೀಡಿತ್ತು. ಅಂದರೆ ಆಂಡ್ರಾಯ್ಡ್ ಆವೃತ್ತಿ 10,11,12,12L ಮತ್ತು 13 ನಲ್ಲಿ ಗಂಭೀರ ಸಮಸ್ಯೆಗಳಿದ್ದು, ಈ ಸಮಸ್ಯೆಗಳು ಆರ್ಕಿಟೆಕ್ಚರ್, ಆಂಡ್ರಾಯ್ಡ್ ರನ್ಟೈಮ್, ಸಿಸ್ಟಮ್ ಕಾಂಪೊನೆಂಟ್, ಗೂಗಲ್ ಪ್ಲೇ ಸಿಸ್ಟಮ್ ಅಪ್ಡೇಟ್ಗಳು, ಕರ್ನಲ್, ARM ಕಾಂಪೊನೆಂಟ್ಗಳು, ಮೀಡಿಯಾ ಟೆಕ್ ಘಟಕಗಳು ಮತ್ತು ಕ್ವಾಲ್ಕಾಮ್ನಲ್ಲಿನ ದೋಷಗಳಿಂದ ಉಂಟಾಗಿವೆ ಎಂದು ಉಲ್ಲೇಖ ಮಾಡಿದೆ.
ಅದರಂತೆ ಹಲವಾರು ದುರ್ಬಲತೆಗಳ ಪಟ್ಟಿಯನ್ನೇ(vulnerabilities List) ನೀಡಿದ್ದು, ಇತ್ತೀಚಿನ ಭದ್ರತಾ ಪ್ಯಾಚ್ಗಳಿಗೆ ಸಾಧ್ಯವಾದಷ್ಟು ಬೇಗ ನವೀಕರಿಸುವಂತೆ CERT-In ಸಲಹೆ ನೀಡಿದೆ. ಈ ನ್ಯೂನತೆಗಳನ್ನು ಸರಿಪಡಿಸಲು ಗೂಗಲ್ ಈಗಾಗಲೇ ಭದ್ರತಾ ಪ್ಯಾಚ್ಗಳನ್ನು ಬಿಡುಗಡೆ ಮಾಡಿದ್ದು, ಬಳಕೆದಾರರು ಆಂಡ್ರಾಯ್ಡ್ ಸೆಕ್ಯುರಿಟಿ ಬುಲೆಟಿನ್ ಆಗಸ್ಟ್ 2023 ಅನ್ನು ಪರಿಶೀಲಿಸಬಹುದು ಎಂದು ತಿಳಿಸಲಾಗಿದೆ.
ಈ ರೀತಿಯ ಸಮಸ್ಯೆಗಳಿಂದ ಪಾರಾಗಲು ನೀವು ಯಾವಾಗಲೂ ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಆಪ್ಗಳನ್ನು ಇನ್ಸ್ಟಾಲ್ ಮಾಡಿ ಹಾಗೂ ಮಾಲ್ವೇರ್ ವಿರುದ್ಧ ಹೋರಾಡಲು ನಿಮ್ಮ ಡಿವೈಸ್ಗಳನ್ನು ಸ್ಕ್ಯಾನ್ ಮಾಡಲು ಭದ್ರತಾ ಆಪ್ಗಳನ್ನೂ ಬಳಸಿ. ಇದರೊಂದಿಗೆ ವಿಶ್ವಾಸಾರ್ಹ ಇಮೇಲ್ಗಳನ್ನು ಮಾತ್ರ ಕ್ಲಿಕ್ ಮಾಡಿ, ಪ್ರಬಲವಾದ ಪಾಸ್ವರ್ಡ್ ಅನ್ನು ಬಳಕೆ ಮಾಡುವುದರ ಜೊತೆಗೆ ಎರಡು-ಹಂತದ ಪರಿಶೀಲನೆ ಫೀಚರ್ಸ್ ಬಳಕೆ ಮಾಡಿ.


Click it and Unblock the Notifications








