ಮೊಬೈಲ್ ಬೇಹುಗಾರಿಕೆ: ಇಬ್ಬರು ಟೆಕ್ಕಿಗಳ ಬಂಧನ
ಮೊಬೈಲ್ಗಳಿಗೆ ಬೇಹುಗಾರಿಕಾ ಸಾಫ್ಟ್ವೇರ್ ಅಳವಡಿಸಿ ಕರೆ, ಸಂದೇಶ,ಫೋಟೋ ಕದಿಯುತ್ತಿದ್ದ ಇಬ್ಬರು ಟೆಕ್ಕಿಗಳನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪುಣೆ ಮೂಲದ ವೀರೇಂದ್ರ ಸಿಂಗ್ ರಾವತ್ ಹಾಗೂ ನಿಖಿಲ್ ಗಿರಿ ಎಂಬುವರು ಲಿನಕ್ಸ್ ಸೆಕ್ಯುರಿಟಿ ಆ್ಯಂಡ್ ಡಿಟೆಕ್ಟಿವ್ ಸರ್ವೀಸ್ ಪ್ರೈ.ಲಿ(Lynx Security and Detective Services Pvt Ltd) ಕಂಪೆನಿ ನಡೆಸುತ್ತಿದ್ದು,ನಿಷೇಧಿತ ಸ್ಪೈ ಸಾಫ್ಟ್ವೇರ್ ಬಳಸಿ ಮೊಬೈಲ್ ಡೇಟಾ ಕಳವು ಮಾಡುತ್ತಿದ್ದರು. ತಮ್ಮ ಸಂಸ್ಥೆಗೆ ದೂರು ನೀಡಿದ ವ್ಯಕ್ತಿಯ ವಿರೋಧಿ ಬಣಕ್ಕೆ ಗೊತ್ತಿಲ್ಲದಂತೆ ಅವರ ಮೊಬೈಲ್ಗೆ ಸಾಫ್ಟ್ವೇರ್ ಡೌನ್ ಲೋಡ್ ಮಾಡಿ, ಕರೆ, ಇ ಮೇಲ್,ಫೋಟೋಗಳನ್ನು ಜಿಪಿಆರ್ಎಸ್ ಮೂಲಕ ತಮ್ಮ ಸರ್ವರ್ಗೆ ಅಪ್ಲೋಡ್ ಮಾಡುವಂತೆ ಸಾಫ್ಟ್ವೇರ್ನ್ನು ರೂಪಿಸಿದ್ದರು.

ಕಕ್ಷಿದಾರರಿಗೆ ವಿರೋಧಿಗಳ ಈ ಎಲ್ಲಾ ಮಾಹಿತಿ ತಿಳಿಯಲು ಅವರಿಗೂ ಒಂದು ಬಳಕೆದಾರರ ಹೆಸರು ಮತ್ತು ಪಾಸ್ವರ್ಡ್ಗಳನ್ನು ನೀಡಿದ್ದರು. ಆರೋಪಿ ವೀರೇಂದ್ರ ಸಿಂಗ್ ರಾವತ್ ಕಂಪ್ಯೂಟರ್ ಕೋಡ್ ಬರೆಯುವವರ ಸಹಕಾರದಿಂದ ಆಂಡ್ರಾಯ್ಡ್ ಮತ್ತು ಬ್ಲ್ಯಾಕ್ಬೆರಿ ಓಎಸ್ ಫೋನಿಗೆ ಸಂಬಂಧಿಸಿದಂತೆ ಈ ಸಾಫ್ಟ್ವೇರ್ನ ತಯಾರಿಸಿದ್ದು, ಪೆರು ಮೂಲದ www.controlem.com ಕಂಪನಿಯೊಂದಿಗೆ ಸೇರಿ ಈ ಬೇಹುಗಾರಿಕಾ ಸಾಫ್ಟ್ವೇರ್ನ್ನು ಉತ್ಪಾದಿಸುತ್ತಿದ್ದ.
ಈ ಸಾಫ್ಟ್ವೇರ್ ಬಳಕೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ.ವೀರೇಂದ್ರಸಿಂಗ್ ರಾವತ್, ದೇಶದ ಹಲವು ಭಾಗಗಳಲ್ಲಿರುವ ಸೆಕ್ಯುರಿಟಿ ಮತ್ತು ಗೂಢಚಾರ ಏಜೆನ್ಸಿಗಳಿಗೆ ಸುಮಾರು 65 ಸಾವಿರ ರೂ.ಗೆ ಈ ಸಾಫ್ಟ್ವೇರ್ನ್ನು ಮಾರುತ್ತಿದ್ದ.
ಸಂಸ್ಥೆಗಳ ವಿವಾದ,ನೌಕರರ ಜಗಳ,ದಂಪತಿಗಳ ವೈವಾಹಿಕ ಜೀವನ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದ ಬರುತ್ತಿದ್ದ ದೂರುಗಳಿಗೆ ಈ ಆರೋಪಿಗಳು ಸಾಫ್ಟ್ವೇರ್ ಬಳಸಿ ಬೇಹುಗಾರಿಕೆ ಮಾಡುತ್ತಿದ್ದರು ಎನ್ನಲಾಗಿದೆ.
ಪೊಲೀಸರು ಇವರ ಕಂಪೆನಿಗೆ ದಾಳಿ ಮಾಡಿ ಕಂಪ್ಯೂಟರ್, ಹಾರ್ಡ್ ಡಿಸ್ಕ್, ಸಾಫ್ಟ್ವೇರ್ಗಳನ್ನು ವಶಪಡಿಸಿಕೊಂಡಿದ್ದು,ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಫೋನ್ ಟ್ಯಾಪಿಂಗ್ ಯಾಕೆ ? ಹೇಗೆ ? ಯಾರು ಮಾಡಬಹುದು?
ಇದನ್ನೂ ಓದಿ: ಫೋನ್ ಟ್ಯಾಪಿಂಗ್: 2 ಕೋಟಿ ದಂಡ


Click it and Unblock the Notifications








