ಒಂದು ವಾಟ್ಸ್ಆಪ್ ಸಂದೇಶ: ಬದಲಾಯಿತು ಬಾಲಕಿ ಬಾಳು.!! ಏನದು..??
ಅಪ್ರಾಪ್ತ ವಯಸ್ಸಿಗೆ ಮದುವೆಯಾಗಿ ಕಷ್ಟದ ಬಾಳು ಅನುಭವಿಸಬೇಕಿದ್ದ ಹೆಣ್ಣುಮಗಳೊಬ್ಬಳ ಬಾಳಿಗೆ ಒಂದು ವಾಟ್ಸ್ಆಪ್ ಸಂದೇಶ ಬೆಳಕಾಗಿ ಬಂದಿದೆ.
ಸೋಶಿಯಲ್ ಮೇಸೆಜಿಂಗ್ ಆಪ್ ವಾಟ್ಸ್ಆಪ್ ಇಂದು ಸಮಾಜದಲ್ಲಿ ಬಿರುಕು ಮೂಡಿಸುವ ಕಾರ್ಯ ಮಾಡುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿರುವ ಹಿನ್ನಲೆಯಲ್ಲೇ ಸಮಾಜದಲ್ಲಿ ಸ್ವಾಸ್ಥ್ಯ ಮತ್ತು ಬದಲಾವಣೆಯನ್ನು ಮೂಡಿಸುವಲ್ಲಿಯೂ ತನ ಕೊಡುಗೆಯನ್ನು ನೀಡುತ್ತಿದೆ ಎನ್ನುವುದಕ್ಕೆ ತಾಜ ಉದಾಹರಣೆಯೊಂದು ನಮ್ಮ ಮುಂದಿದೆ. ಅಪ್ರಾಪ್ತ ವಯಸ್ಸಿಗೆ ಮದುವೆಯಾಗಿ ಕಷ್ಟದ ಬಾಳು ಅನುಭವಿಸಬೇಕಿದ್ದ ಹೆಣ್ಣುಮಗಳೊಬ್ಬಳ ಬಾಳಿಗೆ ಒಂದು ವಾಟ್ಸ್ಆಪ್ ಸಂದೇಶ ಬೆಳಕಾಗಿ ಬಂದಿದೆ.

ಮಹಾರಾಷ್ಟದ ಪತ್ರಕರ್ತೆಯೊಬ್ಬರಿಗೆ ಬಂದ ವಾಟ್ಸ್ಆಪ್ ಸಂದೇಶವೊಂದು ಅಪ್ರಾಪ್ತ ಬಾಲಕಿಯ ಮದುವೆಯನ್ನು ತಪ್ಪಿಸಲು ಸಹಕಾರಿಯಾಗಿದೆ. ಅಪ್ರಾಪ್ತ ಬಾಲಕಿ ವಿವಾಹದ ವಿಚಾರವಾಗಿ ಅಕ್ಕ-ಪಕ್ಕದ ಮನೆಯವರೊಬ್ಬರು ಮುಂಬೈ ಮೂಲದ ಪತ್ರಕರ್ತೆಯೊಬ್ಬರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯನ್ನು ಪಡೆದ ಪತ್ರಕರ್ತೆ, ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷರಿಗೆ ವಾಟ್ಸ್ಆಪ್ ಮೂಲಕ ಮಾಹಿತಿ ತಲುಪಿಸಿದ್ದಾರೆ.

ತಕ್ಷಣ ಕಾರ್ಯಚರಣೆ:
ವಾಟ್ಸ್ಆಪ್ ಮೂಲಕ ತಲುಪಿದ ಮಾಹಿತಿಯನ್ನು ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷರಾದ ವಿಜಯ್ ರಾತೆ ತಕ್ಷಣ ಕಾರ್ಯ ಪ್ರವರ್ತರಾಗಿ ಪೊಲೀಸರಿಗೆ ಈ ಮದುವೆಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಈ ಕರೆಗೆ ಸ್ಪಂದಿಸಿದ ಪೊಲೀಸರು ಮದುವೆ ಸ್ಥಳಕ್ಕೆ ಆಗಮಿಸಿ, ಬಾಲಕಿಯನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.

2 ಗಂಟೆಯಲ್ಲೇ ಮುಗಿದ ಕಾರ್ಯ:
ಬೆಳಿಗ್ಗೆ 9 ಗಂಟೆಗೆ ಪೋಲಿಸರಿಗೆ ಮಾಹಿತಿ ನೀಡಿದ ಮಹಿಳಾ ಆಯೋಗದ ಅಧ್ಯಕ್ಷರು ಶೀಘ್ರವೇ ಘಟನೆ ಸ್ಥಳಕ್ಕೆ ಇಬ್ಬರು ಪೊಲೀಸರನ್ನು ಕಳುಹಿಸುವಂತೆ ಸೂಚಿಸಿದ್ದಾರೆ. ಅದರಂತೆ ಕಾರ್ಯಚರಣೆ ನಡೆಸಿದ ಪೊಲೀಸರು ಕೇವಲ 2 ಗಂಟೆಗಳಲ್ಲಿ ದೇವಸ್ಥಾನವೊಂದರಲ್ಲಿ ನಡೆಯುತ್ತಿದ್ದ ಮದುವೆ ಸ್ಥಳಕ್ಕೆ ತಲುಪಿ ಬೆಳಿಗ್ಗೆ 11 ಗಂಟೆಯಷ್ಟರಲ್ಲಿ ಬಾಲಕಿಯನ್ನು ರಕ್ಷಿಸಿದ್ದಾರೆ.

ಪೋಷಕರಿಗೆ ಎಚ್ಚರಿಕೆ:
ಹೀಗೆ ಅಪ್ರಾಪ್ತ ಬಾಲಕಿಗೆ ಮದುವೆ ಮಾಡುತ್ತಿದ್ದ ಪೋಷಕರಿಗೆ ಪೋಲೀಸರು ಎಚ್ಚರಿಕೆ ನೀಡಿದ್ದು, ಬಾಲಕಿಯ ಕುಟುಂಬವೂ ತೀರ ಬಡತನದಲ್ಲಿ ಇದ್ದ ಕಾರಣಕ್ಕೆ ಈ ಮದುವೆಯನ್ನು ಅದಷ್ಟು ಬೇಗ ಮಾಡಲು ತಯಾರಿ ನಡೆಸಿದ್ದರು ಎನ್ನಲಾಗಿದೆ.

ಸಮಾಜ ಮುಖಿಯಾದ ವಾಟ್ಸ್ಆಪ್:
ಹೀಗೆ ಒಂದೇ ಒಂದು ವಾಟ್ಸ್ಆಪ್ ಸಂದೇಶ ಒಂದು ಹುಡುಗಿಯ ಬಾಳಿಗೆ ಬೆಳಕಾಗಿದೆ. ಈ ಹಿನ್ನಲೆಯಲ್ಲಿ ಸೋಶಿಯಲ್ ಮೀಡಿಯಾಗಳು ಒಂದು ರೀತಿಯಲ್ಲಿ ಸಮಾಜದ ಪರಿರ್ತನೆಗೆ ಕಾರಣವಾಗುತ್ತಿದೆ ಎಂದರೆ ತಪ್ಪಾಗುವುದಿಲ್ಲ ಎನ್ನಿಸುತ್ತದೆ.


Click it and Unblock the Notifications








