ಕೊನೆಗೂ ಸರ್ಕಾರಕ್ಕೆ ತಲೆಬಾಗಿದ 'ವಾಟ್ಸ್ಆಪ್'ನಿಂದ ಮಹತ್ವದ ನಿರ್ಧಾರ!
ಸುಳ್ಳುಸುದ್ದಿ ಮತ್ತು ಪ್ರಚೋದನಕಾರಿ ಸಂದೇಶಗಳು ಹತ್ತಿಕ್ಕುವಂತಹ ಭಾರತದ ಸರ್ಕಾರದ ಸೂಚನೆಯನ್ನು ಅನುಸರಿಸಲು ಸಾಧ್ಯವಿಲ್ಲ ಎಂದಿದ್ದ ವಾಟ್ಸ್ಆಪ್ ಸಂಸ್ಥೆ ಈಗ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಸುಳ್ಳುಸುದ್ದಿ ವಿಷಯದಲ್ಲಿ ವಾಟ್ಸ್ಆಪ್ ಮತ್ತು ಸರ್ಕಾರದ ಜಟಾಪಟಿ ನಡುವೆಯೇ, ಕೇಂದ್ರ ಸರ್ಕಾರ ನಡೆಸಿದ ಪ್ರಯತ್ನಗಳಿಗೆ ಕೊನೆಗೂ ಫಲಸಿಕ್ಕಿದೆ.
ವಾಟ್ಸ್ಆಪ್ ಮೂಲಕ ಹರಡಬಹುದಾದ ಸುಳ್ಳುಸುದ್ದಿಗಳು ಗುಂಪುಹತ್ಯೆಗೆ ಕಾರಣವಾಗುವ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಕಂಪನಿಯು ವಾಟ್ಸ್ಆಪ್ ಸಂಸ್ಥೆ, ಈ ವರ್ಷಾಂತ್ಯದೊಳಗೆ ಭಾರತದ ಕಾರ್ಯನಿರ್ವಹಣೆಗಾಗಿ ಹೊಸ ಮುಖ್ಯಸ್ಥರನ್ನು ನೇಮಿಸುವುದಾಗಿ ಹೇಳಿದೆ. ಇದರಿಂದ ಭಾರತದಲ್ಲಿ ವಾಟ್ಸ್ಆಪ್ ಸಂಸ್ಥೆ ಬ್ಯಾನ್ ಆಗಬಹುದಾದ ಸಂಭವಗಳನ್ನು ತಪ್ಪಿಸಿಕೊಂಡಿದೆ ಎನ್ನಲಾಗಿದೆ.

ಇದರಿಂದ ಸುಳ್ಳುಸುದ್ದಿಗಳನ್ನು ಹುಟ್ಟುಹಾಕುವವರನ್ನು ಪತ್ತೆಹಚ್ಚಲು ಸರ್ಕಾರದ ಪ್ರಯತ್ನಕ್ಕೆ ಇದು ಸಹಕಾರಿಯಾಗಬಹುದು ಎಂದು ಹೇಳಲಾಗಿದ್ದರು, ಬಳಕೆದಾರರು ಕಳುಹಿಸುವ ಎನ್ಕ್ರಿಪ್ಟೆಡ್ ಸಂದೇಶಗಳನ್ನು ಡಿಕ್ರಿಪ್ಟ್ ಮಾಡುವುದಿಲ್ಲ ಎಂದು ವಾಟ್ಸ್ಆಪ್ ತಿಳಿಸಿದೆ. ಹಾಗಾದರೆ, ಏನಿದು ವಾಟ್ಸ್ಆಪ್ ಮತ್ತು ಸರ್ಕಾರದ ಜಟಾಪಟಿ ಎಂಬುದನ್ನು ಮುಂದಿನ ಸ್ಲೈಡರ್ಗಳಲ್ಲಿ ತಿಳಿಯಿರಿ.

ವಾಟ್ಸ್ಆಪ್ಗೆ ಸರ್ಕಾರ ಹೇಳಿದ್ದೇನು?
ದೇಶದಲ್ಲಿ ವಾಟ್ಸ್ಆಪ್ ಮೂಲಕ ಸುಳ್ಳು ಸುದ್ದಿ ಮತ್ತು ನಕಲಿ ಸಂದೇಶ ರವಾನೆಯಾಗಿ ಅದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದನ್ನು ತಡೆಯಲು ಕೇಂದ್ರ ಸರಕಾರ ಮುಂದಾಗಿತ್ತು. ಅಂತಹ ಸುದ್ದಿಗಳ ಮೂಲ ಪತ್ತೆಹಚ್ಚಲು ಕ್ರಮ ಕೈಗೊಳ್ಳುವಂತೆ ವಾಟ್ಸಪ್ಗೆ ಸೂಚನೆ ನೀಡಿ ಅದಕ್ಕಾಗಿ ಅಗತ್ಯ ತಾಂತ್ರಿಕ ಬದಲಾವಣೆ ಮಾಡಬೇಕು ಎಂದು ಹೇಳಿತ್ತು. ಇದನ್ನು ವಾಟ್ಸ್ಆಪ್ ನಿರಾಕರಿಸಿತ್ತು.

ವಾಟ್ಸ್ಆಪ್ ನಿರಾಕರಿಸಿದ್ದು ಏಕೆ?
ತಾಂತ್ರಿಕ ಬದಲಾವಣೆ ಮಾಡಬೇಕು ಎಂಬ ಸರ್ಕಾರದ ಈ ಸೂಚನೆಗೆ ಪ್ರತಿಕ್ರಿಯಿಸಿದ ವಾಟ್ಸ್ಆಪ್, ಕೇಂದ್ರದ ಬೇಡಿಕೆಯನ್ನು ತಿರಸ್ಕರಿಸಿತ್ತು. ತನ್ನ ಬಳಕೆದಾರರ ಸಂದೇಶವನ್ನು ಕಂಪನಿ ನೋಡುವುದಿಲ್ಲ, ಅವರ ವೈಯಕ್ತಿಕ ಮಾಹಿತಿ ಮತ್ತು ಹಿತಾಸಕ್ತಿ ರಕ್ಷಿಸುವುದು ಕಂಪನಿಯ ನಿಯಮವಾಗಿದ್ದು, ಸಂದೇಶಗಳು ಹತ್ತಿಕ್ಕುವಂತಹ ಸೂಚನೆಯನ್ನು ಅನುಸರಿಸಲು ಸಾಧ್ಯವಿಲ್ಲ, ಅದನ್ನು ಮೀರಲಾಗದು ಎಂದು ಹೇಳಿತ್ತು.

ಬ್ಯಾನ್ ಮಾಡಲು ಯೋಚಿಸಿತ್ತು ಸರ್ಕಾರ!
ದೇಶದಲ್ಲಿನ ನಡೆದಿರುವ ಹಲವು ಗಲಭೆ ಪ್ರಕರಣಗಳಲ್ಲಿ ವಾಟ್ಸ್ಆಪ್ ಮೂಲಕ ಹರಡಲಾದ ಸಂದೇಶವೇ ಗಲಭೆಗೆ ಮೂಲ ಎಂದು ತನಿಖೆಯ ವೇಳೆ ಪತ್ತೆಯಾಗಿದೆ. ಹೀಗಾಗಿ ಅದನ್ನು ಪತ್ತೆಹಚ್ಚಲು ವಾಟ್ಸಪ್ ಸೂಕ್ತ ವ್ಯವಸ್ಥೆ ರೂಪಿಸಲೇಬೇಕು. ಇಲ್ಲದಿದ್ದರೆ ವಾಟ್ಸ್ಆಪ್ ನಿಷೇಧಕ್ಕೆ ಚಿಂತಿಸಲಾಗುವುದು ಎಂದು ಸರ್ಕಾರ ಮತ್ತೊಮ್ಮೆ ಎಚ್ಚರಿಸಿದೆ ಎಂದು ಹೇಳಲಾಗಿತ್ತು. ಇದರಿಂದ ವಾಟ್ಸ್ಆಪ್ ಕೂಡ ಒಮ್ಮೆ ಹೆದರಿತ್ತು.

ರಾಜಿಮಾಡಿಕೊಳ್ಳಲು ಮುಂದಾಯ್ತು ವಾಟ್ಸ್ಆಪ್!
ಸುಳ್ಳುಸುದ್ದಿ ಮತ್ತು ಪ್ರಚೋದನಕಾರಿ ಸಂದೇಶಗಳು ಹತ್ತಿಕ್ಕಲು ತಾಂತ್ರಿಕ ಬದಲಾವಣೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಕಾನೂನು ತಜ್ಞರು ಪ್ರಶ್ನಿಸಿದ್ದನ್ನು ವಾಟ್ಸ್ಆಪ್ ಗಮನಿಸಿತ್ತು. ಆದರೆ, ಇದು ಬಳಕೆದಾರರ ಖಾಸಾಗೀತನಕ್ಕೆ ಅಡ್ಡಿಪಡಿಸಿದಂತಾಗುತ್ತದೆ ಎಂದು ವಾಟ್ಸ್ಆಪ್ ತಿಳಿಸಿತ್ತು. ಆದರೂ ಈಗ ಭಾರತದ ಕಾರ್ಯನಿರ್ವಹಣೆಗಾಗಿ ಹೊಸ ಮುಖ್ಯಸ್ಥರನ್ನು ನೇಮಿಸುವ ಮೂಲಕ ರಾಜಿಮಾಡಿಕೊಳ್ಳಲು ಸಂಸ್ಥೆ ಮುಂದಾಗಿದೆ.

ಇನ್ನೆರಡು ತಿಂಗಳಲ್ಲಿ ನೇಮಕ!
ಬುಧವಾರ ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ರನ್ನು ಭೇಟಿಯಾದ ಬಳಿಕ ವಾಟ್ಸಪ್ ಉಪಾಧ್ಯಕ್ಷ ಕ್ರಿಸ್ ಡೇನಿಯಲ್ಸ್, ಭಾರತಕ್ಕಾಗಿಯೇ ಹೊಸ ಮುಖ್ಯಸ್ಥನನ್ನು ನೇಮಿಸುವುದಾಗಿ ಪ್ರಕಟಿಸಿದ್ದಾರೆ.ಈ ವರ್ಷಾಂತ್ಯದೊಳಗೆ ಭಾರತದ ಹೊಸ ಮುಖ್ಯಸ್ಥನನ್ನು ನೇಮಿಸಲಾಗುವುದು. ಅವರು ಭಾರತದ ಗ್ರಾಹಕರಿಗೆ ಅನುಕೂಲವಾಗುವಂತೆ ಹಾಗೂ ಜನರ ಸುರಕ್ಷತೆ ಖಚಿತಪಡಿಸಲು ಸರ್ಕಾರದೊಂದಿಗೆ ಸೇರಿ ಕೆಲಸ ಮಾಡಲಿದ್ದಾರೆ ಎಂದು ಕಂಪನಿಯು ಹೇಳಿದೆ.


Click it and Unblock the Notifications








