ಪಿಎಂ ಮೋದಿಗೂ ಬಿಟ್ಟಿಲ್ಲ ಕಾಲ್ ಡ್ರಾಪ್ ಸಮಸ್ಯೆ..! ಶಾಶ್ವತ ಪರಿಹಾರಕ್ಕೆ ನಮೋ ಸೂಚನೆ
ಯಾರ್ ಜೊತೆನೋ ಅತಿ ಮುಖ್ಯವಾದ ವಿಷಯವನ್ನು ಫೋನ್ನಲ್ಲಿ ಮಾತಾಡ್ತಾ ಇರ್ತಿವಿ. ಆಗ ಇದ್ದಕ್ಕಿದ್ದಂತೆ ಕಾಲ್ ಕಟ್ ಆಗಿ, ಮಾತುಕತೆ ತನ್ನ ಸ್ವಾದ ಕಳೆದುಕೊಳ್ಳುತ್ತದೆ. ಈ ಸಮಸ್ಯೆ ಕೇವಲ ನಮ್ಮ, ನಿಮ್ಮಂತ ಜನಸಾಮಾನ್ಯರಿಗೆ ಮಾತ್ರ ಅಲ್ಲ. ರಾಷ್ಟ್ರವಾಳುವ ನಾಯಕರೂ ಸಹ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಹೊರತಾಗಿಲ್ಲ.

ಹೌದು, ಪ್ರಧಾನಿ ಮೋದಿ ದೆಹಲಿ ವಿಮಾನ ನಿಲ್ದಾಣದಿಂದ ಮನೆಗೋಗುವ ದಾರಿಯಲ್ಲಿ ಈ ಕಾಲ್ ಡ್ರಾಪ್ ಸಮಸ್ಯೆ ಕಾಡುತ್ತಿದೆ ಎಂದು ಹೇಳಿ ಟೆಲಿಕಾಂ ಇಲಾಖೆಗೆ ಪರಿಹಾರ ಹುಡುಕಲು ಸೂಚಿಸಿದ್ದು, ಈ ಮೂಲಕ ಗ್ರಾಹಕರ ತೃಪ್ತಿಯನ್ನು ಕಾಪಾಡಲು ಟೆಲಿಕಾಂ ಆಪರೇಟರ್ಗಳು ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಪ್ರಗತಿಯಲ್ಲಿ ಸಮಸ್ಯೆ ಹಂಚಿಕೊಂಡ ಮೋದಿ
ಟೆಲಿಕಾಂ ಕಾರ್ಯದರ್ಶಿ ಅರುಣಾ ಸುಂದರ್ರಾಜನ್ ಗ್ರಾಹಕರು ಕಾಲ್ ಡ್ರಾಪ್ ಸೇರಿ ಮತ್ತಿತರ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸಿರುವ ವಿವರಗಳನ್ನು ಪ್ರಕಟಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ತಮಗಾದ ಸಮಸ್ಯೆಯನ್ನು ಪ್ರಗತಿ ಯೋಜನೆಯಡಿ ಪ್ರತಿ ತಿಂಗಳು ನಡೆಯುವ ಮುಖ್ಯ ಕಾರ್ಯದರ್ಶಿಗಳ ವೆಬ್ ಆಧಾರಿತ ಸಮಾಲೋಚನೆಯಲ್ಲಿ ಹೇಳಿಕೊಂಡಿದ್ದಾರೆ.

ಶೀಘ್ರ ಪರಿಹಾರಕ್ಕೆ ಸೂಚನೆ
ಕೇವಲ ದೆಹಲಿ ವಿಮಾನ ನಿಲ್ದಾಣದ ರಸ್ತೆಯಲ್ಲಿಯೇ ಜನ ಇಷ್ಟೊಂದು ಕಾಲ್ ಡ್ರಾಪ್ ಸಮಸ್ಯೆ ಅನುಭವಿಸುತ್ತಿರುವಾಗ ಇಡೀ ದೇಶಾದ್ಯಂತ ಈ ಸಮಸ್ಯೆ ಹೇಗಿರಬಹುದೆಂದು ಬೇಸರ ವ್ಯಕ್ತಪಡಿಸಿದ ಪ್ರಧಾನಿ ಮೋದಿ ಅಧಿಕಾರಿಗಳಿಗೆ ಶೀಘ್ರದಲ್ಲಿಯೇ ಪರಿಹಾರ ಕಂಡು ಹಿಡಿಯಲು ಸೂಚನೆ ನೀಡಿದ್ದು, ಟೆಲಿಕಾಂ ಸಮಸ್ಯೆಗಳು ಬಗೆ ಹರಿಯುತ್ತವಾ ಎಂಬುದನ್ನು ಕಾದು ನೋಡಬೇಕಾಗಿದೆ.

ಕಾಲ್ ಡ್ರಾಪ್ಗೆ ದಂಡ ಎಷ್ಟು..?
ಕೇವಲ ಸಮಸ್ಯೆ ಪರಿಹರಿಸುವಂತೆ ಸೂಚಿಸದ ಪ್ರಧಾನಿ ಮೋದಿ ಕಾಲ್ ಡ್ರಾಪ್ ಆದರೆ ಟೆಲಿಕಾಂ ಆಪರೇಟರ್ಗಳಿಗೆ ಎಷ್ಟು ದಂಡ ವಿಧಿಸಲಾಗುತ್ತದೆ ಎಂದು ಟೆಲಿಕಾಂ ಕಾರ್ಯದರ್ಶಿಗೆ ಕೇಳಿದ್ದಾರೆ. ಅದಕ್ಕೆ ಅರುಣಾ ಸುಂದರ್ರಾಜನ್ ಪ್ರತಿಕ್ರಿಯಿಸಿ ಟ್ರಾಯ್ನ ಸದ್ಯದ ನಿಯಮಗಳಂತೆ ಪ್ರತಿ 3 ಕಾಲ್ ಡ್ರಾಪ್ಗಳಗೆ 1 ರೂ. ದಂಡ ವಿಧಿಸಲಾಗುವುದು. ಇದನ್ನು ಟ್ರಾಯ್ ಸೇವೆಯ ಗುಣಮಟ್ಟಕ್ಕಾಗಿ ತಂದಿದ್ದು, ಕಳಪೆ ನೆಟ್ವರ್ಕ್ ಹೊಂದಿರುವ ಟೆಲಿಕಾಂ ಆಪರೇಟರ್ಗಳಿಗೆ ಹೆಚ್ಚಿನ ದಂಡ ವಿಧಿಸುವ ಆಯ್ಕೆ ಇದೆಯೆಂದು ಹೇಳಿದ್ದಾರೆ.

PMOದಿಂದ ಅಧಿಕೃತ ಹೇಳಿಕೆ
ಟೆಲಿಕಾಂ ಕ್ಷೇತ್ರಕ್ಕೆ ಸಂಬಂಧಿಸಿರುವ ಸಮಸ್ಯೆಗಳಿಗೆ ಅತ್ಯಾಧುನಿಕ ಹಾಗೂ ಹೊಸ ತಂತ್ರಜ್ಞಾನದಿಂದ ಪರಿಹಾರ ಕಂಡುಕೊಳ್ಳಬೇಕು. ಹಾಗೂ ಗ್ರಾಹಕರಿಗೆ ಅತ್ಯುತ್ತಮ ತೃಪ್ತಿ ನೀಡುವಂತೆ ಟೆಲಿಕಾಂ ಆಪರೇಟರ್ಗಳು ಸೇವೆ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ ಎಂದು PMO ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಗಡಿಯಲ್ಲಿ ಉತ್ತಮ ಸೇವೆ ಕೊಡಿ
ಪ್ರಧಾನಿ ಮೋದಿ ಗಡಿ ಭಾಗದಲ್ಲಿ ಉತ್ತಮ ಸೇವೆಗಳನ್ನು ನೀಡುವಂತೆ ಟಲಿಕಾಂ ಆಪರೇಟರ್ಗಳಿಗೆ ಸಲಹೆ ನೀಡಿದ್ದಾರೆ. ಈ ಮೂಲಕ ಭಾರತ ವಿರೋಧಿ ರಾಷ್ಟ್ರಗಳ ಸೇವೆಗಳನ್ನು ಭಾರತೀಯ ನಾಗರಿಕರು ಬಳಸದಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಟೆಲಿಕಾಂ ಇಲಾಖೆ ಪ್ರತಿಕ್ರಯಿಸಿ ಇದು ಎಲ್ಲಾ ದೇಶಗಳಲ್ಲಿ ಇರುವ ಸಾಮಾನ್ಯ ಸಮಸ್ಯೆಯಾಗಿದೆ. ದೂರಗಮಿ ಪರಿಹಾರ ಕಂಡು ಹಿಡಿಯಲಾಗುತ್ತದೆ ಎಂದು ಹೇಳಿದೆ.


Click it and Unblock the Notifications








