ಇನ್ಮುಂದೆ ಈ ತಪ್ಪನ್ನು ಮಾಡಲೇಬೇಡಿ ಎಂದು 'ಎಸ್ಬಿಐ'ನಿಂದ ಎಚ್ಚರಿಕೆ!
ಆನ್ಲೈನ್ ವಂಚಕರ ಕಾಟದಿಂದ ಕಂಗೆಟ್ಟಿರುವ ಭಾರತದ ಪ್ರಮುಖ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ) ತನ್ನ ಗ್ರಾಹಕರಿಗೆ ಎಚ್ಚರಿಕೆಯೊಂದನ್ನು ನೀಡಿದೆ. ಟೆಕ್ಸ್ಟ್ ಮೆಸೇಜ್ಗಳು, ವಾಟ್ಸ್ಆಪ್ ಮತ್ತು ಫೇಸ್ಬುಕ್ ಸೇರಿದಂತೆ ಯಾವುದೇ ಆನ್ಲೈನ್ ಮಾದರಿಯಲ್ಲಿ ಬ್ಯಾಂಕ್ಗೆ ಸಂಬಂಧಿಸಿದ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬಾರದು. ಒಂದು ವೇಳೆ ಹೀಗೆ ಮಾಡಿ ವಂಚನೆಗೆ ಒಳಗಾದರೆ ಅದಕ್ಕೆ ಗ್ರಾಹಕರೇ ನೇರಹೊಣೆಯಾಗಬಹುದು ಎಂದು ತನ್ನೆಲ್ಲಾ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.
ಆನ್ಲೈನ್ ವಂಚನಕರ ಗುಂಪುಗಳು ಎಸ್ಬಿಐ ಬ್ಯಾಂಕ್ ಸಿಬ್ಬಂದಿಯಾಗಿ ಗ್ರಾಹಕರ ಜೊತೆ ಮಾತನಾಡುವ ಮೂಲಕ ಅವರ ವಿಶ್ವಾಸ ಗಳಿಸಿಸುತ್ತಿದ್ದಾರೆ ಅಥವಾ ಎದುರಿಸುತ್ತಿದ್ದಾರೆ. ನಂತರ ಗ್ರಾಹಕರ ಕ್ರೆಡಿಟ್, ಡೆಬಿಟ್ ನವೀಕರಣದ ಮಾತನಾಡಿ ಅವುಗಳ ಮಾಹಿತಿ ಪಡೆಯುತ್ತಿದ್ದಾರೆ. ಹೀಗೆ ನಂಬಿದ ಹಲವರು ತಮ್ಮ ಒಟಿಪಿ(ಒಂದು ಬಾರಿಯ ಪಾಸ್ವರ್ಡ್)ಯನ್ನು ನೀಡುತ್ತಿರುವುದು ಆಘಾತಕಾರಿಯಾಗಿದೆ. ಹಾಗಾಗಿ, ಗ್ರಾಹಕರು ಬ್ಯಾಂಕ್ ಗೆ ಸಂಬಂಧಿಸಿದ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ಎಸ್ಬಿಐ ತಿಳಿಸಿದೆ.

ಆನ್ಲೈನ್ ವಹಿವಾಟು ನಡೆಸುವುದಕ್ಕೆ ಅಗತ್ಯವಿರುವ ಮಾಹಿತಿಯನ್ನು ಯಾರ ಕೈಗೂ ಸಿಗದಂತೆ ಸುರಕ್ಷಿತವಾಗಿ ಇಟ್ಟುಕೊಳ್ಳುವ ಹೊಣೆ ಗ್ರಾಹಕರ ಮೇಲಿದೆ. ಆದರೆ, ಬ್ಯಾಂಕ್ನವರ ನಿರ್ಲಕ್ಷ್ಯ ಅಥವಾ ಭದ್ರತಾ ಲೋಪದಿಂದ, ಗ್ರಾಹಕರ ಖಾತೆಯಲ್ಲಿನ ಹಣ ಕಳುವಾದರೆ ಅದಕ್ಕೆ ಬ್ಯಾಂಕ್ಗಳೇ ನೇರಹೊಣೆ ಎಂದು ರಿಸರ್ವ್ಬ್ಯಾಂಕ್ ತಿಳಿಸಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಬ್ಯಾಂಕ್ಗಳು ಮತ್ತು ಸಾರ್ವಜನಿಕರಿಗೆ ರಿಸರ್ವ್ಬ್ಯಾಂಕ್ ನೀಡಿರುವ ಸಲಹೆ ಮತ್ತು ಎಚ್ಚರಿಕೆಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಬ್ಯಾಂಕ್ಗಳೇ ನೇರ ಹೊಣೆ!
ಬ್ಯಾಂಕ್ನವರ ನಿರ್ಲಕ್ಷ್ಯ ಅಥವಾ ಭದ್ರತಾ ಲೋಪದಿಂದ, ಗ್ರಾಹಕರ ಖಾತೆಯಲ್ಲಿನ ಹಣ ಕಳುವಾದರೆ, ಗ್ರಾಹಕ ದೂರು ನೀಡಿದರೂ ನೀಡದಿದ್ದರೂ ಬ್ಯಾಂಕ್ನವರೇ ಹೊಣೆ ಹೊರಬೇಕು ಎಂದು ರಿಸರ್ವ್ಬ್ಯಾಂಕ್ ತಿಳಿಸಿದೆ. ವಂಚನೆಗೊಳಗಾದ ಗ್ರಾಹಕನಿಗೆ ಆ ಅಕ್ರಮ ವಹಿವಾಟಿಗೂ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯ ಪಡೆಯಲು ಅವಕಾಶವಿರುತ್ತದೆ. ಆದರೆ, ಇಂತಹ ವಹಿವಾಟುಗಳಲ್ಲಿ ಗ್ರಾಹಕರ ಲೋಪ ಇದೆ ಎಂಬುದನ್ನು ಸಾಬೀತುಪಡಿಸುವ ಜವಾಬ್ದಾರಿ ಈಗ ಬ್ಯಾಂಕ್ನವರು ತೆಗೆದುಕೊಳ್ಳಬೇಕಿದೆ.

ಗ್ರಾಹಕರೂ ಹೊಣೆಯಾಗುತ್ತಾರೆ!
ಒಂದೊಮ್ಮೆ ಗ್ರಾಹಕರ ನಿರ್ಲಕ್ಷ ಇಲ್ಲಿ ಇದ್ದರೆ, ಅವರೂ ಕೂಡ ಹಣೆಹೊರೆಬೇಕಾಗುತ್ತದೆ.ಗ್ರಾಹಕರು ಆನ್ಲೈನ್ ವಂಚನೆಗೊಳಗಾದ ಕೂಡಲೇ ದೂರು ನೀಡಬೇಕು. ದೂರು ನೀಡಿದ ನಂತರವೂ ಖಾತೆಯಿಂದ ಹಣ ಕಳುವಾದರೆ, ಅಂತಹ ವಹಿವಾಟುಗಳಿಗೆ ಬ್ಯಾಂಕ್ನವರು ಜವಾಬ್ದಾರರಾಗಿರುತ್ತಾರೆ. ಆದರೆ, ಗ್ರಾಹಕನ ನಿರ್ಲಕ್ಷ್ಯದಿಂದ ಮಾಹಿತಿ ಸೋರಿಕೆಯಾಗಿ, ಕನ್ನ ಹಾಕುವವರು ಖಾತೆಯಿಂದ ಹಣ ಎಗರಿಸಿದ್ದರೆ, ಅಂತಹ ನಷ್ಟವನ್ನು ಬ್ಯಾಂಕ್ಗಳು ಭರಿಸಬೇಕಿಲ್ಲ ಎಂದು ಹೇಳಲಾಗಿದೆ.

ಬ್ಯಾಂಕ್ಗಳಿಗೆ ರಿಸರ್ವ್ ಸೂಚನೆ!
ಗ್ರಾಹಕರಿಗೆ ಆನ್ಲೈನ್ ಸೇವೆ ಒದಗಿಸುವ ಬ್ಯಾಂಕ್ಗಳು ಸಹ ಹಲವು ಮುನ್ನೆಚ್ಚರಿಕೆಗಳನ್ನು ನೀಡಬೇಕಿದ್ದು, ಆನ್ಲೈನ್ ವ್ಯವಹಾರಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಗ್ರಾಹಕರ ಇ-ಮೇಲ್ಗೆ ತಲುಪಿಸುವ ಕೆಲಸವನ್ನು ಬ್ಯಾಂಕ್ನವರು ಮಾಡಬೇಕು. ಒಂದು ವೇಳೆ ಗ್ರಾಹಕರಿಗೆ ವಂಚನೆ ನಡೆದಾಗ ಸುಲಭವಾಗಿ ದೂರು ನೀಡಲು ಸಾಧ್ಯವಾಗುವಂತೆ ಸೇವಾ ವಿಭಾಗವನ್ನು ಬ್ಯಾಂಕ್ನವರು ನಿರ್ವಹಿಸುತ್ತಿರಬೇಕು. ಆನ್ಲೈನ್ನಲ್ಲಿ ದೂರು ನೀಡಲು ಜಾಲತಾಣದಲ್ಲಿ ಲಿಂಕ್ ನಮೂದಿಸಿರಬೇಕು ಎಂದು ಸೂಚನೆ ನೀಡಿದೆ.

ಜಾಗೃತಿ ಮೂಡಿಸಬೇಕು!
ಹೊಸ ಹೊಸ ಸೇವೆಗಳನ್ನು ಅಳವಡಿಸಿಕೊಳ್ಳುವ ಬ್ಯಾಂಕ್ಗಳು ಗ್ರಾಹಕರಿಗೆ ಆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. ಬ್ಯಾಂಕ್ ಖಾತೆ ನೀಡುವಾಗಲೇ ಅವರಿಗೆ ನೀಡಿರುವ ಸೇವೆಗಳು ಯಾವುವು?, ಅವುಗಳ ಬಳಕೆ ಹೇಗೆ?, ಸುರಕ್ಷತೆ ಹೇಗೆ ಎಂಬುದನ್ನು ಗ್ರಾಹಕರಿಗೆ ಹೇಳಿಕೊಡುವ ಕೆಲಸವನ್ನು ಬ್ಯಾಂಕ್ಗಳು ಮಾಡಬೇಕಿದೆ. ಗ್ರಾಹಕರಿಗೆ ಆನ್ಲೈನ್ ವ್ಯವಹಾರ ಮತ್ತು ವಂಚನೆಗಳ ಬಗ್ಗೆ ಗ್ರಾಹಕರಿಗೆ ತಿಳಿಯುವಂತೆ ಮಾಡಲು ಆರ್ಬಿಐ ತಿಳಿಸಿದೆ.

ಗ್ರಾಹಕರಿಗೆ ಎಚ್ಚರಿಕೆ ಇರಲಿ!
ಡಿಜಿಟಲ್ ವಹಿವಾಟು ಉತ್ತೇಜನಕ್ಕಾಗಿ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ, ಇದರ ಅಳವಡಿಕೆಯಲ್ಲಿ ಸೈಬರ್ ವಂಚನೆಯಂತಹ ಮಿತಿಕೂಡ ಇದೆ. ಆನ್ಲೈನ್ ವ್ಯವಹಾರದಲ್ಲಿ ವಂಚನೆ ನಡೆಸುವುದು ಸುಲಭವಾಗಿರುವುದರಿಂದ ಕಳ್ಳರು ಅಮಾಯಕರನ್ನು ಮೋಸ ಮಾಡುತ್ತಿದ್ದಾರೆ. ಹಾಗಾಗಿ, ಸಾರ್ವಜನಿಕರು ಕೂಡ ಬ್ಯಾಂಕಿಂಗ್ ಸೇವೆಗಳ ಪಿನ್ ಸಂಖ್ಯೆಗಳನ್ನು ಆಗಾಗ್ಗೆ ಬದಲಿಸುವ, ಒಟಿಪಿಯನ್ನು ಯಾರಿಗೂ ನೀಡದಿರುವ, ಉಚಿತವಾಗಿ ವೈ-ಫೈ ಸಿಗುವ ಕಡೆ ವ್ಯವಹಾರ ನಡೆಸದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು.


Click it and Unblock the Notifications








