ಹಕ್ಕಿಗಳಿಗೇಕೆ ವಿದ್ಯುತ್ ಶಾಕ್ ಹೊಡೆಯುವುದಿಲ್ಲ ಗೊತ್ತಾ?!
ವಿದ್ಯುತ್ ತಂತಿಗಳ ಮೇಲೆ ಹಕ್ಕಿಗಳು ನೇರವಾಗಿ ಕುಳಿತುಕೊಂಡಿರುತ್ತವೆ. ಅದರೂ ಅವುಗಳಿಗೆ ಶಾಕ್ ಏಕೆ ತಗಲುವುದಿಲ್ಲ ಎಂಬುದಕ್ಕೆ ಈಗಲೂ ಹಲವರಿಗೆ ಸ್ವಷ್ಟ ಉತ್ತರ ಸಿಕ್ಕಿಲ್ಲ.!!
ನಾವು ಮಕ್ಕಳಾಗಿದ್ದ ಸಮಯದಲ್ಲಿ ನಮಗೆ ಕುತೋಹಲ ಮೂಡಿಸುತ್ತಿದ್ದ ಪ್ರಶ್ನೆಯೊಂದಕ್ಕೆ ಈಗಲೂ ಸರಿಯಾದ ಉತ್ತರ ಪಡೆಯಲು ಆಗಿಲ್ಲ ಎನ್ನುವ ಪ್ರಶ್ನೆಯೊಂದಿದೆ. ವಿದ್ಯುತ್ ತಂತಿಗಳ ಮೇಲೆ ಹಕ್ಕಿಗಳು ನೇರವಾಗಿ ಕುಳಿತುಕೊಂಡಿರುತ್ತವೆ. ಅದರೂ ಅವುಗಳಿಗೆ ಶಾಕ್ ಏಕೆ ತಗಲುವುದಿಲ್ಲ ಎಂಬುದಕ್ಕೆ ಈಗಲೂ ಹಲವರಿಗೆ ಸ್ವಷ್ಟ ಉತ್ತರ ಸಿಕ್ಕಿಲ್ಲ.
ನಿಮಗೆ ಗೊತ್ತಾ? ಈಗಲೂ ಬಹುತೇಕ ಜನರು ಹಕ್ಕಿಗಳ ಪಾದಗಳಲ್ಲಿ ವಿದ್ಯುತ್ ಪ್ರವಹಿಸದಂತಹ ಕವಚವಿದೆ. ಈ ವಿಶೇಷತೆಯಿಂದಲೇ ವಿದ್ಯುತ್ ತಂತಿಗಳ ಮೇಲೆ ಹಕ್ಕಿಗಳು ನೇರವಾಗಿ ಕುಳಿತುಕೊಂಡಿದ್ದರೂ ಸಹ ಅವುಗಳಿಗೆ ವಿದ್ಯುತ್ ಶಾಕ್ ಹೊಡೆಯುವುದಿಲ್ಲ ಎಂದು ಅಂದುಕೊಂಡಿದ್ದಾರೆ. ಆದರೆ, ಹಕ್ಕಿಗಳ ಕಾಲುಗಳಲ್ಲಿ ಅಂತಹ ಯಾವುದೇ ವಿಶೇಷತೆಗಳಿಲ್ಲ.

ಹಾಗಾದರೆ, ಸಾವಿರ ಸಾವಿರ ವೋಲ್ಟ್ ಶಕ್ತಿಯ ವಿದ್ಯುತ್ ತಂತಿಗಳ ಮೇಲೆ ಹಕ್ಕಿಗಳು ನೇರವಾಗಿ ಕುಳಿತುಕೊಂಡಿದ್ದರೂ ಅವುಗಳಿಗೇಕೆ ವಿದ್ಯುತ್ ಶಾಕ್ ಹೊಡೆಯುವುದಿಲ್ಲ? ಕೆಲವೊಮ್ಮೆ ಹಕ್ಕಿಗಳು ವಿದ್ಯುತ್ ಶಾಕ್ ಹೊಡೆದು ಸಾಯುವುದು ಏಕೆ? ಮನುಷ್ಯನಿಗೆ ಬಹುಬೇಗ ವಿದ್ಯುತ್ ಶಾಕ್ ಹೊಡೆಯಲು ಕಾರಣವೇನು? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ವಿದ್ಯುನ್ಮಾನ ಶಾಸ್ತ್ರ ತಿಳಿಯಬೇಕು!!
ವಿದ್ಯುನ್ಮಾನ ಶಾಸ್ತ್ರದ ಒಂದು ಸರಳ ತತ್ತ್ವ ''ವಿದ್ಯುತ್ ಪ್ರವಹಿಸುವಾಗ ಕಡಿಮೆ ರೋಧವಿರುವ ಮಾರ್ಗವನ್ನು ಅನುಸರಿಸುತ್ತದೆ" ಎಂಬುದು. ಈ ತತ್ವದ ಪ್ರಕಾರ, ವಿದ್ಯುತ್ ಪ್ರವಹಿಸುತ್ತಿರುವ ತಂತಿಯ ಮೇಲೆ ಹೆಚ್ಚು ರೋಧವಿರುವ ವಸ್ತುವಿದ್ದರೆ ವಿದ್ಯುದಂಶಗಳು ತಂತಿಯ ಮೂಲಕವೇ ಪ್ರವಹಿಸಲು ಇಷ್ಟಪಡುತ್ತವೆ ಎಂಬುದನ್ನು ತಿಳಿಯಬೇಕು.

ಹಾಗಾದರೆ,ಹಕ್ಕಿಗಳಿಗೇಕೆ ಶಾಕ್ ಏಕೆ ತಗಲುವುದಿಲ್ಲ?
ವಿದ್ಯುತ್ ತಂತಿಗಳನ್ನು ಬಹುತೇಕ ತಾಮ್ರದಲ್ಲಿಯೇ ನಿರ್ಮಿಸಿರುತ್ತಾರೆ. ತಾಮ್ರ ಒಳ್ಳೆಯ ವಿದ್ಯುತ್ ವಾಹಕವಾಗಿರುವಷ್ಟು ಹಕ್ಕಿಯ ದೇಹ ವಿದ್ಯುತ್ ವಾಹಕವಲ್ಲ. ಹಾಗಾಗಿ, ಹಕ್ಕಿಯ ದೇಹ ವಿದ್ಯುದಂಶಗಳನ್ನು ತನ್ನ ಮೂಲಕ ಹರಿಯಗೊವಿದ್ಯುತ್ ಪ್ರವಾಹಕ್ಕೆ ರೋಧ ಒಡ್ಡುತ್ತದೆ. ಹಾಗಾಗಿ, ಹಕ್ಕಿಗಳಿಗೆ ಶಾಕ್ ಹೊಡೆಯುವುದಿಲ್ಲ.

ಕೆಲವೊಮ್ಮೆ ಹಕ್ಕಿಗಳು ವಿದ್ಯುತ್ ಶಾಕ್ ಹೊಡೆದು ಸಾಯುವುದು ಏಕೆ?
ಒಂದು ತಂತಿಯ ಮೇಲೆ ಕುಳಿತ ಹಕ್ಕಿಯ ರೆಕ್ಕೆ ಅಕಸ್ಮಾತ್ ಇನ್ನೊಂದು ತಂತಿಗೆ ತಗುಲಿತೆಂದರೆ ಕೆಲವೊಮ್ಮೆ ಹಕ್ಕಿಗಳು ವಿದ್ಯುತ್ ಶಾಕ್ ಹೊಡೆದು ಸಾಯುತ್ತವೆ. ಇಲ್ಲಿ ಪ್ರಮುಖ ವಿಷಯವೇನೆಂದರೆ, ಎರಡೂ ತಂತಿಗಳ ನಡುವೆ ವೋಲ್ಟೇಜ್ ವ್ಯತ್ಯಾಸವಿದ್ದಾಗ ಒಂದು ತಂತಿಯಿಂದ ಇನ್ನೊಂದು ತಂತಿಗೆ ವಿದ್ಯುತ್ ಹಕ್ಕಿಗಳ ದೇಹದಿಂದ ಹರಿದು ಅವು ಸಾವನಪ್ಪುತ್ತವೆ.

ಮನುಷ್ಯರಿಗೂ ಹಕ್ಕಿಗಳಿಗೂ ಭಾರೀ ವ್ಯತ್ಯಾಸವಿದೆ.
ವಿದ್ಯುತ್ ತಂತಿಯ ಮೇಲೆ ಕುಳಿತ ಹಕ್ಕಿಗಳಿಗೂ ಮತ್ತು ವಿದ್ಯುತ್ ತಂತಿಯ ಸಂಪರ್ಕದಲ್ಲಿ ಬರುವ ಮನುಷ್ಯರಿಗೂ ಒಂದು ಬಹಳ ಮುಖ್ಯವಾದ ವ್ಯತ್ಯಾಸವಿದೆ. ವಿದ್ಯುತ್ ತಂತಿಯ ಸಂಪರ್ಕಕ್ಕೆ ಬರುವ ಮನುಷ್ಯ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭೂಮಿಯ ಸಂಪರ್ಕದಲ್ಲಿರುವುದರಿಂದ ಮನುಷ್ಯನಿಗೆ ಬಹುಬೇಗ ವಿದ್ಯುತ್ ಶಾಕ್ ಹೊಡೆಯುತ್ತದೆ.


ಮನುಷ್ಯನಿಗೆ ಬಹುಬೇಗ ವಿದ್ಯುತ್ ಶಾಕ್ ಹೊಡೆಯಲು ಕಾರಣ?
ಮೊದಲೇ ಹೇಳಿದಂತೆ ಮನುಷ್ಯ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭೂಮಿಯ ಸಂಪರ್ಕದಲ್ಲಿರುತ್ತಾನೆ. ಇಲ್ಲಿ ಭೂಮಿಯ ವೋಲ್ಟೇಜ್ ಅನ್ನು ಸೊನ್ನೆ ಎಂದು ಪರಿಗಣಿಸಲಾಗಿದೆ. ಹಾಗಾಗಿ, ಕಡಿಮೆ ಪ್ರಮಾಣದ ವಿದ್ಯುತ್ ಆದರೂ ಭೂಮಿಗಿಂತ ವೋಲ್ಟೇಜ್ ಹೆಚ್ಚಿರುವುದರಿಂದ ತಂತಿ ಮತ್ತು ಭೂಮಿಯ ನಡುವೆ ಮನುಷ್ಯನಲ್ಲಿ ವಿದ್ಯುತ್ ಹರಿದು ಸಾಯುತ್ತಾನೆ.

ಏರ್ಟೆಲ್ಗೆ ಇತಿಹಾಸದಲ್ಲೇ ಬಿಗ್ಶಾಕ್!..ಇದನ್ನು ಆ ದೇವರೂ ಕೂಡ ಊಹಿಸಿರಲಿಲ್ಲವೇನೋ!!
ಭಾರತದ ಟೆಲಿಕಾಂ ಪ್ರಪಂಚದಲ್ಲಿ ಇಂತಹದೊಂದು ಬದಲಾವಣೆಯಾಗುತ್ತದೆ ಎಂದು ನಾವು ಮಾತ್ರವಲ್ಲ ಆ ದೇವರೂ ಕೂಡ ಊಹಿಸಿರಲಿಲ್ಲವೇನೋ. ಏಕೆಂದರೆ, ಇಂದು ಕಳೆದ ಎರಡು ದಶಕಗಳಿಂದ ದೇಶದ ಟೆಲಿಕಾಂ ಅನ್ನು ರಾಜನಂತೆ ಆಳಿದ ಏರ್ಟೆಲ್ ಸಂಸ್ಥೆಗೆ ಇತಿಹಾಸದಲ್ಲೇ ದೊಡ್ಡ ಶಾಕ್ ಸಿಕ್ಕಿದೆ. ರಿಲಯನ್ಸ್ ಜಿಯೋ ಸಂಸ್ಥೆ ಶುರುವಾಗಿ ಕೇವಲ ಎರಡುವರೆ ವರ್ಷಗಳಲ್ಲೇ ದೇಶದ ಟೆಲಿಕಾಂ ದಿಗ್ಗಜನಾಗಿ ಮೆರೆದಿದ್ದ ಏರ್ಟೆಲ್ ಅನ್ನು ಮೂರನೇ ಸ್ಥಾನಕ್ಕೆ ತಳ್ಳಿ ಎರಡನೇ ಸ್ಥಾನವನ್ನು ಅಲಂಕರಿಸಿದೆ.!
ಹೌದು, ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಈ ಬಾರಿ ಭಾರ್ತಿ ಏರ್ಟೆಲ್ ಅನ್ನು ಚಂದಾದಾರರ ಆಧಾರದ ಮೇಲೆ ಮೀರಿಸಿದೆ ಮತ್ತು ಭಾರತದ ಎರಡನೆಯ ಅತಿದೊಡ್ಡ ದೂರಸಂಪರ್ಕ ಕಂಪೆನಿಯಾಗಿ ಹೊರಹೊಮ್ಮಿದೆ. ರಿಲಯನ್ಸ್ ಜಿಯೋ ಪ್ರಸ್ತುತ 30.6 ಕೋಟಿ ಗ್ರಾಹಕರನ್ನು ಹೊಂದಿದ್ದರೆ, ಏರ್ಟೆಲ್ ಕಂಪೆನಿ 28.4 ಕೋಟಿ ಗ್ರಾಹಕರಿಗೆ ಇಳಿದಿದೆ ಎಂಬ ಶಾಕಿಂಗ್ ರಿಪೋರ್ಟ್ ಹೊರಬಿದ್ದಿದೆ. ಇನ್ನು ಜೊತೆಗೂಡಿರುವ ವೊಡಾಫೋನ್-ಐಡಿಯಾವನ್ನು ಸಹ ಜಿಯೋ ಶೀಘ್ರವೇ ಮೀರಿಸಲಿದೆ ಎಂದು ಹೇಳಲಾಗಿದೆ.
ರಿಲಯನ್ಸ್ ಜಿಯೋ ವ್ಯವಹಾರವು ಆಕ್ರಮಣಕಾರಿ ಮತ್ತು ಅಗ್ಗದ ಸುಂಕದ ಯೋಜನೆಗಳಿಂದ ಉತ್ತೇಜಿಸಲ್ಪಟ್ಟಿದ್ದು, ಭಾರತದ ಟೆಲಿಕಾಂ ಸ್ಥಳವನ್ನು ಸುಮಾರು ಎರಡು ದಶಕಗಳಿಂದ ನಿಯಂತ್ರಿಸಿದ ಭಾರ್ತಿ ಏರ್ಟೆಲ್ ಇದೇ ಮೊದಲ ಬಾರಿಗೆ ತನ್ನ ಸ್ಥಾನವನ್ನು ಬಿಟ್ಟುಕೊಟ್ಟಿದೆ. ವೊಡಾಫೋನ್ ಇಂಡಿಯಾ ಮತ್ತು ಐಡಿಯಾ ಸೆಲ್ಯುಲರ್ ವಿಲೀನವಾಗಿ ಏರ್ಟೆಲ್ಗಿಂತ ಗ್ರಾಹಕರನ್ನು ಹೊಂದಿದ್ದರೂ, ರಿಲಯನ್ಸ್ ಜಿಯೋ ಪ್ರಪ್ರಥಮ ಬಾರಿಗೆ ಏರ್ಟೆಲ್ನಂತಹ ಕಂಪೆನಿಯನ್ನು ಏಕಪಕ್ಷೀಯವಾಗಿ ಹಿಂದಿಕ್ಕಿರುವುದು ಕಂಡುಬಂದಿದೆ.
ರಿಲಯನ್ಸ್ ಜಿಯೋಗೆ ಎದುರಾಗಿ ಏರ್ಟೆಲ್ ಸೇರಿದಂತೆ ಇನ್ನುಳಿದ ದೇಶದ ಎಲ್ಲಾ ಟೆಲಿಕಾಂ ಕಂಪೆನಿಗಳು ಪೈಪೋಟಿ ನೀಡಲು ಯತ್ನಿಸಿ ವಿಫಲವಾಗಿವೆ. ಜಿಯೋವಿನ ಸೇವೆಯನ್ನು ಭಾರತೀಯರು ಅಪ್ಪಿಕೊಂಡಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆಯಲ್ಲಿ ಜಿಯೋ ಬರುವುದಕ್ಕೂ ಮುನ್ನ ಭಾರತದ ಟೆಲಿಕಾಂ ಕಂಪೆನಿಗಳು ಗ್ರಾಹಕರ ರಕ್ತವನ್ನು ಹೇಗೆ ಹೀರಿದ್ದವು ಎಂಬ ಅಂಶಗಳು ಕೂಡ ವೈರಲ್ ಆಗಿದೆ. ಆ ರಕ್ತಹೀರಿದ ಚರಿತ್ರೆ ಈ ಕೆಳಗಿನಂತಿದೆ.!

ಒಂದು ಜಿಬಿ ಡೇಟಾ ಬೆಲೆ 300 ರೂ.!
ಕೇವಲ ಎರಡು ವರ್ಷಗಳ ಹಿಂದೆ ಭಾರತದಲ್ಲಿ ಒಂದು ಜಿಬಿ ಹೈಸ್ಪೀಡ್ ಡೇಟಾ ಪಡೆಯಲು ಪಾವತಿಸಬೇಕಿದ್ದ ಸರಾಸರಿ ಬೆಲೆ 300 ರೂ.ಗಳು ಎಂದರೆ ಈಗ ಆಶ್ಚರ್ಯವಾಗಬಹುದು. ಈಗ ಒಂದು ಜಿಬಿ ಹೈಸ್ಪೀಡ್ ಡೇಟಾ ಕೇವಲ ಮೂರರಿಂದ ನಾಲ್ಕು ರೂಪಾಯಿಗಳಲ್ಲಿ ಜನರಿಗೆ ಸಿಗುತ್ತಿದೆ. ಕೇವಲ ಡೇಟಾ ಮಾತ್ರವಲ್ಲದೆ, ಉಚಿತ ಕರೆ ಹಾಗೂ ಎಸ್ಎಮ್ಎಸ್ಗಳು ಕೂಡ ಇದೇ ಡೇಟಾದ ಜೊತೆಗೆ ಉಚಿತವಾಗಿದೆ. ಹಾಗಾಗಿಯೇ, ಒಂದು ಬಾಟಲಿ ತಂಪು ಪಾನೀಯಕ್ಕಿಂತ 1ಜಿಬಿ ಡೇಟಾ ಅಗ್ಗವೆಂದು 'ಮೋದಿ' ಹೇಳಿದ್ದು ನಿಜವೆನ್ನಲೇಬೇಕು.

ಆಗ ಟೆಲಿಕಾಂ ಆದಾಯ ಎಷ್ಟು ಗೊತ್ತಾ?
ಕಳೆದ ಎರಡು ವರ್ಷಗಳ ಹಿಂದೆ ಒಂದು ವರ್ಷಕ್ಕೆ ಭಾರತದ ಒಟ್ಟು ಟೆಲಿಕಾಂಗಳ ಆದಾಯ ಎಷ್ಟು ಎಂಬುದನ್ನು ನೀವು ಊಹೆ ಮಾಡಲು ಸಾಧ್ಯವಿಲ್ಲಾ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಒಂದು ವರದಿಯ ಪ್ರಕಾರ, ಎರಡು ವರ್ಷಗಳ ಹಿಂದೆ ಭಾರತದ ಎಲ್ಲಾ ಟೆಲಿಕಾಂ ಕಂಪೆನಿಗಳ ಒಂದು ವರ್ಷದ ಆದಾಯ ಮೂರು ಲಕ್ಷಕೋಟಿಗೂ (3,00,000cR) ಹೆಚ್ಚು. ಭಾರತೀಯ ಟೆಲಿಕಾಂ ಪ್ರಪಂಚವನ್ನು ಏಕಸ್ವಾಮ್ಯ ಮಾಡಿಕೊಂಡಿದ್ದರ ಪರಿಣಾಮ ಇದು ಎಂದು ಆ ವರದಿ ಹೇಳಿದೆ.

ದಿಕ್ಕುತಪ್ಪಿಸುತ್ತಿದ್ದವು ಟೆಲಿಕಾಂ ಕಂಪೆನಿಗಳು
ಇಂದು ಟ್ರಾಯ್ ಕೇವಲ ಒಂದು ಟೆಲಿಕಾಂ ಕಂಪೆನಿಗೆ ಸಹಾಯ ಮಾಡುತ್ತಿದೆ ಎಂಬ ಆರೋಪವಿದೆ. ಆದರೆ, ಎರಡು ವರ್ಷಗಳ ಹಿಂದೆ ಟೆಲಿಕಾಂ ಕಂಪೆನಿಗಳು ಟ್ರಾಯ್ ಅನ್ನು ಸಹ ಮೀರಿ ಬೆಳೆದಿದ್ದವು. ಟೆಲಿಕಾಂ ಕಂಪೆನಿಗಳ ಮೇಲೆ ಟ್ರಾಯ್ ನಿಯಂತ್ರಣವಿದ್ದರೂ ಸಹ ಎಲ್ಲಾ ಟೆಲಿಕಾಂಗಳು ಟ್ರಾಯ್ ಅನ್ನು ದಿಕ್ಕುತಪ್ಪಿಸುತ್ತಿದ್ದವು. ತನ್ನ ಗ್ರಾಹಕರಿಗೆ ಇತರ ಉತ್ತಮ ಸೇವೆಗಳನ್ನು ನೀಡುವುದಾಗಿ ಹೇಳಿ ಅವರಿಂದ ಟೆಲಿಕಾಂ ಕಂಪೆನಿಗಳು ಹೆಚ್ಚು ಹಣ ಪೀಕುತ್ತಿದ್ದವು ಎಂದು ಸ್ವತಃ ಟ್ರಾಯ್ ಹೇಳಿಕೊಂಡಿದ್ದು ನಿಮಗೆ ತಿಳಿದಿರಬಹುದು.

ಗ್ರಾಹಕರ ಜೇಬಿಗೆ ಕನ್ನ
ಮೊಬೈಲ್ ಬಳಕೆದಾರರ ರೀಚಾರ್ಜ್ ಮಾಡಿಸುವಾಗ ತೆರಬೇಕಿದ್ದ ಹಣ ಒಂದೆಡೆಯಾದರೆ, ಮೊಬೈಲ್ನಲ್ಲಿ ಮಾತನಾಡುವಾಗ ಕರೆಕಡಿತದಂತಹ ಲೋಪಗಳಿಂದಲೂ ಟೆಲಿಕಾಂ ಕಂಪೆನಿಗಳು ದುಡ್ಡು ಮಾಡಿಕೊಳ್ಳುತ್ತಿದ್ದವು. ಆಗಿದ್ದ ರೇಡಿಯೋ ಲಿಂಕ್ ತಂತ್ರಜ್ಞಾನವನ್ನು ತಮಗೆ ಬೇಕಾದಂತೆ ಮಾರ್ಪಡಿಸಿಕೊಂಡ ಟೆಲಿಕಾಂ ಕಂಪೆನಿಗಳು ಕರೆ ಕಡಿತವಾಗಿದ್ದರೂ ಅದು ಚಾಲನೆಯಲ್ಲೇ ಇರುವಂತೆ ತೋರಿಸಿ ಗ್ರಾಹಕರ ಜೇಬಿಗೆ ಕನ್ನ ಹಾಕುತದತಿದ್ದವು. ಒಂದು ಮಾಹಿತಿಯಂತೆ ಇದರಿಂದ ಅವುಗಳಿಗೆ ಸಿಗುತ್ತಿದ್ದ ಆದಾಯವೇ ಪ್ರತಿದಿನ 50 ಕೋಟಿಗೂ ಹೆಚ್ಚಿತ್ತಂತೆ.

ದಿನವೊಂದರ ಗಳಿಕೆ 250 ಕೋಟಿ ರೂ.
ಇಂದು ನಿವ್ವಳ ಲಾಭದಲ್ಲಿ ಸಾವಿರಾರು ಕೋಟಿ ಇಳಿಕೆ ಕಂಡಿರುವ ಟೆಲಿಕಾಂ ಕಂಪೆನಿಗಳು ಅಂದು ಒಂದು ದಿನಕ್ಕೆ ಗಳಿಸುತ್ತಿದ್ದ ಆದಾಯ ಎಷ್ಟು ಎಂಬುದನ್ನು ಕೇಳಿದರೆ ನೀವು ದಂಗಾಗಬಹುದು. ಏಕೆಂದರೆ, ಕರೆ ಕಡಿತದ ಕ್ರಮಕ್ಕೆ ಟೆಲಿಕಾಂ ಕಂಪೆನಿಗಳಿಗೆ ಟ್ರಾಯ್ ದಂಡ ವಿಧಿಸುವ ಪ್ರಸ್ತಾಪಕ್ಕೆ ಸಂಬಂಧಿಸಿದ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಮುಕುಲ್ ರೋಹಟಗಿ ಅವರು ನೀಡಿದ ಮಾಹಿತಿಯಂತೆ, ಟೆಲಿಕಾಂ ಕಂಪೆನಿಗಳ ದಿನವೊಂದರ ಸರಾಸರಿ ಗಳಿಕೆ 250 ಕೋಟಿ ರೂಪಾಯಿಗಳಿಗೂ ಹೆಚ್ಚು.!

ಟೆಲಿಕಾಂ ಏಕಸ್ವಾಮ್ಯವಾಗಿತ್ತು.!
ಇಂದು ಜಿಯೋ ಭಾರತದ ಟೆಲಿಕಾಂ ಅನ್ನು ಏಕಸ್ವಾಮ್ಯ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಎರಡು ವರ್ಷಗಳ ಹಿಂದೆ ಒಂದೇ ಒಂದು ಟೆಲಿಕಾಂ ಕಂಪೆನಿ ತನ್ನ ತೆಕ್ಕೆಯಲ್ಲಿ ಭಾರತದ ಟೆಲಿಕಾಂ ಅನ್ನು ಹಿಡಿದಿಟ್ಟುಕೊಂಡಿತ್ತು. ಈ ಒಂದು ಕಂಪೆನಿಯನ್ನೇ ಹಹಿಂಬಾಲಿಸುತ್ತಿದ್ದ ಇತರೆ ಟೆಲಿಕಾಂ ಕಂಪೆನಿಗಳು ಸಹ ಸೇವೆಯ ಹೆಸರಿನಲ್ಲಿ ಒಂದೇ ಬಗೆಯಲ್ಲಿ ಕಾರ್ಯನಿರ್ವಹಣೆ ನೀಡುತ್ತಿದ್ದವು. ಇದರಿಂದ ಗ್ರಾಹಕನಿಗೆ ಆಯ್ಕೆಗಳೇ ಇಲ್ಲದ ಸ್ಥಿತಿ ಎದುರಾಗಿತ್ತು ಎಂದರೆ ತಪ್ಪಾಗುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ.

ಮೂಲ ಸೌಕರ್ಯಕ್ಕೆ ಹೂಡಿಕೆ ಮಾಡಿರಲಿಲ್ಲ!
ಎರಡು ವರ್ಷಗಳ ಹಿಂದೆಯೇ ಭಾರತದಲ್ಲಿದ್ದ ಮೊಬೈಲ್ ಸಂಪರ್ಕಗಳ ಸಂಖ್ಯೆ 96.2 ಕೋಟಿಯಾಗಿತ್ತು. ಆದರೆ, ಇಷ್ಟು ದೊಡ್ಡದ ಟೆಲಿಕಾಂ ಇದ್ದರೂ ಕೂಡ ಯಾವುದೇ ಟೆಲಿಕಾಂ ಕಂಪೆನಿ ಕೂಡಾ ಕರೆಗಳ ಗುಣಮಟ್ಟವನ್ನು ಉತ್ತಮ ಪಡಿಸುವ ಹೂಡಿಕೆಗೆ ಸಿದ್ಧವಿಲ್ಲ ಎಂದು ವರದಿಯೊಂದು ಹೇಳಿತ್ತು. 300ರಿಂದ 900 ಮೆಗಾಹರ್ಟ್ಸ್ ಕಂಪನಾಂಕದ ತರಂಗಗಳಲ್ಲಿ ಕರೆಯಗುಣಮಟ್ಟ ಚೆನ್ನಾಗಿರುತ್ತದೆ ಎಂದು ತಿಳಿದಿದ್ದರೂ ಆ ತರಂಗಗಳ ಖರೀದಿಗೆ ಯಾವ ಟೆಲಿಕಾಂ ಕಂಪೆನಿಯೂ ಮುಂದೆ ಬರಲಿಲ್ಲ. ಏಕೆಂದರೆ, ಗ್ರಾಹಕರಿಂದ ಹಣ ಪೀಕಲು ಹೆಚ್ಚು ವೆಚ್ಚ ಮಾಡಲು ಯಾವ ಟೆಲಿಕಾಂ ಕಂಪೆನಿಗಳಿಗೂ ಇಷ್ಟವಿರಲಿಲ್ಲ.

ಶೇ. 80% ರಷ್ಟು ಬೆಲೆ ಇಳಿಕೆ
ಎರಡು ವರ್ಷಗಳ ಹಿಂದೆ ಜಿಯೋ ಭಾರತದ ಟೆಲಿಕಾಂ ಮಾರುಕಟ್ಟೆಗೆ ಕಾಲಿಟ್ಟಿತು. ಟೆಲಿಕಾಂಗೆ ಜಿಯೋ ಪ್ರವೇಶ ಮಾಡಿದ ನಂತರ ಜನರ ದುಡ್ಡನ್ನು ನುಂಗಿ ನೀರುಕುಡಿಯುತ್ತಿದ್ದ ಉಳಿದ ಟೆಲಿಕಾಂ ಕಂಪೆನಿಗಳ ಸೇವೆಗಳ ಬೆಲೆಗಳು ಶೇ 80% ರಷ್ಟು ಇಳಿಕೆಯಾಯಿತು. ಒಂದು GB ಡೇಟಾಗೆ 300 ರಿಂದ 400ರೂಪಾಯಿಗಳನ್ನು ಪೀಕುತ್ತಿದ್ದ ಕಂಪೆನಿಗಳು ಇದೀಗ 2 ರಿಂದ 3 ರೂಪಾಯಿಗೆ ಒಂದು GB ಡೇಟಾ ನೀಡುತ್ತಿವೆ.ಈಗ ಏನಿದ್ದರೂ ಅನ್ಲಿಮಿಟೆಡ್ ಸೇವೆಗಳದ್ದೇ ಜಮಾನವಾಗಿದ್ದು, ಗ್ರಾಹಕರು ಅತ್ಯುತ್ತಮ ದರದಲ್ಲಿ ಹೆಚ್ಚು ಸೇವೆಯನ್ನು ಪಡೆಯುತ್ತಿರುವುದನ್ನು ನೀವು ನೋಡಬಹುದು.


Click it and Unblock the Notifications








