ಚಿಕನ್ ಸಸ್ಯಹಾರ ಅಂತೆ..! ಟ್ವಿಟರ್ನಲ್ಲಿ ಟ್ರೋಲ್ ಆದ ಶಿವಸೇನಾ ನಾಯಕ..!
ಮೊಟ್ಟೆ ಸಸ್ಯಹಾರ ಎಂಬುದು ವಿಜ್ಞಾನದಿಂದ ಪ್ರೂವ್ ಆಗಿದೆ. ಈಗ ಮೊಟ್ಟೆಯ ಸರದಿ ಚಿಕನ್ಗೆ ಬಂದಿದ್ದು, ಚಿಕನ್ ಕೂಡ ಸಸ್ಯಹಾರ ಅಂತೆ. ಆದ್ರೆ, ಚಿಕನ್ ವೆಜಿಟೇರಿಯನ್ ಎಂದು ಯಾವೊಬ್ಬ ವಿಜ್ಞಾನಿಯು ಹೇಳಿಲ್ಲ. ಬದಲಾಗಿ ಚಿಕನ್ ಸಸ್ಯಹಾರ ಎಂದಿರುವುದು ಬದಲಾಗಿ ಶಿವಸೇನಾ ನಾಯಕ ಸಂಜಯ್ ರಾವತ್. ಶಿವಸೇನಾ ನಾಯಕನ ಹೇಳಿಕೆ ಟ್ವಿಟ್ಟರ್ನಲ್ಲಿ ಭಾರೀ ಟ್ರೋಲ್ ಆಗಿದ್ದು, ರಾವತ್ ಹೇಳಿಕೆಗೆ ಹಲವರು ತಮ್ಮದೇ ಆದ ವ್ಯಾಖ್ಯಾನ ಮಾಡಿ ತಿರುಗೇಟು ನೀಡಿದ್ದಾರೆ.

ರಾಜ್ಯಸಭೆಯಲ್ಲಿ ಪ್ರಸ್ತಾಪ
ಹೌದು, ಜುಲೈ 15ರಂದು ರಾಜ್ಯಸಭೆಯಲ್ಲಿ ಆಯುರ್ವೇದ ಮತ್ತು ಆಯುಷ್ ಮಂತ್ರಾಲಯಕ್ಕೆ ನೀಡಿದ ಬಜೆಟ್ ಚರ್ಚೆಯಲ್ಲಿ ಸಂಜಯ್ ರಾವತ್ ಈ ವಿಚಾರ ಪ್ರಸ್ತಾಪಿಸಿದ್ದು, ಕೋಳಿ ಉತ್ಪನ್ನಗಳಾದ ಮೊಟ್ಟೆ ಮತ್ತು ಚಿಕನ್ನ್ನು ಸಸ್ಯಹಾರ ಎಂದು ಘೋಷಿಸುವಂತೆ ಸಲಹೆ ನೀಡಿದ್ದಾರೆ. ಉದ್ದೇಶಪೂರ್ವಕವಾಗಿಯೇ ಚಿಕನ್ ಸಸ್ಯಹಾರ ಎಂದು ಸಂಜಯ್ ರಾವತ್ ಆಯುಷ್ ಮಂತ್ರಾಲಯವನ್ನು ಒತ್ತಾಯಿಸಿದ್ದಾರೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.

ಆಯುರ್ವೇದಿಕ್ ಚಿಕನ್
ತಮ್ಮ ಬೇಡಿಕೆಯನ್ನು ವಿವರಿಸಿರುವ ರಾವತ್, ಒಂದು ಸಣ್ಣ ಎಳೆಯೊಂದನ್ನು ನಿರೂಪಿಸಿದ್ದಾರೆ. ಆದಿವಾಸಿಗಳು ನೆಲೆಸಿರುವ ಮಹಾರಾಷ್ಟ್ರದ ನಂದುರ್ಬಾರ್ ಎಂಬ ಪ್ರದೇಶಕ್ಕೆ ಇತ್ತೀಚಿಗಷ್ಟೇ ರಾವತ್ ಭೇಟಿ ನೀಡಿದ್ದರು. ಅಲ್ಲಿನ ಆದಿವಾಸಿಗಳು ಕೋಳಿಯನ್ನು ಆಯುರ್ವೇದ ಎಂದು ಕರೆಯುವುದನ್ನು ರಾವತ್ ಗಮನಿಸಿದ್ದಾರೆ. ಹಲವಾರು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಹೊಂದಿರುವ ಈ ಕೋಳಿಗಳನ್ನು ವಿಶೇಷವಾಗಿ ಸಾಕಲಾಗುತ್ತದೆ ಎಂದು ಆದಿವಾಸಿಗಳು ಹೇಳಿದ್ದಾರೆ. ಇಷ್ಟೇ ಅಲ್ಲದೇ, ಮೊಟ್ಟೆ ಇಡುವ ಆಯುರ್ವೇದ ಕೋಳಿಗೆ ಕೇವಲ ಆಯುರ್ವೇದದ ಆಹಾರಗಳನ್ನು ನೀಡಲಾಗುತ್ತದೆ ಎಂದು ಸಂಶೋಧಕರು ಹೇಳಿರುವ ವರದಿಯನ್ನು ಕೂಡ ರಾವತ್ ಉಲ್ಲೇಖಿಸಿದ್ದು, ಪ್ರೋಟಿನ್ಯುಕ್ತ ಆಹಾರಕ್ಕೆ ಆಯುರ್ವೇದದ ಮೊಟ್ಟೆ ಮತ್ತು ಚಿಕನ್ ಪರ್ಯಾಯವಾಗಿಸಬಹುದು. ಮತ್ತು ಸಸ್ಯಹಾರಿಗಳು ಯಾವುದೇ ಸಮಸ್ಯೆಯಿಲ್ಲದೆ ಇದನ್ನು ಸೇವಿಸಬಹುದು ಎಂದಿದ್ದಾರೆ.

ಸಂಶೋಧನೆಯ ವಿವರಣೆ
ಇದರ ಜೊತೆ ರಾವತ್ ಮತ್ತೊಂದು ಅಂಶ ಉಲ್ಲೇಖಿಸಿದ್ದು, ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದ ಸಂಶೋಧಕರು ಆಯುರ್ವೇದ ಮೊಟ್ಟೆಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆಯುಷ್ ಮಂತ್ರಾಲಯಕ್ಕೆ ಕನಿಷ್ಠ 10,000 ಕೋಟಿ ರೂ. ಮೀಸಲಿಡಬೇಕು ಎಂದಿರುವ ಹಿರಿಯ ಸಂಸದ, ಪಾಶ್ಚಿಮಾತ್ಯ ದೇಶಗಳಲ್ಲಿ ಹಾಲು ಹಾಗೂ ಅರಿಶಿನದಿಂದ ಮಾಡಿದ ಪಾನೀಯಗಳನ್ನು ಪ್ರೋತ್ಸಾಹಿಸುತ್ತಿದ್ದರೆ, ಭಾರತೀಯರು ಆಯುರ್ವೇದಿಕ ಅಂಶವಿರುವ ಇವುಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಟ್ವಿಟ್ಟರ್ನಲ್ಲಿ ಭಾರೀ ಟ್ರೋಲ್
ಇನ್ನು, ರಾಜ್ಯಸಭಾ ಸಂಸದ ಸಂಜಯ್ ರಾವತ್ ಹೇಳಿಕೆ ಟ್ವಿಟ್ಟರ್ನಲ್ಲಿ ಭಾರೀ ಟ್ರೋಲ್ ಆಗಿದ್ದು, ಟ್ವಿಟ್ಟಿಗರು ಲೆಫ್ಟ್, ರೈಟ್, ಸೆಂಟರ್ ಎನ್ನದೇ ತಿರುಗೇಟು ನೀಡುತ್ತಿದ್ದಾರೆ. ಮೋನಾ ಅಂಬೇಗಾಂವ್ಕರ್ ಎನ್ನುವವರು ಕೇವಲ ಚಿಕನ್ ಮತ್ತು ಮೊಟ್ಟೆ ಏಕೆ..? ಈ ಪಟ್ಟಿಗೆ ಮಟನ್ ಮತ್ತು ಬೀಫ್ ಸೇರಿಸಿ ಎಂದರೆ, ದಿಲೀಪ್ ಎಂಬಾತ ರಾಜಕೀಯವನ್ನು ಗಂಭೀರ ವ್ಯಾಪಾರ ಎಂದವರು ಯಾರು..? ಎಂಥ ಮಾತು ಎಂದು ರಾವತ್ ಹೇಳಿಕೆಗೆ ಕುಹಕವಾಡಿದ್ದಾರೆ. ಇನ್ನು, ಇವನ್ ಎಂಬುವವರು ಬೀಫ್ ಕರ್ರಿಯನ್ನು ಈರುಳ್ಳಿ ಕರ್ರಿ ಎಂದು ಕರೆಯಬಹುದು ಎಂದರೆ, ಜೆಎನ್ಆರ್ ಎಂಬಾತ ಈ ಹೊಸ ವೆಜಿಟೇರಿಯನ್ ಆಹಾರಗಳನ್ನು ಈರುಳ್ಳಿ ಮತ್ತು ಬೆಳ್ಳುಳ್ಳಿಯೊಂದಿಗೆ ಅಡುಗೆ ಮಾಡಬಹುದೇ ಎನ್ನುವ ಮೂಲಕ ರಾವತ್ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.


Click it and Unblock the Notifications








