ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ದೃಢಪಡಿಸಿದ ಮಸ್ಕ್; ಕಾರಣ ಗೊತ್ತಾ!?
ಈ ವರ್ಷ ಟ್ವಿಟ್ಟರ್ನಲ್ಲಿ ಹಲವು ನಾಟಕೀಯ ಬೆಳವಣಿಗೆಗಳು ಕಂಡುಬಂದಿವೆ. ಅದರಲ್ಲೂ ನಿನ್ನೆ ವರೆಗೂ ಒಂದಲ್ಲಾ ಒಂದು ಹೊಸ ಬೆಳವಣಿಗೆಗಳು ಟ್ವಿಟ್ಟರ್ನಲ್ಲಿ ಸದ್ದು ಮಾಡುತ್ತಿದ್ದವು. ಇದಕ್ಕೆಲ್ಲಾ ಮೂಲ ಕಾರಣವಾಗಿದ್ದು ಟ್ವಿಟ್ಟರ್ನ ಹೊಸ ಮಾಲೀಕರಾದ ಎಲಾನ್ ಮಸ್ಕ್. ಇವರು ಅಧಿಕಾರ ಸ್ವೀಕಾರ ಮಾಡಿದಾಗಿನಿಂದ ಆದ ತೀವ್ರಗತಿಯ ಬೆಳವಣಿಗೆ ಅಲ್ಲಿನ ಉದ್ಯೋಗಿಗಳನ್ನು ಸಂಕಷ್ಟಕ್ಕೆ ದೂಡಿದ್ದಲ್ಲದೆ, ಹಲವು ಬಳಕೆದಾರರಿಗೆ ತಲೆನೋವಾಗಿ ಪರಿಣಮಿಸಿತ್ತು. ಇದೆಲ್ಲದರ ನಡುವೆ ಮಸ್ಕ್ ಈಗ ಮತ್ತೊಂದು ನಿರ್ಧಾರ ಮಾಡಿದ್ದಾರೆ.

ಹೌದು, ಟ್ವಿಟ್ಟರ್ನಲ್ಲಿ ಒಂದು ಪೋಲ್ ಭಾರಿ ಸದ್ದು ಮಾಡಿತ್ತು. ಅದುವೇ ಟ್ವಿಟ್ಟರ್ ಸಿಇಒ ಅಧಿಕಾರದಿಂದ ಕೆಳಗಿಳಿಯಬೇಕೇ ಅಥವಾ ಬೇಡವೇ ಎಂದು. ಈ ಪ್ರಕ್ರಿಯೆಯಲ್ಲಿ ಅಧಿಕಾರದಿಂದ ಕೆಳಗಿಳಿಯಬೇಕು ಎಂಬ ಆಯ್ಕೆಗೆ ಹೆಚ್ಚಿನ ಬಳಕೆದಾರರು ವೋಟ್ ಮಾಡಿದ್ದಾರೆ. ಅಂದರೆ ಇದರರ್ಥ ಟ್ವಿಟ್ಟರ್ ಸಿಇಒ ಸ್ಥಾನಕ್ಕೆ ಎಲಾನ್ ಮಸ್ಕ್ ರಾಜೀನಾಮೆ ನೀಡಲಿದ್ದಾರೆ. ಅದರಂತೆ ಮಸ್ಕ್ ಅವರು ಸಹ ಈ ಬಗ್ಗೆ ಮಾಹಿತಿ ದೃಢಪಡಿಸಿದ್ದು, ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.

ಹಾಗಿದ್ರೆ, ಮುಂದಿನ ಸಾರಥಿ ಯಾರು?
ಈ ಸಂಬಂಧ ಟ್ವೀಟ್ ಮಾಡಿರುವ ಮಸ್ಕ್, ಹೊಸ ಸಿಇಒ ಅನ್ನು ಹುಡುಕುತ್ತಿರುವುದಾಗಿ ದೃಢಪಡಿಸಿದ್ದಾರೆ. ಆದರೆ, ಟ್ವಿಟ್ಟರ್ ಜವಾಬ್ದಾರಿ ವಹಿಸಿಕೊಳ್ಳುವ ಮೂರ್ಖ ಸಿಕ್ಕಾಗ ಸಿಇಒ ಹುದ್ದೆಗೆ ರಾಜೀನಾಮೆ ನೀಡಿ ನನ್ನ ಮುಂದಿನ ಕೆಲಸ ನೋಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಸಿಇಒ ಮುಖ್ಯಸ್ಥರಾಗಿ ಮುಂದುವರಿಯಬೇಕೆ ಎಂದು ಜನರನ್ನು ಕೇಳಿದ್ದ ಸಮೀಕ್ಷೆಯ ಎರಡು ದಿನದ ನಂತರ ಈ ನಿರ್ಧಾರ ಮಾಡಲಾಗಿದೆ. ಯಾಕೆಂದರೆ ಬಹುಪಾಲು ಮಂದಿ ಮಸ್ಕ್ ವಿರುದ್ಧವೇ ಮತ ಚಲಾಯಿಸಿದ್ದಾರೆ.

ಸಂಪೂರ್ಣವಾಗಿ ದೂರ ಸರಿಯುತ್ತಾರೆಯೇ?
ಈ ಎಲ್ಲಾ ಬೆಳವಣಿಗೆ ನಡುವೆ ಸಂಪೂರ್ಣವಾಗಿ ಟ್ವಿಟ್ಟರ್ನಿಂದ ದೂರ ಸರಿಯುತ್ತಾರೆಯೇ ಎನ್ನುವು ಪ್ರಶ್ನೆಗೆ ಮಸ್ಕ್ ಉತ್ತರ ನೀಡಿದ್ದು, ಟ್ವಿಟರ್ನಲ್ಲಿ ದಿನನಿತ್ಯದ ಕಾರ್ಯಾಚರಣೆಯಿಂದ ತಾನು ಸಂಪೂರ್ಣವಾಗಿ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ. ಆದರೆ ಹೊಸ ಸಿಇಒ ಸಿಕ್ಕ ನಂತರ ನಾನು ಸಾಫ್ಟ್ವೇರ್ ಮತ್ತು ಸರ್ವರ್ ತಂಡಕ್ಕೆ ಸೇರುತ್ತೇನೆ ಎಂದು ದೃಢಪಡಿಸಿದ್ದಾರೆ.

ಡಿಸೆಂಬರ್ 19 ರಂದು ಈ ಸಮೀಕ್ಷೆ ಕಾರ್ಯ ನಡೆಸಲಾಗಿದ್ದು, ಸಮೀಕ್ಷೆಯಲ್ಲಿ, 57.5% ಬಳಕೆದಾರರು 'ಹೌದು' ಎಂದು ಉತ್ತರಿಸಿದ್ದಾರೆ. ಹಾಗೆಯೇ 42.5% ಬಳಕೆದಾರರು ಬೇಡ ಎಂದು ಪ್ರತಿಕ್ರಿಯಿಸಿದ್ದಾರೆ. ಅದರಂತೆ ಒಟ್ಟಾರೆ ಈ ಮತದಾನ ಪ್ರಕ್ರಿಯೆಯಲ್ಲಿ 1.75 ಕೋಟಿ ಜನರು ಭಾಗಿಯಾಗಿದ್ದಾರೆ. ಇದರಲ್ಲಿ ಮಸ್ಕ್ ರಾಜೀನಾಮೆ ನೀಡಬೇಕು ಎಂದು ಬರೋಬ್ಬರಿ 1. ಕೋಟಿ 62 ಸಾವಿರ ಮಂದಿ ಮತ ಹಾಕಿರುವುದು ವಿಶೇಷ.

ಟ್ವಿಟ್ಟರ್ನಲ್ಲಿ ಆದ ಬದಲಾವಣೆ ಏನು?
ಎಲಾನ್ ಮಸ್ಕ್ ಅಕ್ಟೋಬರ್ನಲ್ಲಿ ಟ್ವಿಟರ್ ಅನ್ನು $ 44 ಶತಕೋಟಿ, ಅಂದರೆ 3.58 ಲಕ್ಷ ಕೋಟಿಗೆ ಖರೀದಿ ಮಾಡಿದ್ದರು. ಟ್ವಿಟರ್ನ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ, ಮಸ್ಕ್ ಕಂಪೆನಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುವಲ್ಲಿ ನಿರತರಾಗಿದ್ದಾರೆ. ಕೆಲವು ದಿನಗಳ ಹಿಂದೆ, ಮೊದಲ ಸುತ್ತಿನ ವಜಾಗೊಳಿಸುವಿಕೆಯಲ್ಲಿ ಅವರು ಸುಮಾರು 3,700 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದರು. ಅದರಲ್ಲೂ ಸಿಇಒ ಪರಾಗ್ ಅಗರ್ವಾಲ್ ಅವರನ್ನು ವಜಾಗೊಳಿಸುವ ಮೂಲಕ ಈ ಪ್ರಕ್ರಿಯೆ ಆರಂಭ ಆಗಿತ್ತು.

ಕೆಲವು ದಿನಗಳ ಹಿಂದೆ ಟ್ವಿಟರ್ ಯಾವುದೇ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಅನ್ನು ಉಚಿತವಾಗಿ ಪ್ರಚಾರ ಮಾಡುವುದಿಲ್ಲ ಎಂದು ಘೋಷಿಸಿತು. ಇತರ ಸಾಮಾಜಿಕ ಪ್ಲಾಟ್ಫಾರ್ಮ್ ಮತ್ತು ಅವುಗಳ ಕಂಟೆಂಟ್ ಅನ್ನು ಉತ್ತೇಜಿಸುವ ಉದ್ದೇಶದಿಂದ ರಚಿಸಲಾದ ಟ್ವಿಟರ್ ಹ್ಯಾಂಡಲ್ಗಳನ್ನು ಈಗ ನಾವು ನಿರ್ಬಂಧಿಸುತ್ತೇವೆ ಎಂದು ಕಠಿಣವಾಗಿ ಬಳಕೆದಾರರಿಗೆ ತಿಳಿಸಿತ್ತು. ಅದರಲ್ಲೂ ಈ ಪ್ರಕ್ರಿಯೆಗೆ ಪ್ರಮುಖವಾಗಿ ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗೂ ಮಾಸ್ಟೊಡೋನ್ ಸೇರಿಕೊಂಡಿವೆ. ಇದಾದ ನಂತರ ಭಾರತೀಯ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಕೂ ಆಪ್ ಖಾತೆಯನ್ನು ಅಮಾನತುಗೊಳಿಸಿತ್ತು.

ಪತ್ರಕರ್ತರ ಖಾತೆ ಬ್ಲಾಕ್
ಇದಿಷ್ಟೇ ಅಲ್ಲದೆ ಹಲವು ಪತ್ರಕರ್ತರ ಖಾತೆ ಬ್ಲಾಕ್ ಮಾಡಲಾಗಿತ್ತು. ಆದರೆ ವಿಶ್ವಸಂಸ್ಥೆಯ ಒತ್ತಡಕ್ಕೆ ಮಣಿದು ನಿರ್ಧಾರವನ್ನು ಹಿಂತೆಗೆದುಕೊಂಡಿದ್ದರು. ಈ ಬಗ್ಗೆ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಶುಕ್ರವಾರ ಇದನ್ನು ಟೀಕಿಸಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯದ ದೃಷ್ಟಿಯಿಂದ ಇದೊಂದು ಅಪಾಯಕಾರಿ ಘಟನೆಗೆ ಉದಾಹರಣೆ ಎಂದು ಕರೆದಿದ್ದರು.


Click it and Unblock the Notifications








