ನಿನಗೆ ಸಹಾಯ ಮಾಡಲು ದೇವರು ಕಳುಹಿಸಿದ್ದಾರೆ: ಫೇಸ್ಬುಕ್ ಗೆಳೆಯನಿಂದ ವಂಚನೆ!
ನಿನಗೆ ಸಹಾಯ ಮಾಡಲು ನನ್ನನ್ನು ದೇವರು ಕಳುಹಿಸಿದ್ದಾರೆ ಎಂದು ಹೇಳಿ ಫೇಸ್ಬುಕ್ ಗೆಳೆಯನೋರ್ವ ವಂಚನೆ ನಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಲ್ಲಿ ಇಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಹಿಳೆ ಫೇಸ್ಬುಕ್ ಗೆಳೆಯನಿಂದ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿರುವ ಬಗ್ಗೆ ನಗರದ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಾಗಿದೆ.

ಹೌದು, ವಂಚಕರು ಹೇಗೆಲ್ಲಾ ವಂಚನೆ ನಡೆಸುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದ್ದು, ಫೇಸ್ಬುಕ್ ಮೂಲಕ ಪರಿಚಯವಾದ ಲಂಡನ್ ಸ್ನೇಹಿತ 27 ಲಕ್ಷ ರೂ ಮತ್ತು ದುಬಾರಿ ಗಿಫ್ಟ್ ಆಮಿಷವೊಡ್ಡಿ ನಗರದ ಮಹಿಳೆಗೆ 2.50 ಲಕ್ಷ ರೂ. ವಂಚನೆ ಮಾಡಿದ್ದಾನೆ. ಇದಕ್ಕಾಗಿ ಆತ ದೇವರ ಸಂದೇಶವಾಹಕನಾಗಿ ಸಹಾಯ ಮಾಡಲು ಬಂದಿರುವ ನಾಟಕವನ್ನು ಮಾಡಿದ್ದಾನೆ.
ಇದೇ ಏಪ್ರಿಲ್ನಲ್ಲಿ ವಂಚಕನು ಆ ಮಹಿಳೆಗೆ ಫ್ರೆಂಡ್ ರಿಕ್ಷೆಸ್ಟ್ ಕಳುಹಿಸಿ ಸ್ನೇಹ ಬೆಳೆಸಿದ್ದು, ನಾನು ದೇವರ ಸಂದೇಶವಾಹಕ, ನಿನಗೆ ಸಹಾಯ ಮಾಡಲು ಬಂದಿದ್ದೇನೆ. ದೇವರೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ ಎಂದು ಹೇಳಿ ನಂಬಿಸಿದ್ದ. ಕೆಲ ದಿನಗಳ ಬಳಿಕ ಗಿಫ್ಟ್ ಮತ್ತು 27 ಲಕ್ಷ ರೂ.ಹಣ ಕಳುಹಿಸುತ್ತೇನೆ. ಅದನ್ನು ಪಡೆದುಕೋ ಎಂದು ಹೇಳಿ ಆಕೆಯನ್ನು ಹಳ್ಳಕ್ಕೆ ತಳ್ಳಿದ್ದಾನೆ.

ಓದಿರಿ: ತನಗೇ ಗೊತ್ತಿಲ್ಲದೆ ಆತ 11.5 ಲಕ್ಷ ರೂ. ಕಳೆದುಕೊಂಡ!..ಹೇಗೆ ಗೊತ್ತಾ?!
ಇದಾದ ನಂತರ ಆಕೆಗೆ ಮತ್ತೆ ಕರೆ ಮಾಡಿದ ಆತ ಮುಂಬೈ ವಿಮಾನ ನಿಲ್ದಾಣದಲ್ಲಿ ಕೊರಿಯರ್ ಜಪ್ತಿ ಮಾಡಿದ್ದಾರೆ. ಅದನ್ನು ಬಿಡಿಸಿಕೊಳ್ಳಲು ಒಂದೂವರೆ ಲಕ್ಷ ರೂ.ಬೇಕೆಂದು ಕೇಳಿದ ಆತನನ್ನು ನಂಬಿದ ಮಹಿಳೆ, ಆತನ ಖಾತೆಗೆ ಒಂದೂವರೆ ಲಕ್ಷ ರೂ. ಜಮೆ ಮಾಡಿದ್ದಾಳೆ. ಬೆಂಗಳೂರು ಏರ್ ಪೋರ್ಟ್ಗೆ ಹಣ ಕಟ್ಟಲು 40 ಸಾವಿರ ರೂ.ಬೇಕೆಂದು ಮತ್ತೆ ಕೇಳಿದ್ದಾನೆ.
ಆತನ ಮಾತನ್ನು ನಂಬಿದ ಮಹಿಳೆಯು ಲೇವಾದೇವಿಗಾರರಿಂದ ಸಾಲ ಮಾಡಿ ಮತ್ತು ತನ್ನ ಬಳಿಯಿದ್ದ ಚಿನ್ನಾಭರಣಗಳನ್ನೆಲ್ಲಾ ಮಾರಿ ಆತನಿಗೆ ಒಟ್ಟು ಗೆ 2.50 ಲಕ್ಷ ರೂ.ನೀಡಿದ್ದಾರೆ. ಇಷ್ಟಾದ ನಂತರವೂ ಆತ ಮತ್ತೆ ಹಣ ಕೇಳಿದಾಗ ಅನುಮಾನಗೊಂಡ ಮಹಿಳೆ ತನ್ನ ಮಗಳಿಗೆ ಈ ಬಗ್ಗೆ ತಿಳಿಸಿದ್ದಾರೆ. ಆ ನಂತರವಷ್ಟೇ ಮಹಿಳೆಗೆ ತಾನು ವಂಚನೆಗೆ ಒಳಗಾಗಿರುವ ಬಗ್ಗೆ ತಿಳಿದಿದೆ.


Click it and Unblock the Notifications








