ಸೊಶೀಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುವ ಮುನ್ನ ಎಚ್ಚರ ಎಚ್ಚರ!
ಇತ್ತೀಚಿನ ದಿನಗಳಲ್ಲಿ ಸೊಶೀಯಲ್ ಮೀಡಿಯಾ ಸಾಕಷ್ಟು ಪ್ರಭಾವಿಯಾಗಿದೆ. ಇದೇ ಕಾರಣಕ್ಕೆ ಹಲವು ಬ್ರ್ಯಾಂಡ್ಗಳು ಸೇರಿದಂತೆ ಅನೇಕ ಜನರು ತಮ್ಮ ವಿಚಾರಗಳನ್ನು ಸೊಶೀಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳ ಮೂಲಕ ಪ್ರಮೋಷನ್ ಮಾಡುತ್ತಾರೆ. ಇದಕ್ಕೆ ತಕ್ಕಂತೆ ಸೊಶೀಯಲ್ ಮೀಡಿಯಾದಲ್ಲಿ ಪ್ರಮೋಷನ್ ಮಾಡುವ ಕೆಲವು ಜನಪ್ರಿಯ ಅಕೌಂಟ್ಗಳು ಲಭ್ಯವಿದೆ. ಇನ್ನು ಅನೇಕ ಜನರು ಹೆಚ್ಚಿನ ಫಾಲೋವರ್ಸ್ ಅನ್ನು ಹೊಂದಿರುವವರು ಹಣ ಪಡೆದುಕೊಂಡು ಪ್ರಮೋಷನ್ ಮಾಡುವುದನ್ನು ಕೂಡ ರೂಡಿಸಿಕೊಂಡಿದ್ದಾರೆ.

ಹೌದು, ಸೊಶೀಯಲ್ ಮೀಡಿಯಾದಲ್ಲಿ ಪ್ರಮೋಷನ್ ಮಾಡುವುದು ಇತ್ತೀಚಿನ ಟ್ರೆಂಡ್ ಆಗಿದೆ. ಆದರೆ ಇದೀಗ ಭಾರತ ಸರ್ಕಾರ ಸೊಶೀಯಲ್ ಮೀಡಿಯಾ ಪ್ರಮೋಷನ್ ಮಾಡೋರಿಗೆ ಬಿಗ್ ಶಾಕ್ ನೀಡಿದೆ. ಗ್ರಾಹಕರ ವ್ಯವಹಾರಗಳ ಇಲಾಖೆಯು ಸೊಶೀಯಲ್ ಮೀಡಿಯಾ ಪ್ರಭಾವಿಗಳಿಗೆ ಹೊಸ ಅನುಮೋದನೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ತಾವು ಹಣ ಪಡೆದು ಪ್ರಮೋಷನ್ ಮಾಡುತ್ತಿರುವ ವಿಚಾರವನ್ನು ಬಹಿರಂಗಪಡಿಸದಿದ್ದರೆ 50 ಲಕ್ಷದವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ. ಹಾಗಾದ್ರೆ ಹೊಸ ಮಾರ್ಗಸೂಚಿ ಏನು ಹೇಳಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.
ಹೊಸ ಅನುಮೋದನೆ ಮಾರ್ಗಸೂಚಿಗಳು ಯಾವುವು?
ಸೊಶೀಯಲ್ ಮೀಡಿಯಾದಲ್ಲಿ ಹೆಚ್ಚಿನ ಫಾಲೋವರ್ಸ್ ಹೊಂದಿರುವವರು ತಮ್ಮ ಅಕೌಂಟ್ಗಳ ಮೂಲಕ ಕೆಲವು ಬ್ರ್ಯಾಂಡ್ಗಳ ಬಗ್ಗೆ ಪ್ರಚಾರ ಮಾಡೋದು ಸಾಮಾನ್ಯ. ಇದಕ್ಕೆ ತಕ್ಕಂತೆ ಬ್ರ್ಯಾಂಡ್ಗಳು ಕೂಡ ತಮ್ಮ ಪರವಾದ ಪ್ರಚಾರಕ್ಕೆ ಹಣವನ್ನು ಕೂಡ ಪಾವತಿಸುತ್ತವೆ. ಆದರೆ ಹಣ ಪಡೆದುಕೊಂಡು ಪ್ರಮೋಷನ್ ಮಾಡುವವರು ಈ ವಿಚಾರವನ್ನು ಕೂಡ ಫಾಲೋವರ್ಸ್ಗಳಿಗೆ ತಿಳಿಸುವುದು ಕಡ್ಡಾಯವಾಗಿದೆ. ಬದಲಿಗೆ ಹಣ ಪಡೆದುಕೊಂಡು ಅದರ ಗುಣಮಟ್ಟ ಹೇಗೆ ಇದ್ದರು ಫಾಲೋವರ್ಸ್ಗಳ ದಾರಿ ತಪ್ಪಿಸಿದರೆ ಐವತ್ತು ಲಕ್ಷದವರೆಗೂ ದಂಡ ವಿಧಿಸಲಾಗುವುದು ಎಂದು ಹೊಸ ಅನುಮೋದನೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಸೊಶಿಯಲ್ ಮೀಡಿಯಾ ಪ್ರಭಾವಿಗಳ ಸಂಖ್ಯೆ ಹೆಚ್ಚಾಗಿದೆ. ತಮ್ಮ ಹಿಂಬಾಲಕರ ಸಂಖ್ಯೆಯುನ್ನು ಹೆಚ್ಚಿಸಿಕೊಳ್ಳುವ ಮೂಲಕ ಜಾಹಿರಾತುಗಳನ್ನು ಪಡೆಯುತ್ತಿದ್ದಾರೆ. ಜೊತೆಗೆ ತಮ್ಮ ಜನಪ್ರಿಯತೆ ಹೆಚ್ಚಾದಂತೆ ಪ್ರಚಾರ ಮತ್ತು ಜಾಹೀರಾತು ನೀಡುವುದಾಗಿ ಹಲವಾರು ಬ್ರ್ಯಾಂಡ್ಗಳಿಂದ ಹಣ ಪಡೆಯುತ್ತಾರೆ. ಆದರೆ ಹೀಗೆ ಪಾವತಿಸಿದ ಪ್ರಮೋಷನ್ ವಿಚಾರವನ್ನು ಮುಚ್ಚಿಟ್ಟು ಸಾಕಷ್ಟು ಮಂದಿ ಪ್ರಮೋಷನ್ ಮಾಡುತ್ತಾರೆ. ಇದರಿಂದ ಸಾಕಷ್ಟು ಮಂದಿ ದಾರಿ ತಪ್ಪಿರುವ ಪ್ರಕರಣಗಳು ದಾಖಲಾಗಿವೆ.
ಇದರ ಪರಿಣಾಮ ಗ್ರಾಹಕ ವ್ಯವಹಾರಗಳ ಇಲಾಖೆ ಹೊಸ ಅನುಮೋದನೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಹೊಸ ನಿಯಮಗಳ ಪ್ರಕಾರ ಸೊಶೀಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುವವರು ಪ್ರಚಾರದ ವಿಷಯವನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಈ ವಿಚಾರವನ್ನು ಬಹಿರಂಗಪಡಿಸದಿದ್ದರೆ ಪ್ರಾರಂಭದಲ್ಲಿ 10 ಲಕ್ಷ ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಇದೇ ತಪ್ಪನ್ನು ಪುನರಾವರ್ತನೆ ಮಾಡಿದರೆ 50 ಲಕ್ಷ ರೂ.ವರೆಗೆ ಶುಲ್ಕ ವಿಧಿಸಲಾಗುತ್ತದೆ ಎನ್ನಲಾಗಿದೆ.

ಪ್ರಸ್ತುತ ಗ್ರಾಹಕ ವ್ಯವಹಾರಗಳ ಇಲಾಖೆ ಹೊರಡಿಸಿರುವ ಹೊಸ ಮಾರ್ಗಸೂಚಿಗಳು ಗ್ರಾಹಕ ಸಂರಕ್ಷಣಾ ಕಾಯಿದೆ, 2019ಗೆ ಅನುಗುಣವಾಗಿವೆ. ಈ ಕಾಯಿದೆಯು ಗ್ರಾಹಕರನ್ನು ದಾರಿತಪ್ಪಿಸುವ ಜಾಹೀರಾತುಗಳಿಂದ ರಕ್ಷಿಸಲಿದೆ. ಸದ್ಯ ಹೊಸ ಸೂಚನೆಗಳ ಪ್ರಕಾರ ಸೊಶೀಯಲ್ ಮೀಡಿಯಾ ಪ್ರಭಾವಿಗಳು ಜಾಹೀರಾತು ಅಥವಾ ಪ್ರಚಾರ ಮಾಡುತ್ತಿರುವ ಉತ್ಪನ್ನ ಮತ್ತು ಸೇವೆಯನ್ನು ನಿಜವಾಗಿ ಬಳಸಬೇಕು ಅನ್ನೊದನ್ನ ಹೇಳಿದೆ. ಅಲ್ಲದೆ ತಾವು ಪ್ರಚಾರ ಮಾಡುವ ವಿಚಾರದ ಬಗ್ಗೆ ಗ್ರಾಹಕರಿಗೆ ಸ್ಪಷ್ಟತೆ ನೀಡುವುದು ಸೊಶೀಯಲ್ ಮೀಡಿಯಾ ಪ್ರಭಾವಿಗಳ ಕರ್ತವ್ಯವಾಗಿದೆ.
ಸುಖಾ ಸುಮ್ಮನೆ ಹಣವನ್ನು ಪಡೆದುಕೊಂಡು ಪ್ರಾಡಕ್ಟ್ಗಳು ಸ್ವತಃ ತಾವು ಕೂಡ ಬಳಸದೆ ಸಾಮಾಜಿಕವಾಗಿ ಜನರನ್ನು ಬಳಸುವಂತೆ ಕರೆ ನೀಡುವ ಹಾಗೂ ಅವರನ್ನು ಪ್ರೇರೆಪಿಸುವ ಎಲ್ಲರಿಗೂ ಇದು ಅನ್ವಯವಾಗಲಿದೆ. ಇದರಿಂದ ಸರ್ಕಾರ ಸೊಶೀಯಲ್ ಮಿಡಿಯಾದಲ್ಲಿ ಪೇಯ್ಡ್ ಪ್ರಮೋಷನ್ ಮಾಡುವವರ ವಿರುದ್ದ ಹೊಸ ಹೆಜ್ಜೆ ಇಟ್ಟಿದೆ. ಗುಣಟ್ಟವಿಲ್ಲದ ಪ್ರಾಡಕ್ಟ್ಗಳ ಬಳಕೆಯಿಂದ ಸಾಕಷ್ಟು ಮಂದಿ ನಷ್ಟ ಅನುಭವಿಸಿರುವುದನ್ನುಕೂಡ ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.


Click it and Unblock the Notifications








