ಜಿಯೋದಿಂದ ಮತ್ತೊಂದು ಮಹತ್ತರ ಕಾರ್ಯ..! ಡಿಜಿಟಲ್ ದೇವಭೂಮಿಯಾಗಲಿದೆ ಉತ್ತರಾಖಂಡ..!
ಭಾರತೀಯ ಟೆಲಿಕಾಂ ಲೋಕದಲ್ಲಿ ಕ್ರಾಂತಿ ಎಬ್ಬಿಸಿರುವ ಜಿಯೋ ಮತ್ತೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿದೆ. ಉತ್ತರಾಖಂಡದಲ್ಲಿ ಸುಮಾರು 4000 ಕೋಟಿ ರೂ.ಗಳನ್ನು ಹೂಡಿಕೆ ಮಾಡಲು ರಿಲಾಯನ್ಸ್ ಇಂಡಸ್ಟ್ರೀಸ್ನ ಚೇರ್ಮನ್ ಮುಖೇಶ್ ಅಂಬಾನಿ ನಿರ್ಧರಿಸಿದ್ದಾರೆ. ಈ ಮೂಲಕ ದೇವಭೂಮಿಯಾಗಿರುವ ಉತ್ತರಾಖಂಡವನ್ನು ಡಿಜಿಟಲ್ ದೇವಭೂಮಿಯನ್ನಾಗಿ ಮಾಡಲು ಜಿಯೋ ಸನ್ನದ್ಧವಾಗಿದೆ. ಎರಡು ವರ್ಷಗಳಲ್ಲಿ ಜಿಯೋ 2385ಕ್ಕೂ ಹೆಚ್ಚು ಶಾಲಾ, ಕಾಲೇಜುಗಳಿಗೆ ಅತಿ ವೇಗದ ಇಂಟರ್ನೆಟ್ ಸಂಪರ್ಕ ನೀಡಲು ಮುಂದಾಗಿದೆ.

ಹೌದು, ಡೆಹರಾಡೂನ್ನಲ್ಲಿ ಆಯೋಜಿಸಿರುವ ಉತ್ತರಾಖಂಡ ಹೂಡಿಕೆದಾರರ ಸಮ್ಮೇಳನದಲ್ಲಿ ಮಾತನಾಡಿದ ಮುಖೇಶ್ ಅಂಬಾನಿ ಪರಿಸರ ಸ್ನೇಹಿ ಕೈಗಾರಿಕೆ ಮತ್ತು ವ್ಯವಹಾರಗಳನ್ನು ಜಿಯೋ ಪ್ರಸ್ತುತ ಪಡಿಸುತ್ತಿದೆ ಎಂದು ಹೇಳಿ, ಮಹತ್ವದ ಯೋಜನೆಗೆ ನಾಂದಿ ಹಾಡಿದ್ದಾರೆ. ಆಗಿದ್ದರೆ, ಏನೀದು ಡಿಜಿಟಲ್ ದೇವಭೂಮಿ..? ಯೋಜನೆಯ ಕಾರ್ಯನಿರ್ವಹಣೆ ಹೇಗೆ..? ಮುಂದೆ ನೋಡಿ..

ಡಿಜಿಟಲ್ ದೇವಭೂಮಿ
ದೇವಭೂಮಿಯಾಗಿರುವ ಉತ್ತರಾಖಂಡನ್ನು ಡಿಜಿಟಲ್ ದೇವಭೂಮಿಯಾಗಿ ಮಾಡಲು ಮುಖೇಶ್ ಅಂಬಾನಿ ಪಣತೊಟ್ಟಿದ್ದು, ಜಿಯೋ ಮೂಲಕ ಸುಸ್ಥಿರ ಪ್ರವಾಸೋದ್ಯಮವನ್ನು ಹೆಚ್ಚಿಸಲು ಕಾರ್ಯತಂತ್ರ ಹೆಣೆದಿದ್ದಾರೆ. ಈ ಯೋಜನೆಯ ಮೂಲಕ ಜಿಯೋ ಆರೋಗ್ಯ, ಶಿಕ್ಷಣ, ಸರ್ಕಾರಿ ಸೇವೆಗಳ ವಿತರಣೆ ಹಾಗೂ ಪ್ರತಿ ಪ್ರಜೆಯ ಜೀವನವನ್ನು ಸುಧಾರಿಸುತ್ತದೆ ಎಂದು ಅಂಬಾನಿ ಹೇಳಿದ್ದಾರೆ.

ಡಿಜಿಟಲ್ ಉತ್ತರಾಖಂಡ್
ಮುಖೇಶ್ ಅಂಬಾನಿ ಒಡೆತನದ ಜಿಯೋ ಡಿಜಿಟಲ್ ಉತ್ತರಾಖಂಡ ಯೋಜನೆಗೆ ಬದ್ಧವಾಗಿದ್ದು, ಪ್ರತಿ ನಾಗರಿಕನಿಗೂ ಅತ್ಯುತ್ತಮ ಗುಣಮಟ್ಟದ ಡಿಜಿಟಲ್ ಸಂಪರ್ಕ ಮತ್ತು ಸೇವೆಗಳನ್ನು ನೀಡಲು ಉತ್ಸುಕವಾಗಿದೆ. 2016ರಲ್ಲಿ ಟೆಲಿಕಾಂ ಸೆಕ್ಟರ್ಗೆ ಪ್ರವೇಶ ಕೊಟ್ಟ ನಂತರ ಟೆಲಿಕಾಂ ಲೋಕದಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದಿರುವ ಜಿಯೋ ಉತ್ತರಾಖಂಡವನ್ನು ಕೂಡ ಬದಲಿಸುತ್ತಾ..? ಎಂಬುದು ಪ್ರಶ್ನೆ.

ಪರಿಸರ ಸ್ನೇಹಿ ಉದ್ಯಮದ ಪ್ರಚಾರ
ಜಿಯೋ ಲಾಂಚ್ ಆಗಿ ಇಲ್ಲಿಯವರೆಗೂ 220 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಅಂಬಾನಿ ಹೇಳುವಂತೆ ಜಿಯೋ ಪರಿಸರ ಸ್ನೇಹಿ ಉದ್ಯಮಗಳು ಮತ್ತು ವ್ಯವಹಾರಗಳನ್ನು ಉತ್ತೇಜಿಸುತ್ತದೆ. ಸುಸ್ಥಿರ ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ. ಮತ್ತು ಆರೋಗ್ಯ, ಶಿಕ್ಷಣ ಮತ್ತು ಸರ್ಕಾರಿ ಸೇವೆಗಳ ವಿತರಣೆಯನ್ನು ಸುಧಾರಿಸಿ, ನಾಗರಿಕನ ಜೀವನವನ್ನು ಉತ್ತಮಗೊಳಿಸುತ್ತದೆಯಂತೆ.

ಹೈ ಸ್ಪೀಡ್ ಇಂಟರ್ನೆಟ್ ಸಂಪರ್ಕ
ಡಿಜಿಟಲ್ ದೇವಭೂಮಿ ಯೋಜನೆ ಮೂಲಕ ಜಿಯೋ 2185 ಸರ್ಕಾರಿ ಶಾಲೆಗಳು ಹಾಗೂ 200ಕ್ಕಿಂತ ಹೆಚ್ಚು ಸರ್ಕಾರಿ ಕಾಲೇಜುಗಳಿಗೆ 2 ವರ್ಷದ ಅವಧಿಯಲ್ಲಿ ಹೈಸ್ಪೀಡ್ ಇಂಟರ್ನೆಟ್ ಸಂಪರ್ಕ ನೀಡಲು ಮುಂದಾಗಿದೆ. ಈ ಯೋಜನೆ ಉತ್ತರಾಖಂಡದ ಜನರಿಗೆ ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಅದಲ್ಲದೇ 100ಕ್ಕೂ ಹೆಚ್ಚು ರಿಟೇಲ್ ಸ್ಟೋರ್ಗಳ ಸ್ಥಾಪನೆಯನ್ನು ಜಿಯೋ ಉತ್ತರಾಖಂಡದಲ್ಲಿ ಮಾಡುತ್ತಿದ್ದು, ರಿಟೇಲ್ ಸ್ಟೋರ್ಗಳನ್ನು ಉತ್ತಮವಾಗಿ ಅಭಿವೃದ್ಧಿಪಡಿಸುವ ಇರಾದೆಯಲ್ಲಿ ಜಿಯೋ ಇದೆ.

ಅತಿಹೆಚ್ಚು ಹೂಡಿಕೆ
ಉತ್ತರಾಖಂಡನಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಅತಿಹೆಚ್ಚು ಹೂಡಿಕೆ ಮಾಡಿದ ಕೀರ್ತಿ ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್)ಚೇರಮನ್ ಮುಖೇಶ್ ಅಂಬಾನಿಗೆ ಸಲ್ಲುತ್ತದೆ. ಜಿಯೋ ಮೂಲಕ 4000 ರೂ. ಕೋಟಿಯನ್ನು ಉತ್ತರಾಖಂಡದಲ್ಲಿ ಹೂಡಿಕೆ ಮಾಡಿದ್ದು, ಭಾರೀ ಉದ್ಯೋಗವಕಾಶ ಸೃಷ್ಟಿಯಾಗುವ ನಿರೀಕ್ಷೆಯಿದೆ.

ಹೈಟೆಕ್ ಕೈಗಾರಿಕೆಗಳ ಬೆಳವಣಿಗೆಗೆ ಹೊಸ ಮಾರ್ಗ
ಜಿಯೋ ಹೂಡಿಕೆಯೊಂದಿಗೆ ರಾಜ್ಯ ಸರ್ಕಾರದ ವ್ಯವಹಾರ ನೀತಿಗಳು ಖಂಡಿತವಾಗಿ ಉತ್ತರಾಖಂಡದಲ್ಲಿ ಹೈಟೆಕ್ ಕೈಗಾರಿಕೆಗಳ ಬೆಳವಣಿಗೆಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ. ರಿಲಾಯನ್ಸ್ಗೆ ಉತ್ತರಾಖಂಡನಲ್ಲಿ ಹೂಡಿಕೆಗೆ ಆಕರ್ಷಕ ಅವಕಾಶ ಸಿಕ್ಕಿದ್ದು, ಭವಿಷ್ಯದಲ್ಲಿ ಉತ್ತರಾಖಂಡದ ಅಭೂತಪೂರ್ವ ಬೆಳವಣಿಗೆಗೆ ಹೂಡಿಕೆದಾರರ ಸಮ್ಮೇಳನ ಅಡಿಪಾಯವಾಗಲಿದೆ ಎಂದು ಅಂಬಾನಿ ವಿಶ್ವಾಸ ವ್ಯಕ್ತಪಡಿಸಿದರು.


Click it and Unblock the Notifications








