ಫೇಸ್ಬುಕ್ನಲ್ಲಿ ಅಪರಿಚಿತನ ಜೊತೆ ಸ್ನೇಹ; 20 ಲಕ್ಷ ಕಳೆದುಕೊಂಡ ದಂಪತಿ
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳನ್ನು ಜನರು ಹೆಚ್ಚಾಗಿ ಬಳಕೆ ಮಾಡಲು ಮುಂದಾಗುತ್ತಿದ್ದಂತೆ ಸಾಮಾನ್ಯ ಜನರನ್ನು ಮೂರ್ಖರನ್ನಾಗಿ ಮಾಡುವ ಕೆಲಸವೂ ಬಹಳ ವೇಗವಾಗಿಯೇ ಸಾಗುತ್ತಿದೆ. ಇದಕ್ಕೆಂದೇ ಪ್ರತ್ಯೇಕ ಸೈಬರ್ ತನಿಖಾ ಸಂಸ್ಥೆಗಳನ್ನು ಸ್ಥಾಪನೆ ಮಾಡಲಾಗಿದೆ. ಹಾಗೆಯೇ ಬಳಕೆದಾರರು ಹೆಚ್ಚಿನ ಗೌಪ್ಯತೆ ಕಾಪಾಡಿಕೊಳ್ಳಲು ಸಾಮಾಜಿಕ ಮಾಧ್ಯಮ ಆಪ್ಗಳು ವಿಶೇಷ ಸೌಲಭ್ಯ ಕಲ್ಪಿಸಿವೆ. ಅದಾಗ್ಯೂ ಮೋಸ ಹೋಗುವ ಪ್ರಕರಣಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.

ಹೌದು, ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಕೇರಳದ ದಂಪತಿ ಬರೋಬ್ಬರಿ 20 ಲಕ್ಷ ರೂ. ಕಳೆದುಕೊಂಡಿದ್ದಾರೆ. ಹಾಗಿದ್ರೆ ಕಿರಾತಕರು ಈ ದಂಪತಿಗಳಿಗೆ ವಂಚಿಸಿದ್ದು ಹೇಗೆ? ಯಾರೊಂದಿಗೆ ಎಫ್ಬಿನಲ್ಲಿ ಸ್ನೇಹ ಬೆಳಸಿಕೊಂಡಿದ್ದರು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಏನಿದು ಘಟನೆ ?
ವಿದೇಶದಲ್ಲಿ ವಾಸಿಸುವ ಪತಿ ಫೇಸ್ಬುಕ್ನಲ್ಲಿ ಅಪರಿಚಿತರೊಂದಿಗೆ ಸ್ನೇಹ ಬೆಳೆಸಿದ್ದಾರೆ. ಇದಾದ ನಂತರ ಇವರ ಸ್ನೇಹ ಹೆಚ್ಚು ಆತ್ಮೀಯವಾಗಿ ವಾಟ್ಸಾಪ್ ಮೂಲಕ ಸಂಪರ್ಕ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿ ತಾನು ಸಹ ವಿದೇಶದಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಹಾಗೆಯೇ ಭಾರತಕ್ಕೆ ಬಂದಾಗ ಭೇಟಿ ಮಾಡುವುದಾಗಿ ದಂಪತಿಗೆ ತಿಳಿಸಿದ್ದಾನೆ. ಇಷ್ಟೆಲ್ಲಾ ಮಾತುಕತೆ ಆಗಿದೆ ಅಂದಮೇಲೆ ಆತ ಎಷ್ಟರ ಮಟ್ಟಿಗೆ ಇವರನ್ನು ಮರಳು ಮಾಡಿದ್ದಾನೆ ಎಂದು ಊಹಿಸಿಕೊಳ್ಳಿ.

ದಂಪತಿ
ಡಿಸೆಂಬರ್ 2022 ರ ಆರಂಭದಲ್ಲಿ ಈ ದಂಪತಿಯನ್ನು ಸಂಪರ್ಕಿಸಿದ ಆತ, ಭಾರತಕ್ಕೆ ಬಂದಿದ್ದೇನೆ. ಆದರೆ, ದೆಹಲಿಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ತನ್ನ ಸಾಮಾನು ಸರಂಜಾಮುಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ವಲ್ಪ ಆರ್ಥಿಕ ಸಹಾಯ ಮಾಡಬಹುದೇ ಎಂದು ಕೇಳಿದ್ದಾನೆ. ಹಾಗೆಯೇ ತನ್ನ ಬ್ಯಾಗ್ನಲ್ಲಿ 3 ಕೋಟಿ ರೂ.ಗಳ ಡಿಡಿ ಇದೆ. ಕಸ್ಟಮ್ಸ್ನಿಂದ ಡಿಡಿಯನ್ನು ಪಡೆದುಕೊಳ್ಳಲು ದಯಮಾಡಿ ಸಹಾಯಮಾಡಿ, ನಂತರ ಎಲ್ಲಾ ಹಣವನ್ನು ಮರುಪಾವತಿ ಮಾಡುತ್ತೇನೆ ಎಂದು ಬರವಸೆ ನೀಡಿದ್ದಾನೆ.

ಹಣ ಪಡೆದು ಸಂಪರ್ಕ ಕಡಿತಗೊಳಿಸಿಕೊಂಡ ಆರೋಪಿ
ಇನ್ನು ಈ ದಂಪತಿಗಳು ಆರೋಪಿಯನ್ನು ಉತ್ತಮ ಸ್ನೇಹಿತ ಎಂದು ನಂಬಿದ್ದ ಕಾರಣ ಎನ್ಆರ್ಐ ಪತಿ ಅವರಿಗೆ ಸಹಾಯ ಮಾಡಲು ಒಪ್ಪಿಕೊಂಡಿದ್ದಾರೆ. ಇದಾದ ನಂತರ ಅವರ ಸ್ನೇಹಿತ ಮತ್ತು ಸಂಬಂಧಿಕರಿಂದ ಹಣವನ್ನು ವ್ಯವಸ್ಥೆ ಮಾಡಿ ಸುಮಾರು 11 ಬ್ಯಾಂಕ್ಗಳಲ್ಲಿ ಪಾವತಿ ಮತ್ತು ಯುಪಿಐ ವಹಿವಾಟು ನಡೆಸಿ 20.05 ಲಕ್ಷ ರೂ.ಗಳನ್ನು ಆರೋಪಿಗಳಿಗೆ ಡಿಸೆಂಬರ್ 7 ರಿಂದ 14 ರ ನಡುವೆ ಕಳುಹಿಸಿದ್ದಾರೆ. ಆದರೆ, ಹಣ ಸ್ವೀಕರಿಸಿದ ನಂತರ, ಆರೋಪಿ ಮೊಬೈಲ್ ಸಂಖ್ಯೆಯು ಸಂಪರ್ಕಕ್ಕೆ ಸಿಕ್ಕಿಲ್ಲ. ಈ ಮೂಲಕ ತಾವು ವಂಚನೆಗೆ ಒಳಗಾಗಿದ್ದೇವೆ ಎಂದು ತಿಳಿದುಬಂದಿದೆ.

ದೂರು ನೀಡಿದ ಪತ್ನಿ
ಈ ಎಲ್ಲಾ ಘಟನೆ ಬಳಿಕ ಎನ್ಆರ್ಐ ಪತ್ನಿ ಕೇರಳದ ಎರ್ನಾಕುಲಂ ಗ್ರಾಮಾಂತರ ಸೈಬರ್ ಪೊಲೀಸರಿಗೆ ದೂರು ದಾಖಲು ಮಾಡಿದ್ದಾರೆ. ಹಾಗೆಯೇ ಹಣ ರವಾನೆಯಾದ ಎಲ್ಲಾ ಖಾತೆಗಳನ್ನು ಪೊಲೀಸರು ಟ್ರ್ಯಾಕ್ ಮಾಡುತ್ತಿದ್ದು, ಖಾತೆಗಳನ್ನು ಫ್ರೀಜ್ ಮಾಡಲು ಪ್ರಯತ್ನಿಸುತ್ತಿದ್ದಾರೆ.

ನೀವು ಎಚ್ಚರವಾಗಿರಿ...
ಸಾಮಾಜಿಕ ಮಾಧ್ಯಮದಲ್ಲಿ ಯಾವಾಗಲೂ ನಕಲಿ ಜನರು ಅಥವಾ ವಂಚಕರು ನಿಮ್ಮನ್ನು ಗುರಿಯಾಗಿಸಿಕೊಂಡು ಮೋಸ ಮಾಡಲು ಕಾಯುತ್ತಿರುತ್ತಾರೆ. ಡಿಪಿ ನೋಡಿಯೋ ಅಥವಾ ಫೇಸ್ಬುಕ್ನ ಪ್ರೊಫೈಲ್ ನೋಡಿಯೋ ಯಾವುದೇ ವ್ಯಕ್ತಿಯ ಬಗ್ಗೆ ನಿಖರ ನಿರ್ಧಾರಕ್ಕೆ ಬರಬೇಡಿ. ಅದರಲ್ಲೂ ಪ್ರಮುಖವಾಗಿ ಆನ್ಲೈನ್ನಲ್ಲಿ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಬೇಡಿ ಅಥವಾ ಯಾವುದೇ ಅಪರಿಚಿತರನ್ನು ನಂಬಬೇಡಿ. ಅಕಸ್ಮಾತ್ ನೀವು ಅನಾಮಿಕರನ್ನು ನಂಬಿದ್ದೀರಿ ಎಂದಾದರೆ ಈ ದಂಪತಿಗೆ ಬಂದ ಪರಿಸ್ಥಿತಿ ನಿಮಗೂ ಬರುವುದರಲ್ಲಿ ಎರಡು ಮಾತಿಲ್ಲ.


Click it and Unblock the Notifications








