ವೆರಿಫಿಕೇಶನ್ ಪ್ರಕ್ರಿಯೆಗೆ ಆಧಾರ್ ಸಂಖ್ಯೆ ನೀಡಬೇಕಾಗಿಲ್ಲ ಎಂದ UIDAI ಸಂಸ್ಥೆ
ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆದ ಟ್ರಿಬ್ಯೂನ್ ನ ವರದಿಯೊಂದು UIDAI ಗೆ ಸಲ್ಲಿಸಲಾದ ಪ್ರತಿಯೊಬ್ಬ ವ್ಯಕ್ತಿಯ ಹೆಸರು, ವಿಳಾಸ, ಪೋಸ್ಟಲ್ ಕೋಡ್,ಫೋಟೋ, ಫೋನ್ ನಂಬರ್, ಈಮೈಲ್ ವಿಳಾಸ ಹೀಗೆ ಪ್ರತಿಯೊಂದು ಮಾಹಿತಿಯೂ ಏಜಂಟ್ ಒಬ್ಬರ ಮುಖಾಂತರ ದೊರಕಿರುವುದಾಗಿ ತಿಳಿಸಿತ್ತು. ಹಾಗೆಯೇ ಈ ತನಿಖೆಯ ವೇಳೆ ಅನಧಿಕೃತ ವ್ಯಕ್ತಿಗಳಿಗೆ ಜನರ ಗೌಪ್ಯ ಮಾಹಿತಿ ದೊರಕಿರುವುದು ಪತ್ತೆಯಾಗಿರುವುದಾಗಿ ಹೇಳಿದೆ.

ಈ ವರದಿ ಹೊರಬರುತ್ತಿರುವಂತೆ ಯುನೀಕ್ ಐಡೆಂಟಿಫಿಕೇಶನ್ ಅಥೋರಿಟಿ ಆಫ್ ಇಂಡಿಯಾ (UIDAI) ಸಂಸ್ಥೆಯು ಆಧಾರ್ ಮಾಹಿತಿಯ ಸೋರಿಕೆಯನ್ನು ಅಲ್ಲಗೆಳೆದಿದೆ. "ಬಯೋಮೆಟ್ರಿಕ್ ಮಾಹಿತಿ ಸೇರಿದಂತೆ ಎಲ್ಲಾ ಆಧಾರ್ ಸಂಬಂಧೀ ಮಾಹಿತಿಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ" ಎಂದು ಹೇಳಿಕೆ ನೀಡಿರುವ UIDAI ಸಂಸ್ಥೆ ಟ್ರಿಬ್ಯೂನ್ ನ ವರದಿ ಸುಳ್ಳೆಂದು ಹೇಳಿದೆ. ಟ್ರಿಬ್ಯೂನ್ ಆಧಾರ್ ಡೇಟಾಬೇಸ್ ನ ಸುರಕ್ಷತೆ ಉಲ್ಲಂಘನೆಯಾಗಿರುವ ಕುರಿತು ವರದಿ ಮಾಡುತ್ತಿದ್ದಂತೆ ಹುಟ್ಟಿರುವ ಗೌಪ್ಯತೆಯ ಕುರಿತು ಕಾಳಜಿಯನ್ನು ಉದ್ದೇಶಿಸಿ UIDAI ಸೂಕ್ತ ಕ್ರಮಕೈಗೊಳ್ಳುತ್ತಿದೆ.
ಈ ಹೊಸ ವ್ಯವಸ್ಥೆಯಲ್ಲಿ ಆಧಾರ್ ಕಾರ್ಡ್ ಹೊಂದಿರುವವರು ವೆರಿಫಿಕೇಶನ್ ಪ್ರಕ್ರಿಯೆಯ ಸಂದರ್ಭದಲ್ಲಿ ತಮ್ಮ ಆಧಾರ್ ಸಂಖ್ಯೆ ನೀಡಬೇಕಾದ ಅವಶ್ಯಕತೆಯಿಲ್ಲ. ಬದಲಿಗೆ ಯಾದೃಚ್ಛಿಕ 16-ಅಂಕಿಯ ವರ್ಚ್ಯುವಲ್ ಐಡಿ ಯೊಂದನ್ನು ಜನರೇಟ್ ಮಾಡಬಹುದಾಗಿದ್ದು ಬ್ಯಾಂಕ್, ಟೆಲಿಕಾಂ ಸರ್ವೀಸ್ ಪ್ರೊವೈಡರ್ ಮೊದಲಾದ ಅಧಿಕೃತ ಸಂಸ್ಥೆಗಳಲ್ಲಿ ವೆರಿಫಿಕೇಶನ್ ಪ್ರಕ್ರಿಯೆಗೆ ಆಧಾರ್ ಬದಲಿಗೆ ಈ ವರ್ಚ್ಯುವಲ್ ಐಡಿಯನ್ನು ಬಳಸಬಹುದಾಗಿದೆ.
"ವರ್ಚ್ಯುವಲ್ ಐಡಿ ಒಂದು ತಾತ್ಕಾಲಿಕ ಮತ್ತು ಹಿಂಪಡೆಯಬಹುದಾದ 16-ಅಂಕಿಯ ಯಾದೃಚ್ಛಿಕ ಸಂಖ್ಯೆಯಾಗಿದ್ದು ಆಧಾರ್ ಸಂಖ್ಯೆಯೊಂದಿಗೆ ಮ್ಯಾಪ್ ಮಾಡಲಾಗಿರುತ್ತದೆ. ಈ ವರ್ಚ್ಯುವಲ್ ಐಡಿ ಯಿಂದ ಆಧಾರ್ ಸಂಖ್ಯೆಯನ್ನು ಪಡೆಯಲು ಸಾಧ್ಯವಿಲ್ಲ." ಎಂದು UIDAI ಹೊರಡಿಸಿರುವ ಸರ್ಕ್ಯುಲರ್ ನಲ್ಲಿ ತಿಳಿಸಲಾಗಿದೆ.
UIDAI "ಲಿಮಿಟೆಡ್ KYC" ಎಂಬ ಪರಿಕಲ್ಪನೆಯನ್ನು ಪರಿಚಯಿಸಿದ್ದು,ಇದರ ಅನುಸಾರ UIDAI ಏಜನ್ಸಿಗಳಿಗೆ ಆಧಾರ್ ಸಂಖ್ಯೆಯನ್ನು ನೀಡದೆ ಬದಲಿಗೆ 'ಏಜನ್ಸಿ ನಿರ್ದಿಷ್ಟ ಅನನ್ಯ UID ಟೋಕನ್' ಅನ್ನು ನೀಡುತ್ತದೆ. ಈ ಮೂಲಕ ಆ ಏಜನ್ಸಿಗಳು ತಮ್ಮ ಪೇಪರ್ಲೆಸ್ ಕೆಯೈಸಿ ಪ್ರಕ್ರಿಯೆಯ ಸಂದರ್ಭದಲ್ಲಿ ಆಧಾರ್ ಸಂಖ್ಯೆಯನ್ನು ಸಂಗ್ರಹಿಸುವುದನ್ನು ತಪ್ಪಿಸಬಹುದಾಗಿದೆ.
1 ಬಿಲಿಯನ್ಗೂ ಅಧಿಕ ಆಧಾರ್ ಮಾಹಿತಿಯನ್ನು 10 ನಿಮಿಷಗಳಲ್ಲಿ ಕೇವಲ ರೂ 500ಕ್ಕೆ ಪಡೆಯಬಹುದಗಿದೆ ಎಂದು ಟ್ರಿಬ್ಯೂನಲ್ ವರದಿ ಮಾಡಿದ ನಂತರ ಜನರ ಖಾಸಗಿ ಮಾಹಿತಿ ಮತ್ತು ಜನಸಂಖ್ಯಾ ಮಾಹಿತಿಯನ್ನು ಸಂಗ್ರಹಿಸುವ ಕುರಿತು ಅನೇಕರು ಸಂದೇಹ ಮತ್ತು ಕಾಳಜಿಯನ್ನು ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಈ ಹೆಜ್ಜೆಯನ್ನಿಡಲಾಗಿದೆ.
ಈ ಹೊಸ ವ್ಯವಸ್ಥೆ ಜಾರಿಗೆ ಬರಲು ಜನರು ಮಾರ್ಚ್ 1ರ ತನಕ ಕಾಯಬೇಕಾಗಿದೆ.UIDAI ಈ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ಅಗತ್ಯ ಅಪ್ಲಿಕೇಶನ್ಗಳನ್ನು ಬಿಡುಗಡೆ ಮಾಡಬೇಕಾಗಿದ್ದು ಜೂನ್ 1ರ ಒಳಗಾಗಿ ಎಲ್ಲಾ ಏಜನ್ಸಿಗಳು ಈ ಹೊಸ ವ್ಯವಸ್ಥೆಯನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕೆಂದು UIDAI ನ ಸರ್ಕ್ಯುಲರ್ ನಲ್ಲಿ ತಿಳಿಸಲಾಗಿದೆ.
ಈ ಸರ್ಕ್ಯುಲರ್ ನ ಅನುಸಾರ ಒಮ್ಮೆ ಜನರೇಟ್ ಆದ ವರ್ಚ್ಯುವಲ್ ಐಡಿ ನಿರ್ದಿಷ್ಟ ಸಮಯದವರೆಗೆ ಮಾನ್ಯವಾಗಿರುತ್ತದೆ. ಬಳಕೆದಾರರು ಹೊಸ ಐಡಿ ಜನರೇಟ್ ಮಾಡಿದ ಕೂಡಲೇ ಹಳೆಯ ವರ್ಚ್ಯುವಲ್ ಐಡಿ ಅಮಾನ್ಯವಾಗುತ್ತದೆ.
"ಆಧಾರ್ ಸಂಖ್ಯೆಯು ವ್ಯಕ್ತಿಯ ಸಂಪೂರ್ಣ ಜೀವಿತಾವಧಿಯಲ್ಲಿ ಬಳಕೆಯಾಗುವ ಶಾಶ್ವತ ಐಡಿಯಾಗಿರುವ ಕಾರಣ ಆಧಾರ್ ಸಂಖ್ಯೆ ಹಲವು ಡೇಟಾಬೇಸ್ಗಳಲ್ಲಿ ಸಂಗ್ರಹವಾಗುತ್ತದೆ. ಆದ್ದರಿಂದ ಈ ಆಧಾರ್ ಸಂಖ್ಯೆಯನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿ ಸಂರಕ್ಷಿಸುವ ಅಗತ್ಯವಿದ್ದು ಆಧಾರ್ ಸಂಖ್ಯೆ ಹೊಂದಿರುವವರು ಅದನ್ನು ಯಾವುದೇ ಸಂದೇಹ ಅಥವಾ ಭಯವಿಲ್ಲದೆ ಸದಾ ಬಳಸಲು ಸೂಕ್ತ ವ್ಯವಸ್ಥೆಯನ್ನು ರೂಪಿಸಿವುದು ಅಗತ್ಯವಾಗಿದೆ" ಎಂದು UIDAI ತಿಳಿಸಿದೆ.
ಹಾಗೆಯೇ ಆಧಾರ್ ಸಂಖ್ಯೆ ಹೊಂದಿರುವವರು ಅದನ್ನು ಅಗತ್ಯ ಸೇವೆಗಳನ್ನು ಪಡೆಯಲು ಬಳಸುವಂತಾಗಬೇಕು ಎನ್ನುವುದು ಎಷ್ಟು ಮುಖ್ಯವೋ ಬೇರೆ ಬೇರೆ ಸಂಸ್ಥೆಗಳು ಅದನ್ನು ತಮ್ಮ ಡೇಟಾಬೇಸ್ಗಳಲ್ಲಿ ಸಂಗ್ರಹಿಸುವಾಗ ಜನರ ಗೌಪ್ಯತೆಗೆ ಧಕ್ಕೆಬರಬಾರದು ಎನ್ನುವುದು ಅಷ್ಟೇ ಮುಖ್ಯವಾಗುತ್ತದೆ ಎಂದು UIDAI ತಿಳಿಸಿದೆ.


Click it and Unblock the Notifications








