ಹೊಸ ವರ್ಷದ ಆರಂಭದಲ್ಲೇ ಭಾರತೀಯರ ಕ್ಷಮೆ ಯಾಚಿಸಿದ ವಾಟ್ಸಾಪ್!;ಕಾರಣ?
ಪ್ರಮುಖ ಮೆಸೆಜಿಂಗ್ ಪ್ಲಾಟ್ಫಾರ್ಮ್ ಆದ ವಾಟ್ಸಾಪ್ ಮೂಲಕ ಬಳಕೆದಾರರು ಹೊಸ ವರ್ಷಕ್ಕೆ ತಮ್ಮದೇ ಆದ ರೀತಿಯಲ್ಲಿ ಬೇಕಾದವರಿಗೆ ಶುಭಾಶಯ ಕೋರಿದ್ದಾರೆ. ಹಾಗೆಯೇ ಹೊಸ ವರ್ಷದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಗೆ ಮಾಡಲು ವಾಟ್ಸಾಪ್ನಲ್ಲಿ ವಿಶೇಷ ಸ್ಟಿಕ್ಕರ್ ಆಯ್ಕೆ ಸಹ ನೀಡಲಾಗಿತ್ತು. ಈ ಮೂಲಕ ಹೊಸ ವರ್ಷಕ್ಕೆ ವಾಟ್ಸಾಪ್ ಸಹ ಜೊತೆಯಾಗಿದ್ದು ಒಂದು ವಿಶೇಷವಾದರೆ ಭಾರತೀಯರು ಬೇಸರ ಪಡುವಂತಹ ಕೆಲಸವನ್ನು ವಾಟ್ಸಾಪ್ ಮಾಡಿರುವುದು ಮತ್ತೊಂದು ಘಟನೆಯಾಗಿದೆ.

ಹೌದು, ವಾಟ್ಸಾಪ್ ಅನ್ನು ಭಾರತದಲ್ಲಿ ಬಹು ಸಂಖ್ಯೆಯಲ್ಲಿ ಬಳಕೆ ಮಾಡಲಾಗುತ್ತದೆ. ಅದರಲ್ಲೂ ವಯಕ್ತಿಕ, ಶಿಕ್ಷಣ ಹಾಗೂ ಈ ಔದ್ಯೋಗಿಕವಾಗಿಯೂ ಇದನ್ನು ಬಳಕೆ ಮಾಡುವುದರಿಂದ ಭಾರತೀಯರಿಗೆ ವಾಟ್ಸಾಪ್ ಬಗ್ಗೆ ವಿಶೇಷವಾದ ಗೌರವ ಇದೆ. ಆದರೆ, ವಾಟ್ಸಾಪ್ ಮಾತ್ರ ಭಾರತೀಯರ ಭಾವನೆಗೆ ಧಕ್ಕೆ ತಂದು ನಂತರ ಕ್ಷಮೆಯಾಚಿಸಿದೆ. ಹಾಗಿದ್ರೆ ಭಾರತೀಯರು ವಾಟ್ಸಾಪ್ನ ಯಾವ ಕೆಲಸಕ್ಕೆ ಬೇಸರವಾಗಿದ್ದರು ನಂತರ ಆಗಿದ್ದೇನು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಓದಿರಿ.

ವಾಟ್ಸಾಪ್ ಮಾಡಿದ ತಪ್ಪೇನು?
ಹೊಸ ವರ್ಷದ ಮುನ್ನಾದಿನ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ವಾಟ್ಸಾಪ್ ಗ್ರಾಫಿಕ್ಸ್ ಅನ್ನು ಶೇರ್ ಮಾಡಿಕೊಂಡಿತ್ತು. ಅದರಲ್ಲಿ ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರದ ಪ್ರದೇಶಗಳನ್ನು ಮತ್ತು ಚೀನಾ ಹಕ್ಕು ಸಾಧಿಸಿದ ಕೆಲವು ಪ್ರದೇಶಗಳನ್ನು ತೋರಿಸಲಾಗಿರಲಿಲ್ಲ. ಈ ಮೂಲಕ ಈ ಪ್ರದೇಶಗಳು ಭಾರತೀಯರಿಗೆ ಸೇರಿದ್ದಲ್ಲ ಎನ್ನುವುದನ್ನು ತೋರಿಸಿದಂತಿತ್ತು.

ಎಲೆಕ್ಟ್ರಾನಿಕ್ಸ್
ಈ ಸಂಬಂಧ ತಕ್ಷಣವೇ ಎಚ್ಚೆತ್ತ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಅವರು ಟ್ವೀಟ್ ಮಾಡುವ ಮೂಲಕ ವಾಟ್ಸಾಪ್ ತನ್ನ ತಪ್ಪನ್ನು ತಿದ್ದಿಕೊಳ್ಳುವಂತೆ ಮಾಡಿದ್ದಾರೆ. ಆತ್ಮೀಯ ವಾಟ್ಸಾಪ್ ದಯವಿಟ್ಟು ಭಾರತ ನಕ್ಷೆಯ ದೋಷವನ್ನು ಆದಷ್ಟು ಬೇಗ ಸರಿಪಡಿಸಿ. ಭಾರತದಲ್ಲಿ ವ್ಯಾಪಾರ ಮಾಡುವ ಮತ್ತು ಭಾರತದಲ್ಲಿ ವ್ಯಾಪಾರವನ್ನು ಮುಂದುವರಿಸಲು ಬಯಸುವ ಎಲ್ಲಾ ಪ್ಲಾಟ್ಫಾರ್ಮ್ಗಳು ಸರಿಯಾದ ನಕ್ಷೆಗಳನ್ನು ಬಳಸಬೇಕು ಎಂದು ಬರೆದಿದ್ದರು.

ವಾಟ್ಸಾಪ್ನ ಈ ತಪ್ಪನ್ನು ಉಲ್ಲೇಖಿಸಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ವಾಟ್ಸಾಪ್ ಅನ್ನು ಎಚ್ಚರಿಸಿದ ನಂತರ ವಿರೂಪಗೊಳಿಸಿದ ನಕ್ಷೆಯನ್ನು ಬಳಕೆ ಮಾಡಿದ್ದಕ್ಕಾಗಿ ವಾಟ್ಸಾಪ್ ಕ್ಷಮೆಯಾಚಿಸಿದೆ.

ವಾಟ್ಸಾಪ್ ಹೇಳಿದ್ದೇನು?
ಉದ್ದೇಶಪೂರ್ವಕವಲ್ಲದ ದೋಷವನ್ನು ಸೂಚಿಸಿದ್ದಕ್ಕಾಗಿ ಸಚಿವರಿಗೆ ಧನ್ಯವಾದಗಳು; ನಾವು ತಕ್ಷಣವೇ ಸ್ಟ್ರೀಮ್ ಅನ್ನು ತೆಗೆದುಹಾಕಿದ್ದೇವೆ, ಕ್ಷಮೆಯಾಚಿಸುತ್ತೇವೆ. ಭವಿಷ್ಯದಲ್ಲಿ ನಾವು ಜಾಗರೂಕರಾಗಿರುತ್ತೇವೆ ಎಂದು ಚಂದ್ರಶೇಖರ್ ಅವರ ಟ್ವೀಟ್ಗೆ ವಾಟ್ಸಾಪ್ ಪ್ರತಿಕ್ರಿಯಿಸಿದೆ. ಈ ಮೂಲಕ ವಾಟ್ಸಾಪ್ ಹೊಸ ವರ್ಷದ ಆರಂಭದಲ್ಲೇ ಒಂದು ದೊಡ್ಡ ತಪ್ಪನ್ನು ಮಾಡಿ ಕೆಲವೇ ಸಮಯದಲ್ಲಿ ತಿದ್ದುಕೊಂಡು ಭಾರತೀಯರ ಕ್ಷಮೆಯಾಚಿಸಿದೆ.

ಜೂಮ್ ಸಿಇಒ ಎರಿಕ್ ಯುವಾನ್ ಕೂಡ ಇದೇ ತಪ್ಪು ಮಾಡಿದ್ದರು
ಕೆಲವು ದಿನಗಳ ಹಿಂದಷ್ಟೇ ಜೂಮ್ ಆಪ್ನ ಸಿಇಒ ಎರಿಕ್ ಯುವಾನ್ ಕೂಡ ಈ ರೀತಿ ತಪ್ಪನ್ನು ಮಾಡಿದ್ದರು. ಈ ತಪ್ಪನ್ನು ತಿದ್ದಿಕೊಳ್ಳಲು ಹೇಳಿದ್ದು ಸಹ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್. ಈ ಬಗ್ಗೆ ಟ್ವೀಟ್ ಮಾಡಿದ್ದ ಅವರು ಸರಿಯಾದ ಮ್ಯಾಪ್ ಬಳಕೆ ಮಾಡಿ ಎಂದು ಸೂಚಿಸಿದ್ದರು, ಅದರಂತೆ ಕ್ಷಮೆಯಾಚಿಸಿದ ಯುವಾನ್ ಆ ಟ್ವೀಟ್ ಅನ್ನು ರಿಮೂವ್ ಮಾಡಿ ತಮ್ಮ ತಪ್ಪಿನ ಬಗ್ಗೆ ಬರೆದಿದ್ದರು.

ಭಾರತದ ತಪ್ಪಾದ ನಕ್ಷೆ ಬಳಕೆ ಮಾಡಿದರೆ ಏನಾಗುತ್ತದೆ?
ಭಾರತ ತನ್ನದೇ ಆದ ಕಾನೂನುಗಳನ್ನು ಹೊಂದಿದ್ದು, ಈ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಸಾರಿಕೊಂಡು ಬರುತ್ತಿದೆ. ಅದಾಗ್ಯೂ ಭಾರತದಲ್ಲಿನ ಘನತೆಗೆ ಧಕ್ಕೆ ಉಂಟಾಗುವ ಈ ಕೆಲಸಗಳನ್ನು ಯಾರೇ ಮಾಡಿದರೂ ಸಹ ಅವರು ಸರಿಯಾದ ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಂದರೆ ಯಾರು ಭಾರತದ ನಕ್ಷೆಯನ್ನು ತಪ್ಪಾಗಿ ಚಿತ್ರಿಸಿದ್ದಾರೋ ಅಥವಾ ತಪ್ಪಾದ ನಕ್ಷೆಯನ್ನು ಬಳಕೆ ಮಾಡಿದ್ದಾರೋ ಅವರಿಗೆ ದಂಡಾರ್ಹ ಶಿಕ್ಷೆ ವಿಧಿಸಲಾಗುತ್ತದೆ.


Click it and Unblock the Notifications








