ಗೂಗಲ್ನಿಂದ ಭಾರತದಲ್ಲಿ ಹೊಸ ಕ್ರಮ; ಸುಳ್ಳು ಸುದ್ದಿ ನಿಯಂತ್ರಣಕ್ಕೆ ನೂತನ ಪ್ಲ್ಯಾನ್!
ಸಾಮಾನ್ಯವಾಗಿ ಏನಾದರೂ ಮಾಹಿತಿ ಬೇಕು ಎಂದರೆ ಬಹುಪಾಲು ಮಂದಿ ವಾಟ್ಸಾಪ್, ಗೂಗಲ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಸೇರಿಂದಂತೆ ಇನ್ನಿತರೆ ಪ್ಲಾಟ್ಫಾರ್ಮ್ಗಳ ಕಡೆ ಮುಖ ಮಾಡುತ್ತಾರೆ. ಅದರಲ್ಲೂ ಅದೆಷ್ಟೋ ಮಂದಿ ಇಲ್ಲಿ ಪ್ರಸಾರವಾಗುವ ಎಲ್ಲಾ ಮಾಹಿತಿಯೂ ಸಹ ಸತ್ಯ ಎಂದು ಭಾವಿಸುವುದುಂಟು. ಹಾಗೆಯೇ ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಅಥವಾ ಸಮಾಜದಲ್ಲಿ ಕೆಟ್ಟ ವ್ಯವಸ್ಥೆ ನಿರ್ಮಾಣ ಮಾಡಲು, ಅಥವಾ ಮೋಜಿಗಾಗಿ ಸುಳ್ಳುಸುದ್ದಿ ಪ್ರಕಟಿಸುವುದುಂಟು. ಇದಕ್ಕೆಲ್ಲ ಕಡಿವಾಣ ಹಾಕಲು ಗೂಗಲ್ ಮುಂದಾಗಿದೆ.

ಹೌದು, ಗೂಗಲ್ನ ಅಂಗಸಂಸ್ಥೆ ಜಿಗ್ಸಾ ಭಾರತದಲ್ಲಿ ತಪ್ಪು ಮಾಹಿತಿ ವಿರೋಧಿ ಯೋಜನೆಯನ್ನು (Anti-Misinformation Project ) ಪ್ರಾರಂಭಿಸುತ್ತಿದೆ. ಈ ಮೂಲಕ ತಪ್ಪು ಮಾಹಿತಿಯಿಂದ ಭಾರತದ ಜನರನ್ನು ರಕ್ಷಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಹಾಗಿದ್ರೆ, ಹೇಗೆಲ್ಲಾ ಈ ಸುಳ್ಳುಸುದ್ದಿಗಳಿಗೆ ಗೂಗಲ್ ಕಡಿವಾಣ ಹಾಕಲಿದೆ. ಈ ಯೋಜನೆಯ ಸ್ವರೂಪ ಏನು ಎಂಬಿತ್ಯಾದಿ ಮಾಹಿತಿಯನ್ನು ಇಲ್ಲಿ ವಿವರಿದ್ದೇವೆ ಓದಿರಿ.

ಪ್ರೀ ಬಂಕಿಂಗ್ ವಿಡಿಯೋ
ಈ ಉಪಕ್ರಮಕ್ಕೆ ಗೂಗಲ್ ಪ್ರೀ ಬಂಕಿಂಗ್ ವಿಡಿಯೋಗಳನ್ನು ಬಳಕೆ ಮಾಡಲು ಮುಂದಾಗಿದೆ. ಈ ವಿಡಿಯೋಗಳನ್ನು ಯಾವುದೇ ಪ್ಲಾಟ್ಫಾರ್ಮ್ನಲ್ಲಿ ವೈರಲ್ ಮಾಡುವ ಮುನ್ನ ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಹಕ್ಕುಗಳನ್ನು ಎದುರಿಸಲು ವಿನ್ಯಾಸಗೊಳಿಸಲಾಗಿದೆ. ಅಂತೆಯೇ ಯೂಟ್ಯೂಬ್ ಪ್ಲಾಟ್ಫಾರ್ಮ್ ಮತ್ತು ಇತರ ಸಾಮಾಜಿಕ ಮಾಧ್ಯಮ ಸೈಟ್ಗಳ ಮೂಲಕ ಇವುಗಳನ್ನು ಜನರಿಗೆ ತಲುಪಿಸಲಾಗುತ್ತದೆ.

ಗೂಗಲ್ನ ತಪ್ಪು ಮಾಹಿತಿ ವಿರೋಧಿ ಯೋಜನೆ ಎಂದರೇನು?
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಪ್ರಕರಣವನ್ನು ಆಧಾರವಾಗಿರಿಸಿಕೊಂಡು ಗೂಗಲ್ ಇತ್ತೀಚೆಗೆ ಯುರೋಪ್ನಲ್ಲಿ ಈ ಸಂಬಂಧ ಒಂದು ಪ್ರಯೋಗವನ್ನು ನಡೆಸಿತ್ತು. ಇಂಟರ್ನೆಟ್ ಬಳಕೆ ಮಾಡುವ ನಿರಾಶ್ರಿತರ ವಿರೋಧಿ ನಿರೂಪಣೆಗಳನ್ನು ಎದುರಿಸುವುದು ಈ ಯೋಜನೆಯ ಭಾಗವಾಗಿತ್ತು. ಹಾಗೆಯೇ ಇದೇ ಪ್ರಯೋಗವನ್ನು ಭಾರತದಲ್ಲಿ ನಡೆಸಿದರೆ, ಭಾರತದಲ್ಲಿನ ಬಹು ಸ್ಥಳೀಯ ಭಾಷೆಗಳು ಹಾಗೂ ಒಂದು ಬಿಲಿಯನ್ಗಿಂತಲೂ ಹೆಚ್ಚು ಜನಸಂಖ್ಯೆಯ ಕಾರಣದಿಂದಾಗಿ ಈ ಪ್ರಾಯೋಗಿಕತೆ ಉಪಯೋಗ ಆಗುತ್ತದೆ ಎಂದು ಕಂಡುಕೊಂಡಿದೆ.

ಭಾರತದಲ್ಲಿ ಈ ಪ್ರಯೋಗ ಬಹು ವಿಸ್ತಾರವಾದುದು
ಭಾರತದಲ್ಲಿ, ಕನ್ನಡ, ಬಂಗಾಳಿ, ಹಿಂದಿ ತಮಿಳು, ಮಲಯಾಳಂ ಮತ್ತು ಮರಾಠಿ ಸೇರಿದಂತೆ ಹಲವು ಭಾಷೆಗಳನ್ನು ಬಳಸುವುದರಿಂದ ಈ ಪ್ರಯತ್ನವು ತುಂಬಾ ದೊಡ್ಡದಾಗಿದೆ. ಹಾಗೆಯೇ ಈ ಅಭಿಯಾನವು ವಿವಿಧ ಸಮುದಾಯಗಳಾಗಿ ವಿಭಜಿತವಾಗಿರುವ ಒಂದು ಶತಕೋಟಿಗೂ ಹೆಚ್ಚು ಜನರ ನಡುವೆ ನಡೆಯುತ್ತದೆ ಎಂದು ಗೂಗಲ್ ತಿಳಿಸಿದೆ.

ಜಿಗ್ಸಾ ಹೇಳಿದ್ದೇನು?
ಜಾಗತಿಕ ದಕ್ಷಿಣ ಮಾರುಕಟ್ಟೆಯಲ್ಲಿ ಪ್ರೀ ಬಂಕಿಂಗ್ ಅನ್ನು ಸಂಶೋಧಿಸಲು ನಮಗೆ ಅವಕಾಶ ಲಭಿಸಿದೆ ಎಂದು ಜಿಗ್ಸಾದ ಸಂಶೋಧನೆ ಮತ್ತು ಅಭಿವೃದ್ಧಿಯ ಮುಖ್ಯಸ್ಥ ಬೆತ್ ಗೋಲ್ಡ್ಮನ್ ಮಾಹಿತಿ ನೀಡಿದ್ದಾರೆ. ಇತರೆ ದೇಶಗಳಂತೆ, ಭಾರತದಲ್ಲಿಯೂ ತಪ್ಪು ಮಾಹಿತಿಯು ಬಹಳ ವೇಗವಾಗಿ ಹರಡುತ್ತಿದೆ. ಇದರಲ್ಲಿ ಸಾಮಾಜಿಕ ಮಾಧ್ಯಮದ ಕೈವಾಡ ದೊಡ್ಡದಿದೆ ಹಾಗೂ ಇದರಿಂದಾಗಿ ಕೆಲವೊಮ್ಮೆ ರಾಜಕೀಯ ಮತ್ತು ಧಾರ್ಮಿಕ ಉದ್ವಿಗ್ನತೆಯೂ ಹರಡುತ್ತದೆ ಎಂದು ತಿಳಿಸಿದ್ದಾರೆ.

ಸರ್ಕಾರದದಿಂದ ಮನವಿ
ಈಗಾಗಲೇ ಭಾರತದಲ್ಲಿ ಇಂತಹ ಪ್ರಕರಣಗಳನ್ನು ಎದುರಿಸುತ್ತಿರುವ ಸರ್ಕಾರ ನಕಲಿ ಸುದ್ದಿಗಳ ಹರಡುವಿಕೆಯ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುಬೇಕೆಂದು ಗೂಗಲ್, ಮೆಟಾ ಮತ್ತು ಟ್ವಿಟರ್ನಂತಹ ಟೆಕ್ ಕಂಪೆನಿಗಳಿಗೆ ಆಗಾಗ್ಗೆ ಒತ್ತಾಯಿಸುತ್ತಲೇ ಇರುತ್ತದೆ. ಇದರ ನಡುವೆಯೇ ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತಪ್ಪು ಮಾಹಿತಿ ಪ್ರಸಾರ ಮಾಡುವ ಯೂಟ್ಯೂಬ್ ಚಾನೆಲ್ಗಳು ಮತ್ತು ಕೆಲವು ಟ್ವಿಟರ್ ಮತ್ತು ಫೇಸ್ಬುಕ್ ಖಾತೆಗಳನ್ನು ನಿರ್ಬಂಧಿಸಲು ತನ್ನ ಅಸಾಧಾರಣ ಅಧಿಕಾರವನ್ನು ಆಗಾಗ್ಗೆ ಬಳಕೆ ಮಾಡುತ್ತಿರುವುದನ್ನು ನಾವು ಗಮನಿಸಬಹುದು.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ನಿರಂತರವಾಗಿರುತ್ತವೆ
ಮೆಟಾ ಮಾಲೀಕತ್ವದ ವಾಟ್ಸಾಪ್ ಮೂಲಕವೂ ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸಲಾಗುತ್ತದೆ. 2018 ರಲ್ಲಿ ವಾಟ್ಸಾಪ್ ಭಾರತದಲ್ಲಿ 300 ಮಿಲಿಯನ್ ಬಳಕೆದಾರರನ್ನು ಹೊಂದಿತ್ತು. ಸರ್ಕಾರದ ಕಟ್ಟುನಿಟ್ಟಿನ ನಂತರ, ಕಂಪೆನಿಯು ಎಷ್ಟು ಜನರಿಗೆ ಮೆಸೆಜ್ಅನ್ನು ಫಾರ್ವರ್ಡ್ ಮಾಡಬಹುದು ಎಂಬುದರ ಮೇಲೆ ಕೆಲವು ನಿರ್ಬಂಧಗಳನ್ನು ಹಾಕಿದೆ. ಇದರಲ್ಲಿ ಪ್ರಮುಖ ವಿಷಯ ಎಂದರೆ ಈ ಸುಳ್ಳುಸುದ್ದಿಯಿಂದ ಹತ್ತಾರು ಜನರನ್ನು ಥಳಿಸಿ ಹತ್ಯೆ ಮಾಡಲಾಗಿದೆ. ಅದರಲ್ಲಿ ಕೆಲವರು ಮಕ್ಕಳನ್ನು ಅಪಹರಣ ಮಾಡುತ್ತಿದ್ದಾರೆ ಎಂಬ ಸುಳ್ಳು ಸುದ್ದಿ ನಂಬಿ ಹತ್ಯೆ ಮಾಡಿದ್ದ ವರದಿಗಳು ಭಾರತದಲ್ಲಿ ಪ್ರಸಾರವಾಗಿದ್ದನ್ನು ನೀವು ನೆನಪಿಸಿಕೊಳ್ಳಬಹುದು.

ಇದು ಹೇಗೆ ಕೆಲಸ ಮಾಡುತ್ತದೆ ?
ಜರ್ಮನ್ನ ಆಲ್ಫ್ರೆಡ್ ಲ್ಯಾಂಡೆಕರ್ ಫೌಂಡೇಶನ್, ಲೋಕೋಪಕಾರಿ ಹೂಡಿಕೆ ಕಂಪೆನಿ ಒಮಿಡಿಯಾ ನೆಟ್ವರ್ಕ್ ಇಂಡಿಯಾ ಮತ್ತು ಹಲವಾರು ಸಣ್ಣ ಪ್ರಾದೇಶಿಕ ಪಾಲುದಾರರ ಸಹಾಯದಿಂದ ಜಿಗ್ಸಾ ಮೂರು ಭಾಷೆಗಳಲ್ಲಿ ಐದು ವಿಡಿಯೋಗಳನ್ನು ಈಗಾಗಲೇ ತಯಾರು ಮಾಡಿದೆ. ಈ ವೀಡಿಯೊಗಳನ್ನು ವೀಕ್ಷಿಸಿದ ನಂತರ, ವೀಕ್ಷಕರಿಗೆ ಫಾರ್ಮ್ ಅನ್ನು ಭರ್ತಿ ಮಾಡಲು ವಿನಂತಿಸಲಾಗುತ್ತದೆ. ಈ ಮೂಲಕ ತಪ್ಪು ಮಾಹಿತಿಯ ಬಗ್ಗೆ ಅವರು ಕಲಿತದ್ದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಲಾಗುತ್ತದೆ.

ಇತ್ತೀಚೆಗೆ ಕಂಪೆನಿಯು ಈ ಬಗ್ಗೆ ಸಂಶೋಧನೆ ನಡೆಸಿದಾಗ, ಈ ವೀಡಿಯೊಗಳನ್ನು ವೀಕ್ಷಿಸಿದ ನಂತರ ಪ್ರೇಕ್ಷಕರು ತಪ್ಪು ಮಾಹಿತಿಯನ್ನು ಗುರುತಿಸುವ ಸಾಮರ್ಥ್ಯವನ್ನು ಐದು ಪ್ರತಿಶತದಷ್ಟು ಹೆಚ್ಚಿಗೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.


Click it and Unblock the Notifications








