ಭದ್ರತಾ ದೃಷ್ಟಿಯಿಂದ ಭಾರತೀಯ ಬ್ಯಾಂಕ್ಗಳಲ್ಲಿ ಶೀಘ್ರದಲ್ಲೇ ಈ ವ್ಯವಸ್ಥೆ ಜಾರಿ!: ವರದಿ
ಇಂದು ಎಲ್ಲವೂ ಡಿಜಿಟಲೀಕರಣವಾಗಿದೆ. ಅದರಲ್ಲೂ ಡಿಜಿಟಲ್ ಪಾವತಿ ಪ್ರಕ್ರಿಯೆ ಹೆಚ್ಚು ಜನಪ್ರಿಯಗೊಳ್ಳುತ್ತಿದ್ದು, ಇದರ ನಡುವೆ ಹಲವಾರು ಮೋಸದ ಪ್ರಕರಣಗಳೂ ಸಹ ಜರುಗುತ್ತಿವೆ. ಅಂತೆಯೇ ಬ್ಯಾಂಕ್ ವ್ಯವಸ್ಥೆಯಲ್ಲಿ ಹೊಸ ಭದ್ರತಾ ಸಂಬಂಧಿ ಬದಲಾವಣೆಗಳು ಜರುಗುತ್ತಿದ್ದು, ಭಾರತೀಯ ಬ್ಯಾಂಕ್ಗಳು ಹೊಸ ಫೀಚರ್ಸ್ ಅನ್ನು ಬಳಕೆ ಮಾಡಿಕೊಂಡು ಮುಂದೆ ಎದುರಾಗುವ ವಂಚನೆ ಪ್ರಕರಣಗಳನ್ನು ಕಡಿಮೆ ಮಾಡಲಿದೆ.

ಹೌದು, ಸ್ಮಾರ್ಟ್ಫೋನ್ ಹಾಗೂ ಇನ್ನಿತರೆ ಸ್ಮಾರ್ಟ್ಡಿವೈಸ್ಗಳಿಗೆ ಭದ್ರತೆ ದೃಷ್ಟಿಯಿಂದ ಹೇಗೆ ಮುಖ ಗುರುತಿಸುವಿಕೆ ಫೀಚರ್ಸ್ ಅನ್ನು ಪರಿಚಯಿಸಲಾಗಿದೆಯೋ ಅದೇ ಶೈಲಿಯಲ್ಲಿ ಇನ್ಮುಂದೆ ಬ್ಯಾಂಕ್ ವ್ಯವಹಾರದಲ್ಲೂ ಸಹ ಮುಖ ಗುರುತಿಸುವಿಕೆ ಸೌಲಭ್ಯ ನೀಡಲಾಗುತ್ತಿದೆ. ಹಾಗಿದ್ರೆ, ಇದು ಹೇಗೆ ಕೆಲಸ ಮಾಡಲಿದೆ?, ಇದರಿಂದ ಆಗುವ ಪ್ರಮುಖ ಉಪಯೋಗ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ನಿರ್ದಿಷ್ಟ ವಾರ್ಷಿಕ ಮಿತಿಯನ್ನು ಮೀರಿದ ವೈಯಕ್ತಿಕ ವಹಿವಾಟುಗಳನ್ನು ಪರಿಶೀಲನೆ ಮಾಡುವ ಉದ್ದೇಶದಿಂದ ಹಾಗೂ ವಂಚನೆ ಮತ್ತು ತೆರಿಗೆ ವಂಚನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೆಲವು ಸಂದರ್ಭಗಳಲ್ಲಿ ಮುಖ ಗುರುತಿಸುವಿಕೆ ಮತ್ತು ಐರಿಸ್ ಸ್ಕ್ಯಾನ್ ಅನ್ನು ಬಳಕೆ ಮಾಡಲು ಭಾರತ ಸರ್ಕಾರವು ಬ್ಯಾಂಕ್ಗಳಿಗೆ ಅವಕಾಶ ನೀಡುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈಗಾಗಲೇ ಕೆಲವು ದೊಡ್ಡ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕ್ಗಳು ಈ ಸೌಲಭ್ಯವನ್ನು ಈಗಾಗಲೇ ಬಳಕೆ ಮಾಡಿಕೊಳ್ಳುತ್ತಿವೆ ಎಂದು ತಿಳಿದುಬಂದಿದೆ. ಆದರೆ, ಈ ಪರಿಶೀಲನೆಯನ್ನು ಅನುಮತಿಸುವ ವಿಷಯ ಸಾರ್ವಜನಿಕವಾಗಿಲ್ಲ ಎಂದು ಸಂಬಂಧಿಸಿದ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ. ಹಾಗೆಯೇ ಈ ಪರಿಶೀಲನೆಯು ಕಡ್ಡಾಯವಲ್ಲ. ತೆರಿಗೆ ಉದ್ದೇಶಗಳಿಗಾಗಿ ಬಳಸಲಾಗುವ ಮತ್ತೊಂದು ಸರ್ಕಾರಿ ಗುರುತಿನ ಕಾರ್ಡ್, ಶಾಶ್ವತ ಖಾತೆ ಸಂಖ್ಯೆ (PAN) ಕಾರ್ಡ್ ಅನ್ನು ಬ್ಯಾಂಕ್ಗಳೊಂದಿಗೆ ಹಂಚಿಕೊಳ್ಳದ ಸಂದರ್ಭಗಳಲ್ಲಿ ಇದನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

ಗೌಪ್ಯತೆ ತಜ್ಞರಿಗೆ ಕಳವಳ
ಬ್ಯಾಂಕ್ಗಳು ಮುಖದ ಗುರುತಿಸುವಿಕೆಯನ್ನು ಬಳಸಲು ಮುಂದಾಗಿರುವುದು ಕೆಲವು ಗೌಪ್ಯತೆ ತಜ್ಞರನ್ನು ಕಳವಳಗೊಳಿಸಿದೆಯಂತೆ. ಯಾಕೆಂದರೆ ಇದು ಭಾರತದಲ್ಲಿ ಗೌಪ್ಯತೆ, ಸೈಬರ್ ಭದ್ರತೆ ಮತ್ತು ಮುಖ ಗುರುತಿಸುವಿಕೆಗೆ ಮೀಸಲಾದ ಕಾನೂನಿನ ಕೊರತೆ ಇದ್ದು, ಇದು ಗಣನೀಯ ಗೌಪ್ಯತೆ ಕಾಳಜಿಯನ್ನು ಹುಟ್ಟುಹಾಕುತ್ತದೆ ಎಂದು ವಕೀಲ ಮತ್ತು ಸೈಬರ್ ಕಾನೂನು ತಜ್ಞ ಪವನ್ ದುಗ್ಗಲ್ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆ ನಡುವೆ ಕೆಲವೇ ತಿಂಗಳಲ್ಲಿ ಹೊಸ ಗೌಪ್ಯತೆ ಕಾನೂನಿಗೆ ಸಂಸತ್ತಿನ ಅನುಮೋದನೆಯನ್ನು ಪಡೆದುಕೊಳ್ಳಲು ಸರ್ಕಾರ ಮುಂದಾಗಲಿದೆ ಎಂದು ತಿಳಿದುಬಂದಿದೆ. ಹಾಗೆಯೇ ಹೊಸ ಕ್ರಮದ ಆಧಾರದ ಮೇಲೆ ಠೇವಣಿ ಮಾಡುವ ವ್ಯಕ್ತಿಗಳ ಗುರುತುಗಳನ್ನು ಪರಿಶೀಲಿಸಲು ಆಧಾರ್ ಕಾರ್ಡ್ ಬಳಕೆ ಮಾಡಲಾಗುತ್ತದೆ. ಅದರಲ್ಲೂ 2 ಮಿಲಿಯನ್ ಹಣ ಪಾವತಿಗೆ ಇದು ಅವಶ್ಯಕವಾಗಿದ್ದು, ಈ ಆಧಾರ್ ಕಾರ್ಡ್ ಮೂಲಕ ಫಿಂಗರ್ಪ್ರಿಂಟ್, ಮುಖ ಮತ್ತು ಕಣ್ಣಿನ ಸ್ಕ್ಯಾನ್ಗೆ ಅನುವು ಮಾಡಿಕೊಡುತ್ತದೆ ಎನ್ನಲಾಗಿದೆ.

ಸರ್ಕಾರ ಹೇಳಿದ್ದೇನು?
ಡಿಸೆಂಬರ್ನಲ್ಲಿ ಭಾರತದ ಹಣಕಾಸು ಸಚಿವಾಲಯವು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಮೇಲೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಬ್ಯಾಂಕ್ಗಳನ್ನು ಕೇಳಿದ್ದು, ಇದು ಮುಖದ ಗುರುತಿಸುವಿಕೆ ಮತ್ತು ಐರಿಸ್ ಸ್ಕ್ಯಾನಿಂಗ್ ಮೂಲಕ ಪರಿಶೀಲನೆಯನ್ನು ಮಾಡಬೇಕೆಂದು ಸೂಚಿಸಿದೆ. ಅದೂ ಸಹ ವ್ಯಕ್ತಿಯ ಬೆರಳಚ್ಚು ದೃಢೀಕರಣವು ವಿಫಲವಾದರೆ ಮಾತ್ರ. ಅದರಲ್ಲೂ ಗಮನಿಸಬೇಕಾದ ಮಾಹಿತಿ ಏನೆಂದರೆ ಗ್ರಾಹಕರು ನಿರಾಕರಿಸಿದರೆ ಬ್ಯಾಂಕ್ಗಳು ಈ ಕಾರ್ಯಕ್ಕೆ ಮುಂದಾಗುವಂತಿಲ್ಲ.

ರಾಯಿಟರ್ಸ್ನ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಯುಐಡಿಎಐ ವಕ್ತಾರರು, ಆಧಾರ್ ಪರಿಶೀಲನೆ ಮತ್ತು ದೃಢೀಕರಣವು ಬಳಕೆದಾರರ ಸ್ಪಷ್ಟ ಒಪ್ಪಿಗೆಯೊಂದಿಗೆ ಮಾತ್ರ ಜರುಗುತ್ತದೆ. ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣದ ಬಳಕೆಯು ಸಂಭವನೀಯ ದುರುಪಯೋಗದಿಂದ ರಕ್ಷಿಸಲು ಸಹಾಯ ಮಾಡಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಹಾಗೆಯೇ ಫಿಂಗರ್ಪ್ರಿಂಟ್ ದೃಢೀಕರಣ ವಿಫಲವಾದರೆ ಮುಖ ಅಥವಾ ಐರಿಸ್ ದೃಢೀಕರಣಗಳನ್ನು ಬಳಸಲು UIDAI ನಿಯಮಿತವಾಗಿ ಎಲ್ಲಾ ದೃಢೀಕರಣ ಮತ್ತು ಪರಿಶೀಲನೆ ಘಟಕಗಳಿಗೆ ಸಲಹೆ ನೀಡುತ್ತದೆ. ದೃಢೀಕರಣ ಮತ್ತು ಪರಿಶೀಲನೆ ಎಂದರೆ ಡೇಟಾವನ್ನು ಸಂಗ್ರಹಿಸುವುದು ಎಂದಲ್ಲ ಎಂದು ತಿಳಿಸಿದ್ದಾರೆ.

ಕಳೆದ ಹಣಕಾಸು ವರ್ಷದಲ್ಲಿ 2 ಮಿಲಿಯನ್ ಗಳಿಗಿಂತ ಹೆಚ್ಚಿನ ಠೇವಣಿ ಅಥವಾ ಹಿಂಪಡೆಯುವಿಕೆಗಾಗಿ ಆಧಾರ್ ಕಾರ್ಡ್ ಅಥವಾ ಪ್ಯಾನ್ ಸಂಖ್ಯೆಯನ್ನು ನೀಡುವುದು ಕಡ್ಡಾಯಗೊಳಿಸಿದ ಸರ್ಕಾರದ ಆದೇಶದ ನಂತರ ಈ ಎಲ್ಲಾ ಬೆಳವಣಿಗೆ ಕಂಡುಬರುತ್ತಿವೆ.


Click it and Unblock the Notifications








