ಭಾರತದ ತಪ್ಪು ನಕ್ಷೆ ಬಳಕೆ; ಜೂಮ್ ಸಿಇಒಗೆ ಎಚ್ಚರಿಕೆ ನೀಡಿದ ಐಟಿ ಸಚಿವ
ಭಾರತದಲ್ಲಿ ಸಾಮಾಜಿಕ ಪ್ಲಾಟ್ಫಾರ್ಮ್ಗಳಾದ ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್, ವಾಟ್ಸಾಪ್, ಕೂ ಸೇರಿದಂತೆ ಇನ್ನಿತರೆ ಆಪ್ಗಳು ಭಾರತೀಯರ ಭಾವೈಕ್ಯತೆಗೆ ತಮ್ಮದೇ ಆದ ರೀತಿಯಲ್ಲಿ ಸೇವೆ ನೀಡುತ್ತಾ ಬರುತ್ತಿವೆ. ಅದಾಗ್ಯೂ ಈ ಪ್ಲಾಟ್ಫಾರ್ಮ್ಗಳಲ್ಲಿ ಕೆಲವು ಪೋಸ್ಟ್ಗಳು ಭಾರತೀಯರನ್ನು ಕೆರಳಿಸುವ ಮೂಲಕ ಸಂಚಲನ ಉಂಟು ಮಾಡಿವೆ. ಈ ಎಲ್ಲಾ ಕಾರಣಕ್ಕೆ ಎಲ್ಲಾ ಪ್ಲಾಟ್ಫಾರ್ಮ್ಗಳು ಸಹ ಹೆಚ್ಚಿನ ಭದ್ರತಾ ಫೀಚರ್ಸ್ಗಳನ್ನು ಪಡೆದುಕೊಳ್ಳುತ್ತಿವೆ. ಇದರ ನಡುವೆ ಜೂಮ್ ಆಪ್ನ ಸಿಇಒಗೆ ಭಾರತೀಯ ಐಟಿ ಸಚಿವರು ಎಚ್ಚರಿಕೆ ಸಂದೇಶವೊಂದನ್ನು ಟ್ವೀಟ್ ಮೂಲಕ ರವಾನಿಸಿದ್ದಾರೆ.

ಹೌದು, ಜೂಮ್ ಅಪ್ಲಿಕೇಶನ್ ಕ್ಲೌಡ್-ಆಧಾರಿತ ವಿಡಿಯೋ ಕಾನ್ಫರೆನ್ಸಿಂಗ್ ಸೇವೆಯಾಗಿದ್ದು, ನೀವು ಇತರರೊಂದಿಗೆ ಸಂಭಾಷಣೆ ನಡೆಸಲು ಬಳಕೆ ಮಾಡಿಕೊಳ್ಳಬಹುದು. ಅದರಲ್ಲೂ ಕೊರೊನಾ ನಂತರದಲ್ಲಿ ಇದರ ಬಳಕೆ ಹೆಚ್ಚಾಗಿಯೇ ಇದೆ. ಆದರೆ, ಜೂಮ್ನ ಸಿಇಒ ಯುವಾನ್ ಭಾರತೀಯರಿಗೆ ಬೇಸರ ಉಂಟಾಗುವ ಕೆಲಸವೊಂದನ್ನು ಮಾಡಿದ್ದು, ಐಟಿ ಸಚಿವರ ಎಚ್ಚರಿಕೆ ನಂತರ ಎಚ್ಚೆತ್ತುಕೊಂಡಿದ್ದಾರೆ. ಹಾಗಿದ್ರೆ, ಯುವಾನ್ ಮಾಡಿದ ಕೆಲಸ ಏನು? ಭಾರತೀಯರಿಗೆ ಯಾಕೆ ಸಿಟ್ಟು ಬರಿಸಿದ್ದರು, ಐಟಿ ಸಚಿವರು ಮಾಡಿದ್ದ ಟ್ವೀಟ್ನಲ್ಲಿ ಏನಿತ್ತು ಎಂಬಿತ್ಯಾದಿ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಓದಿರಿ.

ಯಡವಟ್ಟು ಕೆಲಸ ಮಾಡಿಕೊಂಡಿದ್ದ ಜೂಮ್ ಸಿಇಓ
ಜೂಮ್ ಸಿಇಓ ಟ್ವಿಟ್ಟರ್ನಲ್ಲಿ ಭಾರತದ ನಕ್ಷೆಯನ್ನು ಬಳಕೆ ಮಾಡಿದ್ದರು. ಅವರು ಹಂಚಿಕೊಂಡ ಟ್ವೀಟ್ ಪ್ರಪಂಚದಾದ್ಯಂತ ಸದ್ದು ಮಾಡಿದೆ. ದರಂತ ಎಂದರೆ ಹಂಚಿಕೊಂಡ ಮ್ಯಾಪ್ನಲ್ಲಿ ತಪ್ಪಾದ ಹಾಗೂ ವಿಕೃತ ನಕ್ಷೆಯನ್ನು ಬಳಕೆ ಮಾಡಿದ್ದಾರೆ. ಅದರಲ್ಲೂ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವನ್ನು ಆ ಮ್ಯಾಪ್ನಲ್ಲಿ ತೋರಿಸಲಾಗಿಲ್ಲ. ಇದು ಭಾರತೀಯರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದ್ದು, ಹಲವಾರು ಭಾರತೀಯರು ಟ್ವಿಟ್ಟರ್ನಲ್ಲಿ ಯುವಾನ್ ವಿರುದ್ಧ ಕಿಡಿಕಾರಿದ್ದರು.

ಎಚ್ಚರಿಕೆ ನೀಡಿದ ಭಾರತೀಯ ಐಟಿ ಸಚಿವರು
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಈ ಸಂಬಂಧ ಟ್ವೀಟ್ ಮೂಲಕ ಜೂಮ್ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎರಿಕ್ ಯುವಾನ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಯುವಾನ್ ಅವರನ್ನು ತಮ್ಮ ಟ್ವೀಟ್ನಲ್ಲಿ ಟ್ಯಾಗ್ ಮಾಡಿರುವ ಸಚಿವರು, ನೀವು ವ್ಯಾಪಾರ ಮಾಡುವ/ಬಯಸುವ ದೇಶಗಳ ಸರಿಯಾದ ನಕ್ಷೆಗಳನ್ನು ಬಳಕೆ ಮಾಡುವ ಬಗ್ಗೆ ಜಾಗರೂಕರಾಗಿರಬೇಕು ಎಂದು ಬರೆದಿದ್ದಾರೆ.

ಜೂಮ್ ಸಿಇಒ ಪ್ರತಿಕ್ರಿಯೆ ಏನು?
ಐಟಿ ಸಚಿವರ ಈ ಟ್ವೀಟ್ನಿಂದ ಎಚ್ಚೆತ್ತ ಜೂಮ್ ಸಿಇಒ, ದೋಷವನ್ನು ತೋರಿಸಿದ್ದಕ್ಕಾಗಿ ಐಟಿ ಸಚಿವರು ಮತ್ತು ಇತರರಿಗೆ ಧನ್ಯವಾದ. ನಿಮ್ಮಲ್ಲಿ ಅನೇಕರು ನಕ್ಷೆಯಲ್ಲಿ ಸಮಸ್ಯೆಗಳಿವೆ ಎಂದು ಸೂಚಿಸಿದ ನಂತರ ಆ ಟ್ವೀಟ್ ಅನ್ನು ನಾನು ಇತ್ತೀಚೆಗೆ ತೆಗೆದುಹಾಕಿದ್ದೇನೆ, ಪ್ರತಿಕ್ರಿಯೆಗಾಗಿ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ. ಇದಾದ ನಂತರ ಯುವಾನ್ ಅವರ ಟ್ವೀಟ್ಗೆ ಚಂದ್ರಶೇಖರ್ ಕೈಗಳನ್ನು ಮುಗಿಯುವ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ನಕ್ಷೆ ತಪ್ಪಾಗಿ ತೋರಿಸಿದ್ದು ಇದೇ ಮೊದಲಲ್ಲ
ಭಾರತದ ತಪ್ಪಾದ ನಕ್ಷೆಯನ್ನು ಜೂಮ್ ಕಂಪೆನಿಯಷ್ಟೇ ಅಲ್ಲದೆ ಈ ಹಿಂದೆ ಹಲವಾರು ಬಹುರಾಷ್ಟ್ರೀಯ ಕಂಪೆನಿಗಳು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಖ್ ಪ್ರದೇಶವನ್ನು ಹೊರತು ಪಡಿಸಿ ಪ್ರಚಾರಪಡಿಸಿವೆ. ಈ ರೀತಿಯ ಹಲವಾರು ಪ್ರಕರಣಗಳು ಜರುಗಿದ್ದು, ಭಾರತೀಯರು ಅವರಿಗೆ ಸರಿಯಾಗಿಯೇ ಬುದ್ದಿ ಕಲಿಸುತ್ತಾ ಬರುತ್ತಿದ್ದಾರೆ. ಹಾಗೆಯೇ ಭಾರತದ ಭೂಪಟದ ತಪ್ಪಾದ ಚಿತ್ರಣ ಬಳಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಕೆಲವು ಸಂದರ್ಭಗಳಲ್ಲಿ ದಂಡ ಮತ್ತು ಜೈಲು ಶಿಕ್ಷೆಗೂ ಹಲವರು ಗುರಿಯಾಗಿದ್ದಾರೆ.


Click it and Unblock the Notifications








